ಜನರ ಕಷ್ಟಗಳಿಗೆ ಮಾತೃಸಂಘ ಸದಾ ಬದ್ಧ : ಅಜಿತ್ ಕುಮಾರ್ ರೈ
ಮುಂಬಯಿ (ಮಂಗಳೂರು), ಮಾ.23: ಬಂಟ ಸಮಾಜದಲ್ಲಿ ಕಡು ಬಡತನದಲ್ಲಿರುವ ಜನರ ಕಷ್ಟ-ಸುಖಗಳಿಗೆ ಬಂಟರ ಯಾನೆ ನಾಡವರ ಮಾತೃಸಂಘ ಸದಾ ಸ್ಪಂದಿಸುವ ಸಮಾಜಮುಖಿ ಕೆಲಸ ಕಾರ್ಯಗಳನ್ನು ಕೈಗೊಳ್ಳುತ್ತದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು.
ನಗರ ಹೊರ ವಲಯದ ಮೂಡುಶೆಡ್ಡೆ ಚೌಟರ ಮನೆ ನಿವಾಸಿ, ಕಡು ಬಡತನದಲ್ಲಿರುವ ವಸಂತ ಆಳ್ವ ಅವರಿಗೆ ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿ ನಿರ್ಮಿಸಿಕೊಟ್ಟ 9 ಲಕ್ಷ ರೂಪಾಯಿ ವೆಚ್ಚದ ಮನೆಯ ಕೀಯನ್ನು ಅಜಿತ್ ಕುಮಾರ್ ರೈ ಮಾಲಾಡಿ ಅವರು ಹಸ್ತಾಂತರಿಸಿ ಮಾತನಾಡಿದರು.
ಮೂಡುಶೆಡ್ಡೆ ಚೌಟರ ಮನೆಯ ವಸಂತ ಆಳ್ವರ ಕುಟುಂಬ ಮಾನಸಿಕವಾಗಿ ನೊಂದು ಅಸ್ವಸ್ಥ ಗೊಂಡಿದ್ದು, ತೀರಾ ಬಡತನದಲ್ಲಿದ್ದ ಕುಟುಂಬ ಸರಿಯಾದ ಮನೆಯಿಲ್ಲದೇ ಜೀವನ ಸಾಗಿಸುತ್ತಿತ್ತು. ಅವರ ಸ್ಥಿತಿಗತಿಯನ್ನು ಕಂಡು ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯು ಸುಮಾರು 9 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಟ್ಟಿದೆ.
ವಸಂತ ಆಳ್ವರ ಕುಟುಂಬದ ನಾಲ್ಕು ಮಂದಿ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಅವರಿಗೆ ಬೆಳ್ತಂಗಡಿಯ ಸಿಯಾನ್ ಆಶ್ರಮದಲ್ಲಿ ಎರಡು ವರ್ಷಗಳ ಕಾಲ ಚಿಕಿತ್ಸೆಯನ್ನು ನೀಡಲಾಗಿತ್ತು.
ಮನೆ ಹಸ್ತಾಂತರ ಸಂದರ್ಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ನಿಕಟಪೂರ್ವ ಕಾರ್ಯದರ್ಶಿ ವಸಂತ ಶೆಟ್ಟಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ರೈ, ಶೆಡ್ಡೆ ಮಂಜುನಾಥ್ ಭಂಡಾರಿ, ತಾಲೂಕು ಸಮಿತಿಯ ಸಂಚಾಲಕ ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ, ಸಹ ಸಂಚಾಲಕ ಮುರಳೀಧರ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಜಯರಾಮ ಸಾಂತ, ಜಗನ್ನಾಥ ಶೆಟ್ಟಿ ಬಾಳ, ಉಮೇಶ್ ರೈ ಪದವು ಮೇಗಿನ ಮನೆ, ಆನಂದ ಶೆಟ್ಟಿ ಅಡ್ಯಾರ್, ಮಣೀಶ್ ರೈ, ಸಬೀತಾ ಶೆಟ್ಟಿ, ರತ್ನಾಕರ ಶೆಟ್ಟಿ ಎಕ್ಕಾರ್, ಜಯಶೀಲ ಅಡ್ಯಂತಾಯ, ಉಮೇಶ್ ಶೆಟ್ಟಿ ಮೂಡುಶೆಡ್ಡೆ, ಅಶ್ವತ್ಥಾಮ ಹೆಗ್ಡೆ, ಕೃಷ್ಣ ರಾಜ ಸುಲಯ, ಸಂತೋಷ್ ಶೆಟ್ಟಿ ಮೂಡುಶೆಡ್ಡೆ , ಜಯರಾಮ ಕೊಟ್ಟಾರಿ , ದಿವಾಕರ ಶೆಟ್ಟಿ ಚೌಟರ ಮನೆ, ರಮಾನಾಥ ಅತ್ತಾರ್, ಭಾಸ್ಕರ ರೈ ಕಟ್ಟಬೀಡು ಮೊದಲಾದವರು ಉಪಸ್ಥಿತರಿದ್ದರು. ವಸಂತ ಶೆಟ್ಟಿ ಸ್ವಾಗತಿಸಿದರು. ಉಲ್ಲಾಸ್ ಆರ್.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಮುರಳೀಧರ ಶೆಟ್ಟಿ ವಂದಿಸಿದರು.