ಇಂದು ಆರು ದಿನಗಳ ತುಳುವಿನಲ್ಲಿ ಭಗದ್ಗೀತೆಯ ಸಾರ ಕಾರ್ಯಕ್ರಮದ ಸಮಾರೋಪ
ಮುಂಬಯಿ (ಆರ್ಬಿಐ), ಜೂ.17: ಐಲೇಸಾ ದಿ ವಾಯ್ಸ್ ಆಫ್ ಓಶಿಯನ್ ಮತ್ತು ಇಸ್ಕಾನ್ ಬೆಂಗಳೂರು ಸೌತ್ ಜಂಟಿಯಾಗಿ ಕಳೆದ ಭಾನುವಾರದಿಂದ ನಿರಂತರವಾಗಿ 6 ದಿನಗಳಿಂದ ತುಳುವಿನಲ್ಲಿ ಭಗದ್ಗೀತೆಯ ಸಾರ ಕಾರ್ಯಕ್ರಮವು (ತುಳುವ ಜಾಲ್ಡ್ ಕೃಷ್ಣ ಪಾರ್ದನ) ಯಶಸ್ವಿಯಾಗಿ ನಡೆಸಿದ್ದು ಇದೀಗಲೇ ಸುಮಾರು 31 ರಾಷ್ಟ್ರಗಳಲ್ಲಿನ ಮಹಾನೀಯರು, ಜನರು ಭಾಗವಹಿಸಿರುವರು.
ತುಳು ವಿಶ್ವ ಸಮ್ಮೇಳನ ಯಶಸ್ವಿ ರೂವಾರಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗಲ್ಫ್ ರಾಷ್ಟ್ರದ ಅಬುಧಾಭಿ ಅಲ್ಲಿನ ಅಪ್ರತಿಮ ಸಂಘಟಕ ಸರ್ವೋತ್ತಮ ಶೆಟ್ಟಿ ಉದ್ಘಾಟಿಸಿದ್ದು ಶ್ರೀ ಪ್ರಸಾದೇಶ್ವರ ಕೃಷ್ಣದಾಸ ಸ್ವಾಮೀಜಿ ಕಾರ್ಯಕ್ರಮ ನಡೆಸಿ ಕೊಡುತ್ತಿದ್ದು ಇಂದು ಶುಕ್ರವಾರ (ಜೂ.18) ಸಂಜೆ ವಿಶ್ವ ತುಳು ಸಮ್ಮೇಳನದ ಪ್ರಧಾನ ರೂವಾರಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಧರ್ಮಯೋಗಿ ಡಾ| ಡಿ.ವೀರೇಂದ್ರ ಹೆಗ್ಗಡೆ ಸಮಾರೋಪಕ್ಕೆ ಶುಭಶಂಸನೆಗೈಯಲಿದ್ದು ರಾತ್ರಿ ಸರ್ವೋತ್ತಮ ಶೆಟ್ಟಿ ಅವರೇ ತುಳು ಭಾಷೆಯಲ್ಲಿನ ಪ್ರಥಮ ಭಗದ್ಗೀತೆಯ ಸಾರ ಕಾರ್ಯಕ್ರಮಕ್ಕೆ ತೆರೆಯನ್ನೆಳೆಯಲಿದ್ದಾರೆ ಎಂದು ಟೀಮ್ ಐ ಲೇಸಾ ತಂಡ ತಿಳಿಸಿದೆ.
ಕಳೆದ ಭಾನುವಾರದಿಂದ ನಿರಂತರವಾಗಿ 6 ದಿನಗಳ ಕಾಲ ಪ್ರತಿದಿನಾ ಸಂಜೆ 7.00 ಗಂಟೆಯಿಂದ ರಾತ್ರಿ 8-15 ಗಂಟೆಯ ವರೆಗೆ ನಡೆಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ಇದೀಗಲೇ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವತೀರ್ಥ ಸ್ವಾಮೀಜಿ, ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮಿಜಿ, ಉಡುಪಿ ಶ್ರೀ ಪರ್ಯಾಯ ಮಠಾಧೀಶ (ಅದಮಾರು ಮಠದ ಕಿರಿಯ ಯತಿ) ಶ್ರೀ ಈಶಪ್ರಿಯಾ ತೀರ್ಥ ಶ್ರೀಪಾದರು, ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನ್ದಾಸ್ ಪರಮಹಂಸ ಸ್ವಾಮೀಜಿ, ಕಾಸರಗೋಡು ಉಪ್ಪಳದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಸುಂದರ್ ದಾಸ್ ಪ್ರಭುಜಿ ಬೃಂದಾವನ್ ಐಲೇಸಾದ ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಿ ಹರಸಿದ್ದಾರೆ. ಆರ್ಎಸ್ಎಸ್ ಧುರೀಣ ಡಾ| ಪ್ರಭಾಕರ್ ಭಟ್ ಕಲ್ಲಡ್ಕ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ರಾದ ಧರ್ಮಪಾಲ ದೇವಾಡಿಗ ಸೇರಿದಂತೆ ಹಲವಾರು ಗಣ್ಯರು ಶುಭಶಂಸನೆ ಗೈದಿದ್ದಾರೆ.
ಜಗತ್ತಿನ ಹಲವಾರು ದೇಶಗಳು ಅಲ್ಲಿನ ಗಣ್ಯರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದು ಒಂಬತ್ತು ತಿಂಗಳ ಐಲೀಸಾ ದಿ ವಾಯ್ಸ್ ಆಫ್ ಓಶಿಯನ್ ಮೊದಲ ಬಾರಿಗೆ ಭಗವದ್ಗೀತೆಯನ್ನು ತುಳುವಿನಲ್ಲಿ ತುಳುವ ಜಾಲ್ಡ್ ಕೃಷ್ಣ ಪಾರ್ದನ ಮೂಲಕ ಮಾಡಿಸಿ ತಮ್ಮ ಪ್ರಮುಖ ಪುಟದಲ್ಲಿ ಸೇರಿಸಿ ಕೊಂಡಿದೆ. ಇಂದು ಕೊನೆಯ ದಿನವಾದ ಇಂದು ಶುಕ್ರವಾರ ಒಡಿಯೂರು ಮಠಾಧೀಶ ಶ್ರೀ ಗುರು ದೇವಾನಂದ ಸ್ವಾಮೀಜಿ ಮತ್ತು ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಉಭಯ ಸಂಸ್ಥೆಗಳು ತುಳು ಭಾಷೆಗಾಗಿ ಸಂಸ್ಕೃತಿಗಾಗಿ ಕೈಗೊಂಡ ಈ ಭಕ್ತಿ ಸಾರ ಕಾರ್ಯಕ್ರಮವು ಭಕ್ತರಿಗೆ ಮನೆಯಲ್ಲಿದ್ದೆ ಆನ್ ಲೈನ್ ಮೂಲಕ ನೋಡಿ ಕೇಳಿ ದೇವರ ಕೃಪೆಗೆ ಪಾತ್ರರಾಗಲು ಇದೊಂದು ನೂತನ ಯೋಚನೆ, ಅನುಭವ ಮತ್ತು ಪ್ರಯತ್ನವಾಗಿದೆ. ವಿಶ್ವದ ಇನ್ನಷ್ಟು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ಟೀಮ್ ಐ ಲೇಸಾ ತಂಡದ ಪ್ರಧಾನ ರೂವಾರಿ ರಮೇಶ್ಚಂದ್ರ ಮತ್ತು ಸುರೇಂದ್ರಕುಮಾರ್ ಮಾರ್ನಾಡ್ ತಿಳಿಸಿದ್ದಾರೆ.