ಮುಂಬಯಿ (ಆರ್ ಬಿಐ), ಫೆ.07: ಒಡಿಯೂರು ಶ್ರೀಗಳ ಷಷ್ಟ್ಯಬ್ದ ಸಂಭ್ರಮದ ಅಂಗವಾಗಿ, ಪೂವರಿ ಪತ್ರಿಕಾ ಬಳಗ ಪುತ್ತೂರು ಇದರ ಆಶ್ರಯದಲ್ಲಿ ಏಪ್ರಿಲ್ 2ರಂದು ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ ಆಯೋಜಿಸಲಿದೆ ಎಂದು ದರ್ಬೆಯ ಕೊಂಕಣ ಟ್ರೇಡ್ ಸೆಂಟರ್ನ ಪೂಜ್ಯ ಶ್ರೀಗಳ ಷಷ್ಟ್ಯಬ್ದ ಸಂಭ್ರಮ ಸಮಿತಿ ಕಚೇರಿಯಲ್ಲಿ ಕರೆದ ಪೂರ್ವ ಭಾವೀ ಸಭೆ ನಿರ್ಧರಿಸಿದೆ.
ತಾಲೂಕು ಸಮಿತಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಅಧ್ಯಕ್ಷತೆ ವಹಿಸಿ ಮಾತನಾಡಿ ತುಳುವಿಗೆ ಅಪಾರ ಕೊಡುಗೆ ನೀಡುತ್ತಿರುವ ಶ್ರೀಗಳ ಷಷ್ಟ್ಯಬ್ದ ಹಬ್ಬದ ಸವಿನೆಪಿನಲ್ಲಿ ಸಮಿತಿಯು ಸುಮಾರು 60 ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು ಈ ಪೈಕಿ ಪೂವರಿ ಪತ್ರಿಕಾ ಬಳಗ ತುಳು ಪತ್ರಿಕೆಗಳು ನಡೆದು ಬಂದ ಹಾದಿಯನ್ನು ಪರಿಚಯಿಸುವ ತುಳು ಪತ್ರಿಕಾ ಸಮ್ಮಿಲನ ಅರ್ಥ ಪೂರ್ಣವಾಗಿ ಮೂಡಿ ಬರಬೇಕೆಂದು ಶುಭ ಹಾರೈಸಿದರು.
ಸಮಿತಿ ಸಂಯೋಜಕ ವಿಜಯಕುಮಾರ್ ಭಂಡಾರಿ ಹಬ್ಬಾರಬೈಲು ಕಾರ್ಯಕ್ರಮ ದ ರೂಪುರೇಷೆಗಳ ಮಾಹಿತಿ ನೀಡಿ ತುಳು ಭಜನೆ ಐಸಿರ, ತುಳು ಪತ್ರಿಕೆಗಳ ಪ್ರದರ್ಶನ, ವಿಶೇಷ ಸಂಚಿಕೆ ಬಿಡುಗಡೆ, ವಿಚಾರ ಗೋಷ್ಠಿ ,ಪೂವರಿ ಸಾಹಿತ್ಯ ಪ್ರಶಸ್ತಿ ಪುರಸ್ಕಾರ, ದೇಶದ ವಿವಿಧ ಭಾಗಗಳಲ್ಲಿ ತುಳು ಪತ್ರಿಕೆಗೆ ಶ್ರಮಿಸಿದ ಸಾಧಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದರು.
ತುಳು ಸಾಹಿತ್ಯ ಸಮ್ಮೇಳನ ಸಮಿತಿ ಸಂಚಾಲಕ ಕುಂಬ್ರ ದುರ್ಗಾ ಪ್ರಸಾದ ರೈ, ಸಮಿತಿ ಸಂಯೋಜಕ ರಾಜೇಶ್ ಬನ್ನೂರು ಹಲವಾರು ಸಲಹೆಗಳನ್ನು ನೀಡಿದರು. ಕಾರ್ಯಾಧ್ಯಕ್ಷ ಸಹಜ್ ರೈ ಬಳಜ್ಜ, ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ, ಖಜಾಂಚಿ ಮಹೇಶ್ ಕಜೆ, ಕಾರ್ಯದರ್ಶಿ ರಂಜಿನಿ ಶೆಟ್ಟಿ ,ಗೌರವ ಸಲಹೆಗಾರರಾದ ದೇವಪ್ಪ ನೋಂಡ, ಜಯಪ್ರಕಾಶ್ ರೈ ನೂಜಿಬೈಲು, ಒಡಿಯೂರು ಗ್ರಾಮ ವಿಕಾಶ ಯೋಜನೆಯ ಬಿ. ಯಶೋಧರ ಸಾಲ್ಯಾನ್,ಕಲಾವಿದರಾದ ಸತೀಶ ಬಲ್ಯಾಯ, ಕೃಷ್ಣಪ್ಪ ಶಿವನಗರ ಮುಂತಾದವರು ಹಾಜರಿದ್ದರು.