ಮುಂಬಯಿ (ಆರ್ಬಿಐ), ಜ.17: ವೃತ್ತಿಪರ ಶಿಕ್ಷಣದ ಪಿತಾಮಹ ಎಂದೇ ಪ್ರಸಿದ್ಧ, ಭಾರತ ರಾಷ್ಟ್ರದ ಹೆಸರಾಂತ ವೃತ್ತಿಪರ ಶಿಕ್ಷಣ ಸಂಸ್ಥೆಯೆಂದೆಣಿಸಿದ ಇಂಟರ್ನೇಶನಲ್ ಇನ್ಸ್ಟಿಟ್ಯೂಟ್ ಟ್ರೈನಿಂಗ್ ಸೆಂಟರ್ (ಐಐಟಿಸಿ) ಇದರ ಸಂಸ್ಥಾಪಕ ಎಸ್.ಕೆ ಉರ್ವಾಲ್ (ಸದಾಶಿವ ಕೊರಗಿನ್ನಾಯ ಉರ್ವಾಲ್ -87.) ವಯೋವೃದ್ಧಾಪ್ಯ ಸಹಜತೆ ಹಾಗೂ ಅಲ್ಪಾವಧಿಯ ಅನಾರೋಗ್ಯದಿಂದ ಮುಂಬಯಿ ವಡಲಾ ಇಲ್ಲಿನ ಸನ್ನಿಧಾನ್ ಸ್ವನಿವಾಸದಲ್ಲಿ ಇಂದಿಲ್ಲಿ ಭಾನುವಾರ ನಿಧನರಾದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಉರ್ವಾಲ್ ಇಲ್ಲಿನ ಕೊರಗಿನ್ನಾಯ ಮತ್ತು ಕಲ್ಯಾಣಿ ರಾವ್ ಸುಪುತ್ರರಾಗಿದ್ದು ಮೃತರು ಪತ್ನಿ ಪ್ರಫುಲ್ಲಾ ಉರ್ವಾಲ್, ಎರಡು ಗಂಡು (ಐಐಟಿಸಿ ನಿರ್ದೇಶಕರಾದ ವಿಕ್ರಾಂತ್ ಉರ್ವಾಲ್ ಮತ್ತು ಸಂದೇಶ್ ಉರ್ವಾಲ್), ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಮುಂಬಯಿಯ ರಾತ್ರಿ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಇವರು ಅಖಿಲ ಭಾರತ ಉತ್ಪಾದಕರ ಸಂಘ ಇದರ ಕಾರ್ಯ ನಿರ್ವಾಹಕ ಕಾರ್ಯದರ್ಶಿಯಾಗಿ ಭಾರತೀಯ ವಿದೇಶೀ ವ್ಯಾಪಾರ ಮಂಡಳಿಯಲ್ಲಿ ಸೇವೆ ಸಲ್ಲಿಸಿ ದೇಶ ವಿದೇಶಗಳಲ್ಲಿನ ಉದ್ಯೋಗ ಸಮುದಾಯದ ಸಂಸ್ಥೆಗಳೊಂದಿಗಿನ ನಿರಂತರ ಸಂಪರ್ಕ ಹೊಂದಿದ್ದರು.1966ರಲ್ಲಿ ಪ್ರಾಧ್ಯಾಪಕ ವೃತ್ತಿಗೆ ರಾಜೀನಾಮೆಯನ್ನಿತ್ತು ಭಾರತೀಯ ಅಂತಾರಾಷ್ಟ್ರೀಯ ಉದ್ಯೋಗ ಕೇಂದ್ರ ಸ್ಥಾಪಿಸಿದ್ದರು. ಉದ್ಯೋಗ, ಆಮದು ಮತ್ತು ರಫ್ತು ಸಂಬಂಧಿತ ಮಾಹಿತಿ ಮತ್ತು ಡೇಟಾಗಳನ್ನು ಸಂಗ್ರಹಿಸಿ ರಾಷ್ಟ್ರವ್ಯಾಪಿ ವಿತರಿಸಿ ಯಶಸ್ವಿ ಉದ್ಯಮಿಯಾಗಿದ್ದರು. ಸದಾ ಅಧ್ಯಯನ ಮತ್ತು ಅಧ್ಯಾಪನದ ಉತ್ಸಾಹವುಳ್ಳವರಾಗಿದ್ದು ಆಮದು ಮತ್ತು ರಫ್ತು ನಿರ್ವಹಣೆ ಬಗ್ಗೆ ತರಬೇತಿ ಕೇಂದ್ರ, ವಿಚಾರಗೋಷ್ಠಿಗಳನ್ನು ನಡೆಸಿ ಪ್ರಸಿದ್ಧರೆಣಿಸಿದ್ದರು. ಕಂಪ್ಯೂಟರ್ ಶಿಕ್ಷಣ, ಪ್ರವಾಸೋದ್ಯಮ, ವಸ್ತ್ರ ವಿನ್ಯಾಸ (ಫ್ಯಾಶನ್ ರಂಗ) ವೃತ್ತಿಪರ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಭಾರತದಾದ್ಯಂತ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದರು. ವೃತ್ತಿಪರ ಶಿಕ್ಷಣ ರಂಗದಲ್ಲಿ ಸುಮಾರು ಐದುವರೆ ದಶಕಗಳ ಸುದೀರ್ಘಾವಧಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾಥಿರ್üಗಳಿಗೆ ಭವಿಷ್ಯ ರೂಪಿಸುವಲ್ಲಿ ಯಶಕಂಡ ಈ ಐಐಟಿಸಿ ಸಂಸ್ಥೆ ಎಸ್.ಕೆ ಉರ್ವಾಳ್ರ ಕನಸಿನ ಕೂಸು ಆಗಿ ಸ್ಥಾಪಿತ ಗೊಂಡಿತ್ತು. ಐಐಟಿಸಿ ಸದ್ಯ ಜಾಗತಿಕವಾಗಿ ಪ್ರಸಿದ್ಧಿಯಲ್ಲಿದೆ.