ಉಜಿರೆ: ಜಿನ ಮಂದಿರಗಳಲ್ಲಿ (ಬಸದಿಗಳಲ್ಲಿ) ದೇವರ ದರ್ಶನಕ್ಕೆ ಹೋಗುವಾಗ ಬಸದಿಗಳ ಎದುರು ಇರುವ ಮಾನಸ್ತಂಭಗಳನ್ನು ದಾಟಿ ಹೋಗಬೇಕಾಗುತ್ತದೆ. ನಮ್ಮ ಮನದಲ್ಲಿರುವ ಅಹಂ, ಕಾಮ, ಕ್ರೋಧ, ಲೋಭ ಮೊದಲಾದ ಮಾನಕಷಾಯಗಳನ್ನು ಕಳೆದುಕೊಂಡು ಬಸದಿಗೆ ಹೋಗಿ ದೇವರ ದರ್ಶನ ಪಡೆಯಬೇಕೆಂದು ಎಲ್ಲಾ ಬಸದಿಗಳ ಎದುರು ಮಾನಸ್ತಂಭ ನಿರ್ಮಿಸಲಾಗುತ್ತದೆ ಎಂದು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ಜಯಮಾಲ ಎನ್. ಹೇಳಿದರು.
ಬೆಳಾಲು ಗ್ರಾಮದ ಬೈಪಾಡಿಯಲ್ಲಿರುವ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ನೂತನ ಮಾನಸ್ತಂಭ ನಿರ್ಮಾಣಕ್ಕೆ ಚಾಲನೆ ನೀಡುವ ಸಮಾರಂಭದಲ್ಲಿ ಸೋಮವಾರ ಅವರು ಶುಭ ಹಾರೈಸಿ ಮಾತನಾಡಿದರು.
ಸಹೃದಯ ದಾನಿಗಳು ಹಾಗೂ ಭಕ್ತಾದಿಗಳ ಸಹಕಾರದೊಂದಿಗೆ ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳ್ಳಲೆಂದು ಅವರು ಆಶಿಸಿದರು.
ಬೆಳಾಲು ಶಾಂತೀಶ ನಿವಾಸಿಗಳಾದ ಭರತ್ಕುಮಾರ್, ಉದಿತ್ ಜೈನ್ ಮತ್ತು ಕುಟುಂಬಸ್ತರು ಉಪಸ್ಥಿತರಿದ್ದರು. ಬಸದಿಯಲ್ಲಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿಗೆ ಕ್ಷೀರಾಭಿಷೇಕ ಮತ್ತು ವಿಶೇಷ ಪೂಜೆ ನಡೆಯಿತು.
ಪೇಜಾವರ ಶ್ರೀಗಳಿಗೆ ನುಡಿ ನಮನ
ಉಜಿರೆ: ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಸೋಮವಾರ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಸತೀಶ್ಚಂದ್ರ ಅಧ್ಯಕ್ಷತೆಯಲ್ಲಿ ನುಡಿ ನಮನ ಸಲ್ಲಿಸಲಾಯಿತು.
ಪೂಜ್ಯ ಸ್ವಾಮೀಜಿಯವರ ಶಿಷ್ಯ ಹಾಗೂ ಎಸ್.ಡಿ.ಎಂ. ಕಾಲೇಜಿನಲ್ಲಿ ಪೇಜಾವರ ಶ್ರೀಗಳು ಪರಂಧಾಮ ಹೊಂದಿದ ಬಗ್ಯೆ ಸಂಸ್ಕøತ ಉಪನ್ಯಾಸಕ ರಾಮಚಂದ್ರ ಪುರೋಹಿತ ಮತ್ತು ಡಾ. ಶ್ರೀಧರ ಭಟ್ ನುಡಿನಮನ ಸಲ್ಲಿಸಿದರು.
ಪ್ರಾಧ್ಯಾಪಕ ವೃಂದದವರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪೂಜ್ಯ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಉಜಿರೆಯಲ್ಲಿರುವ ಕೆ.ಜಿ.ಯಿಂದ ಪಿ.ಜಿ. ವರೆಗಿನ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಸೋಮವಾರ ರಜೆ ನೀಡಲಾಯಿತು.
ಧಾರವಾಡದಲ್ಲಿರುವ ಜನತಾ ಶಿಕ್ಷಣ ಸಮಿತಿಯ ಎಲ್ಲಾ ಸಂಸ್ಥೆಗಳಿಗೂ ಸೋಮವಾರ ರಜೆ ಸಾರಲಾಗಿದೆ ಎಂದು ಅಲ್ಲಿನ ಕಾರ್ಯದರ್ಶಿ ಡಾ. ನ. ವಜ್ರಕುಮಾರ್ ತಿಳಿಸಿದ್ದಾರೆ.
1973ರಲ್ಲಿ ಪೂಜ್ಯ ಪೇಜಾವರ ಸ್ವಾಮೀಜಿ ಸಲಹೆಯಂತೆ ಆರ್ಥಿಕ ಸಂಕಷ್ಟದಲ್ಲಿ ಮುಳುಗಿದ್ದ ಜನತಾ ಶಿಕ್ಷಣ ಸಮಿತಿಯ ಆಡಳಿತವನ್ನು ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಿಕೊಂಡು ಎಲ್ಲಾ ಸಂಸ್ಥೆಗಳಿಗೂ ಕಾಯಕಲ್ಪ ನೀಡಿದ್ದಾರೆ.
ಹೊಸ ವರ್ಷ ಶುಭಾರಂಭ ನಾಳೆ: ಧರ್ಮಸ್ಥಳದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು
ಉಜಿರೆ: ಡಿ. 31 ಮಂಗಳವಾರ ವರ್ಷದ ಕೊನೆ ದಿನ ಹಾಗೂ ನಾಳೆ ಬುಧವಾರ ಪ್ರಸಕ್ತ ವರ್ಷದ ಶುಭಾರಂಭ ಆಚರಿಸಲು ಪ್ರತಿವರ್ಷದಂತೆ ಧರ್ಮಸ್ಥಳದಲ್ಲಿ ಮಂಗಳವಾರ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಇದ್ದಾರೆ.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸದ ಉದ್ದೇಶವಾದರೆ ಸರ್ಕಾರಿ ನೌಕರರಿಗೆ ವರ್ಷದ ಸಾಂದರ್ಭೀಕ ರಜೆಗಳನ್ನು (ಸಿ.ಎಲ್.) ಮುಗಿಸುವ ತವಕ.
ಮಂಗಳವಾರ ರಾತ್ರಿ ಗಂಟೆ 7 ರಿಂದ 12ರ ವರೆಗೆ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.