ಮಹಾರಾಷ್ಟ್ರದಾದ್ಯಂತ ಅಕ್ಟೋಬರ್ ಮೊದಲನೇ ವಾರದಿಂದ ಹೊಟೇಲು ಪುನಾರಂಭಕ್ಕೆ ಮುಖ್ಯಮಂತ್ರಿ ಭರವಸೆ
ಮುಂಬಯಿ (ಆರ್ಬಿಐ), ಸೆ.30: ಕಳೆದ ಮಾರ್ಚ್ನಿಂದ ಲಾಕ್ಡೌನ್ ನಿಮಿತ್ತ ಹೊಟೇಲ್ ಉದ್ಯಮವು ಸ್ಥಗಿತಗೊಂಡಿದ್ದು, ಇದೀಗ ಮಹಾರಾಷ್ಟ್ರದಾದ್ಯಂತದ ವಿಶೇಷವಾಗಿ ಮುಂಬಯಿಯಲ್ಲಿನ ಎಲ್ಲಾ ಹೊಟೇಲು, ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ಪುನಃ ತೆರೆಯುವಂತೆ ಅನುಮತಿ ನೀಡುವಂತೆ ಮಹಾರಾಷ್ಟ್ರ ಫೆÉಡರೇಶನ್ ಆಫ್ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ಇಂದಿಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇವರೊಂದಿಗೆ ಮಾತುಕತೆ ನಡೆಸಿದ್ದು, ರಾಜ್ಯಾದ್ಯಾದಂತ ಮತ್ತೆ ಹೊಟೇಲ್ ಉದ್ಯಮವನ್ನು ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಅವರು ಫೆಡರೇಶನ್ ನಿಯೋಗಕ್ಕೆ ಭರವಸೆಯನ್ನಿತ್ತರು.
ಅಂತೆಯೇ ರಾಜ್ಯದ ಮಾಜಿ ಮುಖ್ಯಮಂತ್ರಿ, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್ಸಿಪಿ) ಇದರ ಸರ್ವೋಚ್ಚ ನಾಯಕ ಶರದ್ ಪವಾರ್ ಇವರ ಮಾರ್ಗದರ್ಶನದಂತೆ ಫೆಡರೇಶನ್ ನಿಯೋಗವು ಇಂದಿಲ್ಲಿ ಮುಖ್ಯ ಮಂತ್ರಿ ಅವರ ವರ್ಷಾ ಬಂಗ್ಲೆಗೆ ಭೇಟಿ ನೀಡಿ ಉದ್ಧವ್ ಠಾಕ್ರೆ ಅವರಿಗೆ ಮನವಿ ಸಲ್ಲಿಸಿತು.
ಮಹಾರಾಷ್ಟ್ರ ಫೆÉಡರೇಶನ್ ಆಫ್ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷ ಡಾ| ವಿರಾರ್ ಶಂಕರ್ ಶೆಟ್ಟಿ, ನವಿಮುಂಬಯಿ ಹೊಟೇಲ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ಮಾರುತಿ ಎನ್.ಬೊಯೀರ್, ಮಾಜಿ ಅಧ್ಯಕ್ಷ ದಯಾನಂದ ಶೆಟ್ಟಿ, ಸಮಿತಿ ಸದಸ್ಯ ಭಾಸ್ಕರ ಶೆಟ್ಟಿ, ಶಶ್ವತ್ ಶೆಟ್ಟಿ ಸುರೇಂದ್ರ, ಮಹಾರಾಷ್ಟ್ರ ರಾಷ್ಟ್ರವಾದಿ ಹೊಟೇಲ್ ಕಾಮಗಾರ್ ಯ್ಯೂನಿಯನ್ ಅಧ್ಯಕ್ಷ ಕಳತ್ತೂರು ವಿಶ್ವನಾಥ ಶೆಟ್ಟಿ ಇವರು ಮುಖ್ಯಮಂತ್ರಿ ಅವರಿಗೆ ಹೊಟೇಲ್ ಉದ್ಯಮದ ಕಷ್ಟ ನಷ್ಟಗಳ ಮತ್ತು ಮಾಲಕರು ಹಾಗೂ ನೌಕರ ವೃಂದವು ಎದುರಿಸುತ್ತಿರುವ ತೀವ್ರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿತು.
ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇಂದಿಲ್ಲಿ ನಡೆಸಿದ ಮಾತುಕತೆಯಲ್ಲಿ ಮಹಾರಾಷ್ಟ್ರದಾದ್ಯಂತದ ವಿಶೇಷವಾಗಿ ಮುಂಬಯಿಯಲ್ಲಿನ ಎಲ್ಲಾ ಹೊಟೇಲು, ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ಒಂದು ವಾರದೊಳಗೆ ಹೊಟೇಲ್ ಉದ್ಯಮವನ್ನು ಪುನಾರಂಭಿಸುವುದಾಗಿ ಸಿಹಿ ಸುದ್ಧಿ ನೀಡಿದ್ದು, ಎಲ್ಲಾ ಸಮಸ್ಯೆಗಳಿಗೆ ಸಮಾಧಾನ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ ಎಲ್ಲಾ ಹೋಟೆಲ್ ಅಸೋಸಿಯೇಶನ್ ಸಮಿತಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಚರ್ಚಿಸಿ ಪುನಾರಂಭಿಸುವುದಾಗಿ ತಿಳಿಸಿದರು.