ಮುಂಬಯಿ (ಆರ್ಬಿಐ), ಮಾ.23: ಮೂಡುಬಿದಿರೆ ಜೈನ ಕಾಶಿಯ ಇತಿಹಾಸ ಪ್ರಸಿದ್ದ ಪ್ರಾಚೀನ ಗುರು ಬಸದಿ ಜೀರ್ಣೋದ್ದಾರ ಗೊಂಡ ಬಳಿಕದ ಪಂಚ ವಾರ್ಷಿಕೋತ್ಸವ ಶ್ರೀ ಜೈನ ಮಠ ಜೈನಕಾಶಿ ಮೂಡುಬಿದಿರೆ ಇದರ ಶ್ರೀ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಕಳೆದ ಸೋಮವಾರ ಶ್ರೀ ಜೈನ ಮಠ ಮೂಡುಬಿದಿರೆ ಇಲ್ಲಿ ಜರುಗಿತು.
ಧಾರ್ಮಿಕ ಕಾರ್ಯಕ್ರಮಗಳಾಗಿಸಿ ಬೆಳಿಗ್ಗೆ ತೋರಣ ಮಹೂರ್ತ, ಕ್ಷೇತ್ರಪಾಲ ನಾಗ ದೇವರ ಷೋಡಶೋಪಚಾರ ಸರಸ್ವತಿ, ಬ್ರಹ್ಮ, ಪದ್ಮಾವತಿ ದೇವಿ ಪೂಜೆ, ಮೇಗಿನ ನೆಲೆ ಶ್ರೀ ಶ್ರೀಮಂದರ ಸ್ವಾಮಿ ಮಹಾ ಅಭಿಷೇಕ ವಿಮಾನ ಶುದ್ಧಿ, ಅಪರಾಹ್ನ ಸರ್ವ ದೋಷ ಪ್ರಯಾಶ್ಚಿಚಿತ್ತ ವಿಧಾನ ಆರಾಧನೆ ಇತ್ಯಾದಿಗಳು ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು.
ಮುಕ್ತೇಸರ ಪಟ್ಣಶೆಟ್ಟಿ ಸುದೇಶ್ ಕುಮಾರ್ ಭೇಟ್ಕೇರಿ, ದಿನೇಶ್ ಕುಮಾರ್, ಆದರ್ಶ್, ವೀರೇಂದ್ರ ಜೈನ್, ಶ್ರೀನಾಥ್ ಬಲ್ಲಾಳ್ ಕಿಜನ ಬೆಟ್ಟುಗುತ್ತು, ವೀರೇಂದ್ರ ಇಂದ್ರ, ಜ್ಞಾನಚಂದ್ರ ಇಂದ್ರ, ಶಂಭವ ಕುಮಾರ್, ರಾಜೇಶ್ವರಿ ಪೂಜಾ ಸೇವಾದಾತಾರಾಗಿದ್ದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಅಭಿಜಿತ್, ಚಕ್ರಶ್ ಅರಿಗಾ, ವಿಜಯಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ನಾಗೇಂದ್ರ ಇಂದ್ರ ಪ್ರತಿಷ್ಟಾ ಇಂದ್ರ ಬಳಗ ಪೂಜಾವಿಧಿ ನೆರವೇರಿಸಿದರು. ಧವಳತ್ರಯ ಟ್ರಸ್ಟ್ (ರಿ.) ಬಳಗದ ನಿರೀಕ್ಷಾ ಜೈನ್ ಭಕ್ತಿಗೀತೆ ಹಾಡಿದರು. ಶ್ರೀ ಜೈನ ಮಠ ಮೂಡುಬಿದಿರೆ ಇದರ ವ್ಯವಸ್ಥಾಪಕ ಸಂಜಯಂಥ ಕುಮಾರ್ ಶೆಟ್ಟಿ ಪೂಜಾ ಸೇವಾದಾತಾರರಿಗೆ ಶ್ರೀಗಳವರ ಪರವಾಗಿ ಪ್ರಸಾದ ವಿತರಿಸಿ ಶುಭ ಹಾರೈಸಿದರು.