ಮುಂಬಯಿ, ಡಿ.09: ಬಳ್ಳಾರಿಯ ಮರಿಯಾ ನಗರದಲ್ಲಿನ ಆರೋಗ್ಯ ಮಾತೆ ಪುಣ್ಯಕ್ಷೇತ್ರದಲ್ಲಿ ಜರುಗಿಸಲಾದ ಅಂತರ್ ಧರ್ಮಿಯ ಸಮ್ಮೇಳನದ ಆಹ್ವಾನದ ಮೇರೆಗೆ ಮೂಡುಬಿದಿರೆ ಸ್ವಸ್ಥಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಬಳ್ಳಾರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶ್ರೀಗಳು ಬಳ್ಳಾರಿ ಧರ್ಮ ಪ್ರಾಂತ್ಯದ ಬಿಷಪ್ ರೈ| ರೆ| ಡಾ| ಹೆನ್ರಿ ಡಿಸೋಜಾ (ಮಂಗಳೂರು ಕಿನ್ನಿಗೋಳಿ ಮೂಲತಃ) ಅವರನ್ನು ಬೆಳ್ಳಾರಿ ಬಿಷಪ್ ಹೌಸ್ನಲ್ಲಿ ಭೇಟಿಗೈದರು. ಬಿಷಪ್ ಹಾಗೂ ಶ್ರೀಗಳು ಪರಸ್ಪರ ಸಾಂಪ್ರದಾಯಿಕವಾಗಿ ಗೌರವಿಸಿದರು. ಬಳಿಕ ಶ್ರೀಗಳು ಮತ್ತು ಬಿಷಪ್ ಅಂತರ್ ಧರ್ಮಿಯ ಸೌಹಾರ್ದ ಬಗ್ಗೆ ಪರಸ್ಪರ ಮಾತನಾಡಿ ಕುಶಲೋಪರಿಯಲ್ಲಿ ತೊಡಗಿಸಿ ಅಖಂಡ ಸಮಾಜದಲ್ಲಿನ ಶಾಂತಿ ಸೌಹಾರ್ದತಾ ಬಾಳಿಗೆ ಪರಸ್ಪರ ಅನುಗ್ರಹಿಸಿದರು.
ಈ ಸಂಧರ್ಭ ಬಿಷಪ್ ಕಛೇರಿಯ ಪಿಆರ್ಓ ಫಾ| ಐವನ್ ಪಿಂಟೊ (ಮಿಯ್ಯಾರ್ ಕುಂಟಿಬೈಲ್ ಮೂಲತಃ ಮೂಡುಬಿದಿರೆ ಶ್ರೀಗಳ ಪೂರ್ವಾಶ್ರಮದ ಸಹಪಾಠಿ), ಗಜರಾಜ್ ಜೈನ್, ವಿಜಯ ನಗರ ಶ್ರೀಕೃಷ್ಣ ದೇವರಾಯ ಉಪ ಕುಲಪತಿ ಪೆÇ್ರ| ಸಿದ್ದು ಪಿ.ಅಲಗೂರ್, ಶ್ರೀ ನಡುವಿನ ಮನೆ ಪುನಿತ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.