ಮುಂಬಯಿ (ಆರ್ಬಿಐ), ಜು.17: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಹಾಗೂ ರಜಕ ಸಂಘ ಮುಂಬಯಿ ಹಿರಿಯ ಸದಸ್ಯ, ದೆಹಲಿವಾರ್ತೆ ಕನ್ನಡ ದೈನಿಕದ ಮಾಜಿ ವರದಿಗಾರ ಡಿ.ಆರ್ ಸಾಲಿಯನ್ (ದೊಡ್ಡಯ್ಯ ರಾಮ ಸಾಲಿಯಾನ್ -72.) ಅಲ್ಪಕಾಲದ ಅನಾರೋಗ್ಯದಿಂದ ಇಂದಿಲ್ಲಿ ಶನಿವಾರ ಮುಂಜಾನೆ ತಮ್ಮ ಡೊಂಬಿವಿಲಿಯ ಸ್ವನಿವಾಸದಲ್ಲಿ ನಿಧನರಾದರು.
ರಜಕ ಸಂಘ ಮುಂಬಯಿ ಇದರ ನಿಕಟಪೂರ್ವ ಅಧ್ಯಕ್ಷ ಸತೀಶ್ ಆರ್.ಸಾಲ್ಯಾನ್, ಪತ್ರಕರ್ತರ ಸಂಘದ ವಿಶೇಷ ಆಮಂತ್ರಿತ ಸದಸ್ಯ ಸಾ.ದಯಾ (ದಯಾನಂದ್ ಸಾಲ್ಯಾನ್) ಮತ್ತಿತರ ಗಣ್ಯರು ಮೃತರ ಅಂತಿಮ ದರ್ಶನ ಪಡೆದು ಬಾಷ್ಪಾಂಜಲಿ ಕೋರಿದರು.
ಮಂಗಳೂರು ಕಾಟಿಪಳ್ಳ ಸೂರಿಂಜೆ ಇಲ್ಲಿನ ಆಶೀರ್ವಾದ್ ಮನೆತನದ ಮೂಲತಃ ಇವರು ಡೊಂಬಿವಿಲಿ ಪೂರ್ವದ ರಾಜಾಜಿ ರಸ್ತೆಯಲ್ಲಿನ ಮಲ್ಹಾರಿ ಕೃಪಾ ನಿವಾಸಿ ಆಗಿದ್ದರು. ಮೃತರು ಪತ್ನಿ ಇಬ್ಬರು ಸುಪುತ್ರರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಕರ್ನಾಟಕ ಸಂಘ ಡೊಂಬಿವಿಲಿ ಸದಸ್ಯ, ಗ್ರಂಥಾಲಯ ಸಮಿತಿ ಸದಸ್ಯರೂ ಆಗಿದ್ದರು. ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನಡೆಸಲ್ಪಟ್ಟಿತು.
ಅಗಲಿದ ದಿವ್ಯಾತ್ಮಕ್ಕೆ ರಜಕ ಸಂಘ ಮುಂಬಯಿ ಇದರ ಅಧ್ಯಕ್ಷ ದಾಸು ಸಿ.ಸಾಲ್ಯಾನ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸೇರಿದಂತೆ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಕೋರುತ್ತಾ ಕುಟುಂಬಕ್ಕೆ ಸಾಂತ್ವಾನ ತಿಳಿಸಿದ್ದಾರೆ.