ಮುಂಬಯಿ (ಆರ್ಬಿಐ), ಜು.16: ಜೈನ ಧರ್ಮ ಬಂಧು 108 ದಿವ್ಯ ಸಾಗರ ಮುನಿ ರಾಜರು ಇಂದು ಶುಕ್ರವಾರ ಜೈನಕಾಶಿ ಮೂಡುಬಿದಿರೆಗೆ ಪುರಪ್ರವೇಶ ಮಾಡಿದರು. ಮುಂಜಾನೆ ಪೆರಿಂಜೆ, ಕಾಶಿಪಟ್ಟಣ ನಾರಾವಿ, ನೆಲ್ಲಿಕಾರು, ಶಿರ್ತಾಡಿ ಮೊದಲಾದ ಬಸದಿಗಳ ದರ್ಶನ ಮಾಡಿ ಚಾತುರ್ಮಾಸ ಆಚರಣೆಗಾಗಿ ಆಗಮಿಸಿದ ಮುನಿ ವರ್ಯರನ್ನು ಜೈನ ಕಾಶಿ ಭಟ್ಟಾರಕರ ಕೆರೆ ಬಳಿ ಬರಮಾಡಿ ಕೊಳ್ಳಲಾಯಿತು.
ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಇದರ ಶ್ರೀ ಜೈನ ಮಠದಲ್ಲಿ ಸ್ವಸ್ತಿಶ್ರೀ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಉಪಸ್ಥಿತಿಯಲ್ಲಿ ಸ್ಥಾನೀಯ ಮೂಡುಬಿದಿರೆ ಶ್ರಾವಕ ಶ್ರಾವಿಕೆಯರು, ಕೇಳ, ಶಿರ್ತಾಡಿ, ಮುನಿ ಭಕ್ತರು ಸೇರಿ ಪೂರ್ಣಕುಂಭ ಸ್ವಾಗತ ಮಾಡಿ ಬರಮಾಡಿ ಕೊಂಡರು.
ಬಳಿಕ ಪಟ್ಟದ ಪುರೋಹಿತ ಶ್ರೀ ಪಾರ್ಶ್ವನಾಥ ಇಂದ್ರರು ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿಗೆ ಅಭಿಷೇಕ ಆರತಿ ಬೆಳಗಿ ಗುರು ವಂದನೆ ನಡೆಸಲಾಯಿತು. ಪಟ್ಟಣ ಶೆಟ್ಟಿ ಸುದೇಶ್ ಕುಮಾರ್ ಮುಕ್ತೇಸರರು,ಅಧ್ಯಾಪಕ ಪದ್ಮಶೇಖರ್ ಶಿರ್ತಾಡಿ, ಜಯ ಪ್ರಸಾದ್, ಮಹಾವೀರ ಕೇಳ, ಸುಬಲಿ ರಾಜ್, ಪ್ರವೀಣ್ಚಂದ್ರ ಜೈನ್, ಮಿತ್ರಸೇನ ಸಂಜಿತ್, ಸಂಜಯಂಥ ಕುಮಾರ್ ಶೆಟ್ಟಿ, ಸುವಿಧಿ ಮೊದಲದವರು ಉಪಸ್ಥಿತರಿದ್ದರು ಇದೇ ಬರುವ ಶನಿವಾರ (ಜು.24) ಶ್ರೀ ಜೈನ ಮಠದಲ್ಲಿ ಚಾತುರ್ಮಾಸ ಕಲಶ ಸ್ಥಾಪನೆ ಜರುಗಲಿದೆ ಎಂದು ಶ್ರೀ ಜೈನ ಮಠ ಮೂಡು ಬಿದಿರೆ ಇದರ ವ್ಯವಸ್ಥಾಪಕರು ತಿಳಿಸಿದ್ದಾರೆ.