ಪೌರಾಡಳಿತ ಸಚಿವ ಡಾ| ನಾರಾಯಣ ಗೌಡ ಬೆಂಬಲಿಗರ ವಿಜಯ
ಮುಂಬಯಿ (ಆರ್ಬಿಐ), ಅ.31: ತೀವ್ರ ಕುತೂಹಲ ಕೆರಳಿಸಿದ್ದ ಕೃಷ್ಣರಾಜಪೇಟೆ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ತೋಟಗಾರಿಕೆ, ರೇಷ್ಮೆ, ಪೌರಾಡಳಿತ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ| ಕೆ.ಸಿ ನಾರಾಯಣ ಗೌಡ ಅವರ ಬೆಂಬಲಿಗರಾದ ಮಹಾದೇವಿ ಅಧ್ಯಕ್ಷರಾಗಿ ಹಾಗೂ ಗಾಯಿತ್ರಮ್ಮ ಉಪಾಧ್ಯಕ್ಷರಾಗಿ ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ಸುಮಾರು ಎರಡುವರೆ ದಶಕಗಳಿಂದ ಪುರಸಭೆಯ ಆಡಳಿತದ ಚುಕ್ಕಾಣಿ ಹಿಡಿದು ಆಧಿಪತ್ಯವನ್ನು ಸಾಧಿಸಿದ್ದ ಕಾಂಗ್ರೆಸ್ ಆಡಳಿತ ಇದೀಗ ಅಂತ್ಯವಾಗಿದೆ. 10 ಸದಸ್ಯರ ಬಲವನ್ನು ಹೊಂದಿದ್ದ ಕಾಂಗ್ರೆಸ್ ತಂತ್ರಗಾರಿಕೆ ಮಾಡಲು ಹೋಗಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಭ್ಯಥಿರ್ü ನಟರಾಜ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗಾಯತ್ರಿ ಅವರನ್ನು ಬೆಂಬಲಿಸುವಂತೆ ವ್ಹಿಫ್ ನೀಡುವ ಮೂಲಕ ಭಾರೀ ಮುಖಭಂಗ ಅನುಭವಿಸಿದೆ.
ಫಲಿತಾಂಶದ ಪ್ರಕಟಣೆಗೆ ಸುಪ್ರೀಂಕೋರ್ಟ್ ತೀರ್ಪು ಅಡ್ಡಿಯಾಗಿರುವುದರಿಂದ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ಫಲಿತಾಂಶ ಪ್ರಕಟಿಸುವುದಾಗಿ ಚುನಾವಣಾಧಿಕಾರಿ ಆಗಿದ್ದ ಕೆ.ಆರ್ ಪೇಟೆ ತಹಶೀಲ್ದಾರ್ ಎಂ.ಶಿವಮೂರ್ತಿ ಪ್ರಕಟಿಸಿದರು.
ಇಂದು ನಡೆದ ಚುನಾವಣೆಯು ಶಾಂತಿಯುತವಾಗಿ ನಡೆದು ಅವಿರೋಧವಾಗಿ ಆಯ್ಕೆಯಾಗಿದ್ದರೂ ಅಧಿಕೃತವಾದ ಫಲಿತಾಂಶ ಹಾಗೂ ಘೋಷಣೆಯು ಚುನಾವಣಾಧಿಕಾರಿಗಳಿಂದ ಪ್ರಕಟವಾಗದ ಬಗ್ಗೆ ಸ್ಪಷ್ಠನೆ ನೀಡಿದ ಸಚಿವ ನಾರಾಯಣ ಗೌಡ ಇಂದು ಸರ್ಕಾರದ ಆದೇಶದಂತೆ ಚುನಾವಣೆ ನಡೆದು ನಮ್ಮ ಬೆಂಬಲಿಗರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸರ್ಕಾರದ ಅನುಮತಿ ಪಡೆದುಕೊಂಡು ಒಂದೆರಡು ದಿನಗಳಲ್ಲಿ ಅಧಿಕೃತವಾಗಿ ಫಲಿತಾಂಶ ಜಿಲ್ಲಾಧಿಕಾರಿಗಳು ಪ್ರಕಟಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ದೇವರ ಆಶೀರ್ವಾದ ನನ್ನ ಕಡೆಗಿದೆ-ಸಚಿವ ನಾರಾಯಣ ಗೌಡ:
ಇಂದು ನಡೆದ ಚುನಾವಣೆಯಲ್ಲಿ ನನಗೆ ಮುಖಭಂಗ ಉಂಟುಮಾಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಕುತಂತ್ರ ಮಾಡಿದರೂ ಧರ್ಮಯುದ್ಧದಲ್ಲಿ ಅಂತಿಮವಾಗಿ ನನಗೇ ಗೆಲುವಾಗಿದೆ. ನನ್ನ ಬೆಂಬಲಿಗರಾದ ಮಹಾದೇವಿ ಮತ್ತು ಗಾಯತ್ರಮ್ಮ ಅಧ್ಯಕ್ಷ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ 25 ವರ್ಷಗಳ ಕಾಂಗ್ರೆಸ್ ದುರಾಡಳಿತ ಅಂತ್ಯವಾಗಿದೆ. ಇಂದು ವಾಲ್ಮೀಕಿ ಜಯಂತಿಯಂದೇ ನಾಯಕ ಜನಾಂಗಕ್ಕೆ ಸಿಕ್ಕ ಅಧಿಕಾರ. ಅಂತೆಯೇ ಇಲ್ಲಿನ ಸರ್ಕಾರಿ ಆಸ್ತಿ ರಕ್ಷಣೆ, ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರೆಯುತ್ತದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಸಚಿವ ನಾರಾಯಣ ಗೌಡ ಉತ್ತರಿಸಿದರು. ಚುನಾಯಿತ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಸಚಿವ ನಾರಾಯಣ ಗೌಡ ಮತ್ತು ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ತಾಲ್ಲೂಕು ನಾಯಕ ಜನಾಂಗದ ಗೌರವಾಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಮುಖಂಡರಾದ ಕೆ.ವಿನೋದ್ ಕುಮಾರ್, ಸಚಿವರ ಆಪ್ತ ಸಹಾಯಕ ದಯಾನಂದ ಮತ್ತಿತರರು ಉಪಸ್ಥಿತರಿದ್ದರು.