ಮೂಡುಬಿದಿರೆ: ಇಲ್ಲಿಗೆ ಸಮೀಪದ ಪಡುಕೊಣಾಜೆ ಸರಕಾರೀ ಪ್ರೌಢಶಾಲೆಯ ಗ್ರಾಹಕ ಸಂಘದ ವತಿಯಿಂದ ವಿಶ್ವ ಗ್ರಾಹಕ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಮಾರ್ಚ್ 15 ರಂದು ಶಾಲೆಯಲ್ಲಿ ಆಚರಿಸಲಾಯಿತು.
ಗ್ರಾಹಕ ಜಾಗೃತಿಗೆ ಸಂಬಂಧಿಸಿದಂತೆ ಭಾಷಣ, ಪ್ರಬಂಧ, ಘೋಷವಾಕ್ಯ, ರಚನೆ, ರಸಪ್ರಶ್ನೆ, ಚಿತ್ರಕಲೆ, ಇತ್ಯಾದಿ ಹಲವಾರು ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ತರಗತಿವಾರು ನಡೆದ ಈ ಎಲ್ಲಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
‘ಗ್ರಾಹಕ ಮಾರುಕಟ್ಟೆಯ ರಾಜ’- ಎನ್ನುವ ವಿಷಯವಾಗಿ 10 ನೇ ತರಗತಿಯ ಕು| ಲಾವಣ್ಯ ಹಾಗೂ ಕು|ಸುಜಯಾ ವಿಶ್ವ ಗ್ರಾಹಕ ದಿನಾಚರಣೆಯ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ, ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜತೆ ಕಾರ್ಯದರ್ಶಿ, ಅಧ್ಯಾಪಕ ರಾಯೀ ರಾಜ ಕುಮಾರರು ಗ್ರಾಹಕ ಹಿತ ರಕ್ಷಣಾ ಕಾಯಿದೆ, ಮಧ್ಯವರ್ತಿಗಳ ಹಾವಳಿ, ಮಾರುಕಟ್ಟೆಯಲ್ಲಿ ಮೋಸಹೋಗುವ ಹಲವಾರು ಸಂದರ್ಭಗಳು, ಗ್ರಾಹಕ ರಕ್ಷಣಾ ವೇದಿಕೆಯಿಂದ ಪಡೆಯಬಹುದಾದ ಅನುಕೂಲತೆಗಳು, ಸಕಾಲ, ಇತ್ಯಾದಿಗಳನ್ನು ವಿವರವಾಗಿ ತಿಳಿಸಿದರು. ಸ್ವತ: ವಿದ್ಯಾರ್ಥಿಗಳು ಗ್ರಾಹಕ ಜಾಗೃತಿಯನ್ನು ಹೇಗೆ ಮೂಡಿಸಬಹುದೆಂಬುದನ್ನೂ ತಿಳಿಸಿಕೊಟ್ಟರು.
ಶಾಲಾ ಗ್ರಾಹಕ ಸಂಘದ ಸಂಯೋಜಕ ಶಿಕ್ಷಕಿ ಶ್ರೀಮತಿ ಸುನೀತಾ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಕು|ಶುಭಲಕ್ಷ್ಮಿ ಸ್ವಾಗತಿಸಿದರು. ಕು|ಅನ್ವಿತಾ ವಂದಿಸಿದರು. ವೇದಿಕೆಯಲ್ಲಿ ಶಾಲಾ ಶಿಕ್ಷಕರುಗಳಾದ ಶ್ರೀಮತಿ ಜಯಶ್ರೀ, ನಳಿನಿ ಬಿ., ಸುಚಿತ್ರಾ ಪೈ,, ಮಣಿತಾ ಹಾಗೂ ಸತ್ಯಶಂಕರ್ ರವರು ಹಾಜರಿದ್ದು ಬಹುಮಾನ ವಿತರಿಸಿದರು.