ಶ್ರೀ ಕ್ಷೇತ್ರ ಧರ್ಮಸ್ಥಳ ಪುಣ್ಯಕ್ಷೇತ್ರಕ್ಕೆ ನಾಡಿನ ಮತ್ತು ಹೊರನಾಡ ಹಾಗೂ ದೇಶ ವಿದೇಶಗಳಾದ್ಯಂತ ಕೋಟಿ ಸಂಖ್ಯೆಯ ಭಕ್ತರಿದ್ದಾರೆ. ಮಹಾಮಾರಿ ಕೊರೋನ ಖಾಯಿಲೆಯಿಂದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಳೆದ ಎರಡುವರೆ ತಿಂಗಳಿನಿಂದ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದ್ದು ಮತ್ತೆ ದೇವಸ್ಥಾನವನ್ನು ಭಕ್ತರಿಗೆ ಸಾರ್ವಜನಿಕರಿಗೆ ಮುಕ್ತವಾಗಿಸುವ ವಿಚಾರವಾಗಿ ಸುದ್ದಿ ವಾಹಿನಿವೊಂದರಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸಂದರ್ಶನ ನೀಡಿದ್ದರು. ಆ ಸಂದರ್ಭದಲ್ಲಿ ಕೋವಿಡ್ ಸೋಂಕು ಲೋಕ ಕಂಟಕ ಆಗಬಾರದೆಂಬ ಸದುದ್ದೇಶದಿಂದ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇದು ಕೆಲವು ಮುಂಬೈ ಕನ್ನಡಿಗರಲ್ಲಿ ಬೇಸರ ತಂದಿದ್ದು ಪೂಜ್ಯ ಹೆಗ್ಗಡೆಯವರ ಸಂದೇಶಕ್ಕೆ ಪ್ರತಿಕ್ರಿಯಿಸಿ ಅವರಲ್ಲಿನ ಅನೇಕರು ತಮ್ಮತಮ್ಮ ಭಿನ್ನಾಭಿಪ್ರಾಯಗಳೊಂದಿಗೆ ಅಸಮಾಧಾನ, ಆಕ್ರೋಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ರವಾನಿಸಿ ಗೊಂದಲಕ್ಕೆ ಕಾರಣವಾಗಿತ್ತು.
ಆದರೆ ಮಾರನೆ ದಿನವೇ ಈ ಬಗ್ಗೆ ಧರ್ಮಾಧಿಕಾರಿಗಳು ಸ್ಪಷ್ಟೀಕರಣ ನೀಡಿ ಮಹಾರಾಷ್ಟ್ರದ ಬಗ್ಗೆ, ಮುಂಬೈ ತುಳು ಕನ್ನಡಿಗರ ಬಗ್ಗೆ ತಮ್ಮಲ್ಲಿನ ಅನುಕಂಪವನ್ನೇ ತೋರಿದ್ದಾರೆ. ಪೂಜ್ಯರಿಗೆ ಮಹಾರಾಷ್ಟ್ರದ ಜನತೆ ಬಗ್ಗೆ, ಅದರಲ್ಲೂ ಮುಂಬೈ ಕನ್ನಡಿಗರ ಬಗ್ಗೆ ಇದ್ದ ವಿಶೇಷವಾದ ಪ್ರೀತಿ, ಗೌರವ ಮತ್ತು ಅಭಿಮಾನದ ಬಗ್ಗೆ ತಿಳಿಸಿ ಹರಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಮುಂಬೈ ಕನ್ನಡಿಗರಿಗೂ ಅವಿನಾಭಾವ ಸಂಬಂಧವಿದ್ದು, ಮುಂಬೈಯಲ್ಲಿ ಇರುವ ಕನ್ನಡಿಗರು, ತುಳುವರಾಗಲಿ ಪೂಜ್ಯ ಖಾವಂದರನ್ನು ಯಾವುದೇ ಕಾರ್ಯಕ್ರಮಕ್ಕೂ ಕರೆದರೂ ಕೂಡ ಅವರು ಎರಡು ಮಾತನಾಡದೆ ಮುಂಬೈಗೆ ಬಂದು ಸರ್ವರನ್ನೂ ಹರಸಿ ಆಶೀರ್ವದಿಸುತ್ತಾ ಎಲ್ಲರ ಪ್ರೀತಿ, ಭಕ್ತಿಗೆ ಪಾತ್ರರಾದವರು. ಅಂತೆಯೇ ನಾವು ಕೂಡ ಶ್ರೀ ಹೆಗ್ಗಡೆ ಅವರೊಡನೆ ಉತ್ತಮ ಬಾಂಧವ್ಯವನ್ನು ಹೊಂದಿದ್ದವರೇ ಆಗಿದ್ದೇವೆ. ಈ ಎಲ್ಲ ಹಿನ್ನೆಲೆಯಲ್ಲಿ ಪೂಜ್ಯರು ಸುದ್ದಿವಾಹಿನಿಯಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಎಲ್ಲರೂ ಧನಾತ್ಮಕವಾಗಿ ಸ್ವೀಕರಿಸೋಣ ಎಂದು ಮುಂಬೈನಲ್ಲಿನ ಮಂಜುನಾಥನ ಹಾಗೂ ಧರ್ಮಾಧಿಕಾರಿಗಳ ಭಕ್ತಾಭಿಮಾನಿಗಳು ತಿಳಿಸಿದ್ದಾರೆ.
ನಾವೆಲ್ಲರೂ ಸಾಂಘಿಕವಾಗಿ, ಸಾಮರಸ್ಯದಿಂದ ಬಾಳುತ್ತಾ ಮತ್ತೆ ಭಾರತ ದೇಶವನ್ನು ಕೊರೋನಮುಕ್ತ ಮಾಡುವಲ್ಲಿ ಪ್ರಯತ್ನಿಸೋಣ. ಧರ್ಮಾಧಿಕಾರಿಗಳ ಆಶಯ ಮತ್ತು ಸಂದೇಶದ ವಿರುದ್ಧವಾದ ವಿಚಾರ ಪ್ರಚಾರಗಳಿಗೆ ಇನ್ನು ಎಲ್ಲರೂ ಇಲ್ಲಿಗೇ ಅಂತ್ಯವಾಡಿ ಶ್ರೀ ಕ್ಷೇತ್ರದ ಪಾವಿತ್ರ್ಯಕ್ಕೆ ಮತ್ತು ಪೂಜ್ಯರ ದಾರ್ಶನಿಕ ವ್ಯಕ್ತಿತ್ವದ ಘನತೆಗೆ ಧಕ್ಕೆಯಾಗದಂತೆ ನಡೆದು ಕೊಳ್ಳೋಣ. ಈ ಮೂಲಕ ಮಾರಕ ಸೋಂಕು ತಡೆಗಟ್ಟುವಲ್ಲಿ ಧರ್ಮಾಧಿಕಾರಿಗಳ ಚಿಂತನೆಗಳಿಗೆ ಪೂರಕವಾಗಿ ಸಹಕರಿಸೋಣ ಎಂದು ಮುಂಬೈನಲ್ಲಿನ ಮಂಜುನಾಥನ ಭಕ್ತಾಭಿಮಾನಿಗಳಲ್ಲಿ, ಸಮಸ್ತ ಬಂಧು ಬಾಂಧವರಲ್ಲಿ ಮುಂಬೈ ಮಹಾನಗರದ ಸಮಾಜ ಸೇವಕ, ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ ಈ ಮೂಲಕ ತಿಳಿಸಿದ್ದಾರೆ.