Friday 26th, April 2024
canara news

ಮುಂಬಯಿ ಕನ್ನಡಿಗರ ಬಾನಂಗಳದಲ್ಲಿ ಧ್ರುವತಾರೆಯಾಗಿ ಕಂಗೊಳಿಸುತ್ತಿರುವ ಕನ್ನಡತಿ

Published On : 02 Jul 2021   |  Reported By : Rons Bantwal


ತೊಂಬತ್ತರ ನಡಿಗೆಯಲ್ಲೂ ನಲ್ವತ್ತ್ತರ ಉತ್ಸಾಹದ ಸ್ತ್ರೀರತ್ನ-ಡಾ| ಸುನಿತಾ ಎಂ.ಶೆಟ್ಟಿ
(ರೋನ್ಸ್ ಬಂಟ್ವಾಳ್)


ಮುಂಬಯಿ (ಆರ್‍ಬಿಐ), ಜೂ.26: ಸಾಮಾಜಿಕ, ಶೈಕ್ಷಣಿಕ ಮತ್ತು ಸಾಹಿತಿಕ ಕಾಯಕವು ಮಾನವ ಸಂಬಂಧಗಳಲ್ಲಿ ಸಾಮಾಜಿಕ ಬದಲಾವಣೆ, ಸಮಸ್ಯೆಗಳನ್ನು ಪರಿಹರಿಸುವ, ಯೋಗಕ್ಷೇಮ ಹೆಚ್ಚಿಸಲು ಜನರ ಸಬಲೀಕರಣ ಮತ್ತು ವಿಮೋಚನೆಯನ್ನು ಉತ್ತೇಜಿಸುವ ಒಂದು ಪ್ರವೃತ್ತಿ ಅನ್ನುತ್ತಾರೆÉ. ಇದಕ್ಕೆ ಪೂರಕವೆಂಬಂತೆ ಮುಂಬಯಿ ಕನ್ನಡಿಗರ ಬಾನಂಗಳದಲ್ಲಿ ಧ್ರುವತಾರೆಯಾಗಿ ಕಂಗೊಳಿಸುತ್ತಿರುವ ಡಾ| ಸುನೀತಾ ಎಂ.ಶೆಟ್ಟಿ ಸುಮಾರು ಏಳುವರೆ ದಶಕಗಳಿಂದ ಸೇವಾ ಕಾರ್ಯವೃತ್ತಿಯಲ್ಲಿ ಬಹಳ ಶಿಸ್ತುಬದ್ಧರಾಗಿ ಬೆಳೆದವರು. ಹಲವು ಕ್ಷೇತ್ರಗಳಲ್ಲಿ ಇಂದಿನ ವರೆಗೂ ನಂಬಲಾಗದಷ್ಟು ಸಕಾರಾತ್ಮಕ ಮತ್ತು ಆಶಾವಾದಿಯಾಗಿ ಬಾಳು ಬೆಳಗಿಸಿದ ಸುನೀತಾ ಶೆಟ್ಟಿ ಇಂದು (ಜೂ.27) ಜೀವನದ ತೊಂಬತ್ತರತ್ತ ಹೆಜ್ಜೆಯನ್ನಿರಿಸುತ್ತಿರುವುದು ಮಹಾರಾಷ್ಟ್ರ ಕನ್ನಡಿಗರ ಅಭಿಮಾನ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಸುರತ್ಕಲ್ ಇಲ್ಲಿನ ಚೇಳಾೈರು ಮುಂಚೂರು ಮನೆತನದ ಕೂಕ್ರ ಶೆಟ್ಟಿ ಮತ್ತು ಕಳವಾರು ಪಡುಮನೆ ಸುಂದರಿ ಶೆಟ್ಟಿ ಇವರ ಸುಪುತ್ರಿಯಾಗಿ 27.06.1932ರಂದು ಕಳವಾರು ಇಲ್ಲಿ ಸುನೀತಾ ಶೆಟ್ಟಿ ಜನಿಸಿದರು. ಅಪ್ಪಟ ಗಾಂಧಿವಾಧಿ ಮಂಗಳೂರು ಪೆರಾರ ಮುಂಡಬೆಟ್ಟುಗುತ್ತು ಮೂಲತಃ ಮಹಾಬಲ ಶೆಟ್ಟಿ (ಫುಡ್ ಕಾಪೆರ್Çರೇಶನ್ ಆಫ್ ಇಂಡಿಯಾ ಇದರ ಉಪ ವ್ಯವಸ್ಥಾಪಕ) ಅವರನ್ನು (ಸದ್ಯ ಸ್ವರ್ಗೀಯರು) ವರಿಸಿದ್ದು ಭೂಮಿಕಾ ಶೆಟ್ಟಿ ಮತ್ತು ಸಾತ್ವಿಕಾ ಶೆಟ್ಟಿ ಇಬ್ಬರು ಪುತ್ರಿಯರು, ಭರತ್ ಶೆಟ್ಟಿ ಓರ್ವ ಪುತ್ರ ಹೊಂದಿರುವ ಚಿಕ್ಕ, ಚೊಕ್ಕ ಸಂಸಾರ.

ಓರ್ವ ನಾರಿ ಉತ್ತಮ ಮಗಳು, ಸಹೋದರಿ, ಹೆಂಡತಿ, ತಾಯಿ ಇತ್ಯಾದಿ ಆಗುವ ಆಶಯಗಳನ್ನು ಹೊಂದಿರು -ವುದು ಸಾಮಾನ್ಯ. ಶಿಕ್ಷಕಿ, ವೃತ್ತಿಪರ ಮತ್ತು ನಾಯಕಿಯಾಗುವ ಅಗಾಧ ಸಾಮರ್ಥ್ಯ ಹೊಂದಿರುವ ಮಹಿಳೆ ಆಧುನಿಕ ಯುಗದಲ್ಲಿ ತನ್ನ ಕುಟುಂಬವನ್ನು ಪೆÇೀಷಿಸುವ ಸಲುವಾಗಿ ಪ್ರತಿದಿನ ಸಾಕಷ್ಟು ಮನೆ ಕೆಲಸ ಮಾಡುತ್ತಾ ಜೊತೆಗೆ ವೃತ್ತಿಯತ್ತಲೂ ಗಮನ ಹರಿಸುತ್ತಾಳೆ. ಪುರುಷ ಪ್ರಧಾನ ಸಮಾಜದಲ್ಲಿ ನಾವೂ ಸಮಾನತೆ ಪಡೆದು ಏನಾದರೂ ಸಾಧಿಸಬೇಕು ಅಂದುಕೊಂಡರೂ ಮಹಿಳಾ ಪ್ರತಿಭಾನ್ವೇಷಣೆ ಚೌಕಟ್ಟಿನ ಕನಸಿಗಷ್ಟೇ ಸೀಮಿತವಾಗಿರುತ್ತದೆ. ಆದರೆ ಒಂದು ಸಂಪ್ರದಾಯಸ್ಥ ಸಮಾಜದಲ್ಲಿದ್ದೂ ಇನ್ನೂ ಹೆಚ್ಚಿನದನ್ನು ಸಾಧಿಸÀಬೇಕು ಎಂಬ ಛಲವನ್ನು ಸಿದ್ಧಿಸಿ ಸಾಬೀತು ಪಡಿಸುವ ಪ್ರಯತ್ನದಲ್ಲಿ ಮುಂದುವರಿದವರಲ್ಲಿ ಸುನಿತಾ ಶೆಟ್ಟಿ ಓರ್ವರು. ಶಿಕ್ಷಣ, ಅಧ್ಯಯನ, ತುಳು-ಕನ್ನಡ ಸಾಹಿತ್ಯ ಸೇವೆಗೆ ಪೂರ್ಣಜೀವನ ಸವೆಸಿದ್ದರಿಂದಲೇ ಈ ಧೀಶಕ್ತಿ ನಾರಿ ಎಲ್ಲರಿಗೂ ಮಾದರಿ.

ಗುರು ನಾನಕ್ ಖಾಲ್ಸಾ ಕಾಲೇಜ್‍ನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ, ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಆಮಂತ್ರಿತ ಪ್ರಾಧ್ಯಾಪಕಿಯಾಗಿ ಸುಮಾರು ಮೂರುವರೆ ದಶಕಗಳ (36 ವರ್ಷಗಳ) ಕಾಲ ಅಹರ್ನಿಶಿ ಶಿಕ್ಷಣ ಕೈಂಕರ್ಯವನ್ನು ನಡೆಸಿ ಈಗಲೂ ಆಸಕ್ತ ವಿದ್ಯಾಥಿರ್üಗಳಿಗೆ ಮಾರ್ಗದರ್ಶನ ನೀಡುತ್ತಾ ಸಾಹಿತ್ಯ, ಕಲಾ, ಸಂಗೀತ, ಸಾಹಿತ್ಯಾಸಕ್ತರ ಹಸಿವು ನೀಗಿಸುವಲ್ಲಿ ಕಾರ್ಯತತ್ಪರಾಗಿರುವುದು ಶ್ಲಾಘನೀಯ. ಮಹಾರಾಷ್ಟ್ರ ಸರಕಾರದ ಕನ್ನಡ ಭಾಷಾ ಮಂಡಳಿಯ ಸದಸ್ಯೆಯಾಗಿ, ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ಭಾಷಾ ಮಂಡಳಿ ಸದಸ್ಯೆಯಾಗಿ, ಸಂಪಾದಕಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಮಹಾನ್ ಬಂಟ ಸಾಧಕಿ ಮಹಿಳೆಯಾಗಿ ಗುರುತಿಸಿ ಕೊಂಡಿರುವರು. ಎಲ್ಲಾದರೂ ಇರು ಎಂತಾದರೂ ಇರು, ಎಂದಿಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯನ್ನು ಅಕ್ಷರಶಃ ಪಾಲಿಸಿದ ಅಪ್ಪಟ ಕನ್ನಡತಿ.

ತೊಂಬತ್ತರ ಹರೆಯದಲ್ಲಿಯೂ ಸಕಲ ಜನರ ಗೌರವಾದಾರಗಳಿಗೆ ಪಾತ್ರರಾಗಿರುವ ಇವರು ಜ್ಞಾನವೃದ್ಧೆ, ವಯೋವೃದ್ಧೆ ಆಗಿದ್ದರೂ ಯುವತಿಯಷ್ಟೇ ಉತ್ಸಾಹಿಯಾಗಿ ಇಂದಿಗೂ ಸಾಹಿತ್ಯ ಸರಸ್ವತಿ ಆರಾಧಕರಾಗಿದ್ದಾರೆ. ಕನ್ನಡ ಸಂಘ ಮುಂಬಯಿ, ಖಾಲ್ಸಾ ಕಾಲೇಜು ಕನ್ನಡ ಸಂಘ, ಬಂಟರ ಸಂಘ ಮುಂಬಯಿ, ಬಂಟರ ಸಂಘದ ಮಹಿಳಾ ವಿಭಾಗ, ಬಂಟರವಾಣಿಯ ಸಂಪಾದಕ ಮಂಡಳಿ, ಕರ್ನಾಟಕ ಸಂಘ ಮುಂಬಯಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ, ಕನ್ನಡ ಲೇಖಕಿಯರ ಬಳಗ ಮುಂಬಯಿ `ಸೃಜನ', ಕರ್ನಾಟಕ ಸಂಘ ಅಂಧೇರಿ ಹೀಗೆ ಹತ್ತಾರು ಸಂಘ-ಸಂಸ್ಥೆಗಳಲ್ಲಿ ಇಂದಿಗೂ ಸಕ್ರೀಯರಾಗಿರುವರು.

ಖಾಲ್ಸಾ ಕಾಲೇಜ್‍ನ ಕನ್ನಡದ ಹೂದೋಟದಲ್ಲಿ ವಿದ್ಯೆಯೆಂಬ ಹಲವು ಗಿಡಗಳನ್ನು ನೆಟ್ಟು ಆ ಕುಸುಮಗಳು ಸುಗಂಧ ಬೀರುವಂತೆ ಮಾಡಿ, ವಿಶ್ವದಲ್ಲಿ ಎಗ್ಗಿಲ್ಲದೆ ನುಗ್ಗಿ ಸಾಹಿತ್ಯ ಸುಗ್ಗಿ ನೀಡಿದವರು. ಅವರು ನಡೆದದ್ದು ಕಾವ್ಯದ ಹಾದಿಯಲ್ಲಿ, ಕನವರಿಸಿದ್ದು ಜಾನಪದಕಲೆಯನ್ನು, ನಡೆದದ್ದು ಪ್ರವಾಸಿಯ ಹೆಜ್ಜೆಗಳ ಮೂಲಕ ದೇಶ, ವಿದೇಶಗಳಲ್ಲಿ. ಓಡಾಡಿದ್ದು ಸಮಾಜ ಸೇವೆಯಲ್ಲಿ, ನಲಿದಾಡಿದ್ದು ಬಹುಭಾಷಾ ಕವಿಗೋಷ್ಠಿಗಳಲ್ಲಿ, ಸಂತೃಪ್ತರಾದುದು ಕನ್ನಡ ಶಾಲಾ ಬಡಮಕ್ಕಳ ದತ್ತು ಸ್ವೀಕಾರದಲ್ಲಿ ಸವಿದದ್ದು ಗ್ರಂಥಗಳನ್ನು, ಹೀರಿದ್ದು ತುಳು ಕನ್ನಡದ ಕಾವ್ಯರಸವನ್ನು. ತುಳು ಕನ್ನಡ ಭಾಷೆಯ ಬೋಧನೆ ಮತ್ತು ಆ ಭಾಷೆಯ ಸಾಹಿತ್ಯದ ಅಧ್ಯಯನದ ನಡುವೆ ವ್ಯಾಪಕವಾದ ಅಂತರವನ್ನು ಗ್ರಹಿಸಿದ ಶಿಷ್ಯರು ಇಂದಿಗೂ ಇವರ ಆಗಮನವನ್ನು ಬಹಳಷ್ಟು ಸಂತೋಷದಿಂದ ಬರಮಾಡುತ್ತಾರೆ ಮತ್ತು ಗುರುಶಿಷ್ಯರೆಂದು ಪರಿಚಯಿಸಿ ಕೊಳ್ಳಲು ಅಭಿಮಾನ ಪಡುತ್ತಾರೆ.

ಅಧ್ಯಯನವನ್ನು ಇಂದಿಗೂ ಜೀವನದ ಉಸಿರಾಗಿ ಬೆಳೆಸಿಕೊಂಡ ಸುನೀತಾ ಶೆಟ್ಟಿ ಬರೆದು ಪ್ರಕಾಶಿಸಿದÀ ಗ್ರಂಥಗಳು ತುಳು-ಕನ್ನಡ ಸಾಹಿತ್ಯ ಲೋಕವನ್ನೇ ಅಲಂಕರಿಸಿವೆ. ನಿನಾದ, ಅಂತರಗಂಗೆ, ಪಯಣ, ಅಕ್ಷಯ ಸಂಪದ, ಕಾರಂತರ ಕಾದಂಬರಿಗಳಲ್ಲಿ ಸ್ತ್ರೀ (ಪಿಹೆಚ್‍ಡಿ) ಮಹಾ ಪ್ರಬಂಧ, ಸಂಸ್ಕೃತಿ ಪಯಣ, ಪ್ರವಾಸಿಯ ಹೆಜ್ಜೆಗಳು (ಪ್ರವಾಸ ಕಥನ), ಅರವತ್ತು ಕವಿತೆಗಳು, ಬಂಟರು ಕೆಲವು ಅಧ್ಯನಗಳು ಎಂಬ ಹೊತ್ತಿಗೆಗಳು ಕನ್ನಡದಲ್ಲೂ ಮತ್ತು ಪಿಂಗಾರ, ಸಂಕ್ರಾತಿ, ನಾಗಸಂಪಿಗೆ, ಕರಜನ (ಗದ್ಯ), ಗಿರ್‍ಗಿರ್.... ಗಿರಿಜಾ ಬಾಯಿ (ತುಳು ಅಂಕಣ ಬರಹ), ಪದಪನ್ ಕಣ್ಣಾರೋ ಮೊದಲಾದವು ತುಳು ಸಾಹಿತ್ಯದ ಕೃಷಿಗಳಾಗಿವೆ.

ಸುನೀತಾ ಶೆಟ್ಟಿ ತುಳು ಕನ್ನಡದ ಸಮೃದ್ಧ ಸಾಹಿತ್ಯ ಸುಧೆಯನ್ನು ಪಸರಿಸಿದ ಹೊರನಾಡ ಮಹಾನ್ ಸಾಹಿತಿ. ತುಳುನಾಡಿನ ಮಣ್ಣಿನ ಸುಗಂಧವನ್ನು `ನಾಗ ಸಂಪಿಗೆ'ಯ ಕಂಪಿನಿಂದ ಬೀರಿದರು. `ಪಿಂಗಾರ'ದ ಶೃಂಗಾರವನ್ನು ತುಳುನಾಡ ಸಿರಿಗೆ ಅರ್ಪಿಸಿ ಧನ್ಯರಾದವರು. ಕನ್ನಡಾಂಬೆಯ ಉತ್ಸವದಲ್ಲಿ ಭಾಗವಹಿಸುವ ನಿತ್ಯೋತ್ಸಾಹಿ, ಸ್ನೇಹಜೀವಿ. ಸದಾ ಸ್ಫೂರ್ತಿಯ ಸೆಲೆ, ಅರಸಿಕರನ್ನೂ ನಗಿಸುವ, ಕಲಾಸಾಗರದಲ್ಲಿ ಒಯ್ಯುವ ಕಲೆ ಅವರಿಗೆ ಸಿದ್ಧಿಸಿದೆ. ಪಾಡ್ದನಗಳು ಅವರ ತುದಿ ನಾಲಗೆಯಲ್ಲಿವೆ, ಸಾಹಿತ್ಯ, ಸರಸ್ವತಿಗಳ, ಜಾನಪದ ಕಲೆಗಳ ಬೆಲೆ, ನೆಲೆ, ಸೆಲೆಯನ್ನು ಮೈಮನಗಳಲ್ಲಿ ತುಂಬಿಕೊಂಡು ಕರತಲಾಮಲಕ ಮಾಡಿ ಕೊಂಡವರು. ನವಿರಾದ ಹಾಸ್ಯ, ಹಿತವಾದ ಮಾತು, ಮಿತವಾದ ನಡೆನುಡಿಯಿಂದ ಅಜಾತ ಶತ್ರುವಾಗಿ ಬೆಳೆದವರು. ಪರರನ್ನು ಬೆಳೆಗಿಸಿದವರು. ಸಾಹಿತ್ಯ ಕೃಷಿಯಲ್ಲಿ ಅಗ್ರಪಂಕ್ತಿಯಲ್ಲಿದ್ದು ಹತ್ತಾರು ತುಳು, ಕನ್ನಡ ಗ್ರಂಥಗಳನ್ನು ಪ್ರಕಟಿಸಿ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿ, ತುಳುಸಾಹಿತ್ಯ ಅಕಾಡೆಮಿಯಿಂದ ಪುರಸ್ಕøತರಾಗಿ, ಸಾಕಷ್ಟು ವಿಚಾರಗೋಷ್ಠಿ, ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಉದ್ಘಾಟಕರಾಗಿ ಜನರ ಹೃದಯ ಮಂದಿರದಲ್ಲಿ ಇಂದಿಗೂ ರಾರಾಜಿಸುತ್ತಿದ್ದಾರೆ.

ಇವರ ಸರಳತೆ, ಸೌಜನ್ಯತೆ, ತುಳು-ಕನ್ನಡ ಪ್ರೀತಿ, ಅಧ್ಯಯನ ಶೀಲತೆ, ಸಾಹಿತ್ಯಸಕ್ತಿಗಳನ್ನು ಕಂಡು ಮೆಚ್ಚಿಕೊಂಡ ನೂರಾರು ಸಂಘ-ಸಂಸ್ಥೆಗಳು ರಾಣಿಅಬ್ಬಕ್ಕ ಪ್ರಶಸ್ತಿ, ಪೆÇಳಲಿ ಶೀನಪ್ಪ ಹೆಗಡೆ ಪ್ರಶಸ್ತಿ, ಹೃದಯವಂತರು, ದೇಶಭಕ್ತ ಕಿಲ್ಲೆ ಸಾಹಿತ್ಯ ಪ್ರಶಸ್ತಿ, ಸುಮಸೌರಭ ಸಾಹಿತ್ಯ ಪ್ರಶಸ್ತಿ, ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಂಘ ಮುಂಬಯಿ ಇದರ ಸಾಧಕ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಸಾಹಿತ್ಯರತ್ನ ಇತ್ಯಾದಿ ಮಹಾನ್ ಪ್ರಶಸ್ತಿಗಳ ಅಲಂಕಾರವು ತಮಗೆ ಉಚ್ಛ ಗೌರವವನ್ನೇ ನೀಡಿದೆ. ವಿಶ್ವದ ಸಮಸ್ತ ತುಳು ಭಾಂದವರ ಬೃಹತ್ ಉತ್ಸವವಾಗಿ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ (2009) ನಡೆದ ವಿಶ್ವ ತುಳು ಸಮ್ಮೇಳನದ ತುಳು ಕವಿಗೋಷ್ಠಿಯ ಉದ್ಘಾಟಕಿಯಾಗಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರಿಂದ ಗುರವಿಸಲ್ಪಟ್ಟಿದ್ದರು. ಈ ಇಳಿವಯಸ್ಸಿನಲ್ಲೂ ತಣ್ಣಗಾಗದ ತಮ್ಮ ನಡೆನುಡಿಯ ಸೇವೆಗೆ ಅದೆಷ್ಟೋ ಗೌರವಗಳು, ಸನ್ಮಾನ, ಪ್ರಶಸ್ತಿಗಳ ಮಹಾಪೂರವೇ ಇವರನ್ನು ಅರಸಿ ಬರುತ್ತಿರುವುದಕ್ಕೆ ಕೊರಂಗ್ರಪಾಡಿ ಮನೆತನದ ಎಂಆರ್‍ಜಿ ಸಮೂಹದ (ಗೋಲ್ಡ್‍ಫಿಂಚ್) ಪ್ರವರ್ತಕ ಕೊರಂಗ್ರಪಾಡಿ ಪ್ರಕಾಶ್ ಎಂ.ಶೆಟ್ಟಿ ಅವರ ಅಮೃತಮಹೋತ್ಸವ ಸಂಭ್ರದಲ್ಲಿ ಸ್ವರ್ಣ ಪದಕ ನೀಡಿ ಇವರನ್ನು ಸನ್ಮಾನಿಸಿರುವುದೇ ಸಾಕ್ಷಿಯಾಗಿದೆ.

ಉತ್ಕಟ ಕಲಾಭಿಮಾನ, ಅಪ್ಪಟ ಕಲಾಸೇವೆ ಸ್ನೇಹವಂತಿಕೆಯ ಜೀವಂತ ಪ್ರತಿಮೆ, ಅಕ್ಕರೆಯ ಒಲುಮೆ, ಸಕ್ಕರೆಯಂತೆ ಸವಿಮಾತಿನ ಕುಲುಮೆ, ಉದಾತ್ತ ವಿಚಾರದ ನಿಲುಮೆಯಿಂದ ತೊಂಬತ್ತರ ಇಳಿವಯಸ್ಸಿನಲ್ಲೂ ಷೋಡಶಿಗಳೂ ನಾಚುವಂತೆ ಆಧುನಿಕ ದೃಷ್ಟಿಕೋನದೊಂದಿಗೆ ಸಾಹಿತ್ಯದ ಭಟ್ಟಿ ಇಳಿಸುತ್ತಿರುವ ಸುನೀತಾ ಶೆಟ್ಟಿ ಅವರ ಕಾರ್ಯವೈಖರಿ ಮೆಚ್ಚಲೇಬೇಕು. ಮುಂಬಯಿ ತುಳು ಕನ್ನಡಿಗರ ಬಾನಂಗಳದಲ್ಲಿ ಧ್ರುವತಾರೆಯಾಗಿ ಕಂಗೊಳಿಸುತ್ತಿರುವ ಕನ್ನಡದ ಕಣ್ಮಣಿ ಎಂದರೂ ಅತಿಶಯೋಕ್ತಿಯಾಗದು. ಕನ್ನಡಾಂಬೆಯ ನಲ್ಮೆಯ, ಒಲ್ಮೆಯ ವರದಾನ `ಸ್ತ್ರೀ ರತ್ನ ಸುನೀತಾ ಶೆಟ್ಟಿ' ಆಗಿದ್ದಾರೆ. ಸದಾ ಸಾಹಿತ್ಯ ಕ್ರಿಯಾಶೀಲರಾದ ತಾವು ರಾಜ್ಯ ಮಟ್ಟ, ರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸುವಿಕೆ, ವಿಶ್ವತುಳು ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ, ವಿಶ್ವ ಬಂಟ ಸಮ್ಮೇಳನದಲ್ಲಿ ಗೌರವಅತಿಥಿü, ಬಂಟರವಾಣಿ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯೆ, ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷೆ ಆಗಿರುವುದು ತುಳು ಕನ್ನಡಿಗರ ಒಲುಮೆಯ ಅಮ್ಮಾ ಅಂದು ಕೊಂಡಿರುವುದೇ ಇವರ ಹಿರಿಮೆಯಾಗಿದೆ. ಖಾಲ್ಸಾ ಕಾಲೇಜು ಕನ್ನಡ ಸಂಘ ದತ್ತಿನಿಧಿ, ಕನ್ನಡ ಸಂಘ ಮುಂಬಯಿ ದತ್ತಿನಿಧಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊರನಾಡ ಸಂಸ್ಥೆ ಕರ್ನಾಟಕ ಸಂಘ ಮುಂಬಯಿ ಸಂಸ್ಥೆಗೂ ದತ್ತಿ ನೀಡಿದ್ದು ಈ ಮೊತ್ತದಿಂದ ವಾರ್ಷಿಕ `ಡಾ| ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ' ರೂಪಿಸಿದ್ದು ಸಂಸ್ಥೆ ಪ್ರಶಸ್ತಿ ಪ್ರದಾನಿಸುತ್ತಿದೆ.

ಇಂದು ತಮ್ಮ 89ನೇ ಹುಟ್ಟುಹಬ್ಬ ಪೂರೈಸಿ ತೊಂಬತ್ತನೇ ಸಂವತ್ಸರದ ಬಾಳಿನತ್ತ ದಾಪುಗಾಲು ಇಡುತ್ತಿರುವ ಅವರಿಗೆ ಶುಭಾಶಯಗಳು, ನಿಜವಾಗಿಯೂ ಈ ಹಿರಿಜೀವ ನಮಗೂ ಭಾವೀ ಜನಾಂಗಕ್ಕೂ ಸ್ಪೂರ್ತಿಯ ಸೆಳೆಯಾಗಿದ್ದು ಅವರ ಯಶಸ್ಸಿನ ಮತ್ತು ಸಂತೋಷ, ಸಮ್ರುದ್ಧಿಯ ಬಾಳಿನ ಪ್ರೇರಣೆ ಯುವ ಪೀಳಿಗೆಗೆ ಆದರ್ಶ ಮತ್ತು ಮಾದರಿ ಆಗಲಿ ಅನ್ನುತ್ತಾ ಸುನೀತಾ ಶೆಟ್ಟಿ ಇವರಿಗೆ ಶತಾಯುಷ್ಯ ಪ್ರಾಪ್ತಿಯಾಗಲೆಂದೇ ನಮ್ಮ ಶುಭಾರೈಕೆಗಳು.!

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here