ಜಾನಪದ ಶೈಲಿಯ ಭಕ್ತಿಪ್ರದವಾದ ತುಳಸೀ ಸಂಕೀರ್ತನೆ ಕಾರ್ಯಕ್ರಮ
ಮುಂಬಯಿ, ಡಿ.27: ಕ್ರಿಸ್ತಶಕ 1480-1600ರಲ್ಲಿ ಬಾಳಿದ ಸೋದೆ ಮಠದ ವಾದಿರಾಜ ಯತಿಗಳು ವೇದಾಂತಿ, ಸಾಹಿತಿ, ಕನ್ನಡ, ಸಂಸ್ಕøತ ಮತ್ತು ತುಳು ಭಾಷೆಗಳಲ್ಲಿ ಪ್ರಭುತ್ವವನ್ನು ಪಡೆದ ಸನ್ಯಾಸಿ ಆಗಿದ್ದರು. ಜನ ಸಾಮಾನ್ಯರ ಮಟ್ಟಕ್ಕಿಳಿದು ಅವರಿಗಾಗಿ ಸರಳ ಶೈಲಿಯಲ್ಲಿ ಲಕ್ಷ್ಮೀ ಶೋಭಾನ ತುಳು ಭಾಷೆಯಲ್ಲಿ, ದಶಾವತಾರದ ಪದ್ಯ `ಲೇಲೇಲೇಲೇ ಕಂಡು ಲೇಲೇಲೆಗ-ಉಪ್ಪು ನೀರ ಕಡಲ ಕಟ್ಟಕಟ್ಟಿ ನೇರ್ಗ' ಇತ್ಯಾದಿ ಕೃತಿಗಳನ್ನು ರಚಿಸಿದ್ದು ಮಾತ್ರವಲ್ಲದೆ ಜಾನಪದ ಶೈಲಿಯಲ್ಲಿ ಭಕ್ತಿಪ್ರದವಾದ ತುಳಸೀ ಸಂಕೀರ್ತನೆಯನ್ನು ಹಯವದನ ಅನ್ನುವ ಕಾವ್ಯ ನಾಮದಿಂದ ರಚಿಸಿದ್ದರು. ತಾಳ-ಲಯಗಳಿಂದ ಕೂಡಿದ ಸಂಕೀರ್ತನೆಯನ್ನು ವಿಶೇಷತ: ಕಾರ್ತಿಕ ಮಾಸದಲ್ಲಿ ತುಳಸೀ ಕಟ್ಟೆಯ ಮುಂದೆ ಹಾಡಿ ಕುಣಿಯುವ ಪದ್ಧತಿ ದಕ್ಷಿಣ ಕನ್ನಡಜಿಲ್ಲೆಯಲ್ಲಿ ಇಂದಿಗೂ ಪ್ರಚಲಿತವಾಗಿದೆ. ಸಂಕೀರ್ತನೆಯನ್ನು ಮಾಡುವ ಹಲವಾರು ತಂಡಗಳು ಊರಿನಲ್ಲಿದ್ದು ಉತ್ಸವ, ರಾಶಿ ಪೂಜೆಗಳಲ್ಲದೆ ಮನೆಮನೆಗಳಲ್ಲಿಯೂ ಮಾಡುವ ಪದ್ಧತಿ ಇಂದಿಗೂ ಜೀವಂತವಾಗಿದೆ.
ಮುಂಬಯಿಯ ಭಜನಾ ಮಂಡಳಿಗಳಿಗೆ ತುಳಸೀ ಸಂಕೀರ್ತನೆ ಪರಿಚಯಿಸುವ ಕಾರ್ಯಕ್ರಮವನ್ನು ಸಾಹಿತ್ಯ ಬಳಗ ಮುಂಬಯಿ ಸಂಸ್ಥೆ ಹಮ್ಮಿಕೊಂಡಿದ್ದು, ಪ್ರಥಮ ಪ್ರಯೋಗವಾಗಿ ಕಳೆದ ಡಿ.18 ರಿಂದ ಡಿ.22 ತನಕ ತುಳಸೀ ಸಂಕೀರ್ತನೆಯಲ್ಲಿ ಪರಿಣತರಾದ ಬೆಳಪು ಗ್ರಾಮದ ಪ್ರಾಚಾರ್ಯ ಮುರಳಿ ರಾವ್ ಮತ್ತು ಮನೋಹರ ರಾವ್ ಅವರನ್ನು ಮುಂಬಯಿಗೆ ಆಹ್ವಾನಿಸಿ ಬಿಎಸ್ಕೆಬಿ ಅಸೋಸಿಯೇಶನ್ (ಗೋಕುಲ) ಇದರ ನೆರೂಲ್ ಅಲ್ಲಿನ ಆಶ್ರಯದಲ್ಲಿ ಮತ್ತು ಅಂಧೇರಿ ಇರ್ಲಾ ಇಲ್ಲಿನ ಅದಮಾರು ಮಠದಲ್ಲಿ ಸಂಕೀರ್ತನ ಕಾರ್ಯಕ್ರಮ ನಡೆಸಲಾಯಿತು.
ಪ್ರಾತ್ಯಕ್ಷಿಕೆಯಲ್ಲಿ ಹತ್ತು ವಿಧದ ಹೆಜ್ಜೆಗಾರಿಕೆ ಮತ್ತು ವಾದಿರಾಜರ ರಚಿತ ಹಾಡುಗಳನ್ನು ಸಂಕೀರ್ತನೆಯಲ್ಲಿ ಬಳಸಲಾಗಿದ್ದು ಸುಮಾರು 30ಕ್ಕೂ ಮಿಕ್ಕಿ ಉತ್ಸಾಹಿಗಳು ಭಾಗವಹಿಸಿದ್ದರು. ಅರುಣಾ ಉಡುಪ, ಸಹನಾ ಪೆÇೀತಿ, ಸಹನಾ ಭಾರದ್ವಾಜ್ ಇತರರೊಂದಿಗೆ ಸಕ್ರಿಯವಾಗಿ ಪಾಲ್ಗೊಂಡಿದ್ದು, 93ವರ್ಷದ ವಾಸುದೇವ ಉಡುಪ ಇವರು ತಾಳ ಹಿಡಿದು ಕುಣಿದದ್ದು ಅಚ್ಚರಿಯಾಗಿದೆ ಎಂದು ಸಾಹಿತ್ಯ ಬಳಗದ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಹರ್ಷ ವ್ಯಕ್ತಪಡಿಸಿದರು.