ಮುಂಬಯಿ (ಆರ್ಬಿಐ), ಆ.02: ಉದ್ಯೋಗದಲ್ಲಿ ಶಿಸ್ತು-ಬದ್ಧತೆ, ಪ್ರಾಮಾಣಿಕತನ ಉಳಿಸಿಕೊಂಡರೆ ಸಂಸ್ಥೆ ಹಾಗೂ ವ್ಯಕ್ತಿತ್ವಕ್ಕೆ ಮೌಲ್ಯ ಬರುತ್ತದೆ ಎಂದು ಕಲಬುರಗಿಯ ಖ್ಯಾತ ವೈದ್ಯ ನಾಡೋಜ ಡಾ| ಪಿ.ಎಸ್. ಶಂಕರ ಅಭಿಪ್ರಾಯ ಪಟ್ಟರು.
ಕಲಬುರಗಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರು ಹಾಗೂ ನಿಲಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ರಾಜೇಂದ್ರ ಆರ್.ಕುಲಕರ್ಣಿ ಕಳೆದ ಶನಿವಾರ (ಜು.31) ಸೇವಾನಿವೃತ್ತಿ ಹೊಂದಿದ ಸಂದರ್ಭದಲ್ಲಿ ಕಲಬುರಗಿಯಲ್ಲಿ ನಡೆಸಲ್ಪಟ್ಟ ಸಾರ್ವಜನಿಕ ಬೀಳ್ಕೂಡುಗೆ ಕಾರ್ಯಕ್ರಮದಲ್ಲಿ ಅಧ್ಯತೆ ವಹಿಸಿ ಮಾತನಾಡಿದ ಡಾ| ಶಂಕರ, ಶಿಸ್ತುಬದ್ಧ ಜೀವನ ಹಾಗೂ ಪಾರದರ್ಶಕ ಆಡಳಿತದಿಂದ ವ್ಯಕ್ತಿಗೂ ದುಡಿಯುವ ಸಂಸ್ಥಗೂ ಹೆಸರು ಲಭಿಸುತ್ತದೆ ಎಂದರು.
ಹಿರಿಯ ಸಾಹಿತಿ ಡಾ| ಸ್ವಾಮಿರಾವ್ ಕುಲಕರ್ಣಿ ಮಾತನಾಡಿ ವಿದ್ಯೆಯಿಂದ ಶಿಕ್ಷಣ ಸಿಗುತ್ತದೆ. ಸಂಸ್ಕಾರದಿಂದ ಮೌಲ್ಯಗಳು ಲಭಿಸುತ್ತವೆ. ನೇರ-ದಿಟ್ಟ-ನಿರಂತರ ಬದುಕು ವೃತ್ತಿ ಪ್ರವೃತ್ತಿಯಲ್ಲಿ ರೂಡಿಸಿಕೊಂಡಾಗ ಹೆಸರು ಬರುತ್ತದೆ ಎಂದರು.
ಕೃಷಿ ವಿವಿಯ ವಿಶ್ರಾಂತ ಕುಲಪತಿ ಡಾ| ವಿ.ಐ ಬೆಣಗಿ ಮಾತನಾಡಿ ಆಕಾಶವಾಣಿಯ ಕೃಷಿ ರಂಗಕ್ಕೆ ಸಕಾಲಿಕ ಮತ್ತು ವಿಶೇಷಣಾತ್ಮಕ ಮನೋಧರ್ಮ ರೂಢಿಸಿ ರೈತರ ಬಾಳು ಹಸನು ಮಾಡಿದ ಹೆಗ್ಗಳಿಕೆ ರಾಜೇಂದ್ರ ಕುಲರ್ಕಣಿಯವರಿಗೆ ಸಲ್ಲುತ್ತದೆ ಎಂದರು.
ಬಾಲ್ಯದಿಂದಲೇ ಮಕ್ಕಳಿಗೆ ಬದುಕಿನ ಶಿಕ್ಷಣ ನೀಡಿದಲ್ಲಿ ಮಕ್ಕಳು ಸಮಾಜದ ಆಸ್ತಿ ಮತ್ತು ದೇಶಕ್ಕೆ ಬೆಳಕಾಗಬಲ್ಲರು ಎಂದು ರಾಜೇಂದ್ರ ಕುಲಕರ್ಣಿ ಅವರ ತಂದೆಯವರಾದ ರಾಮ ರಾವ್ ಕುಲಕರ್ಣಿ ಹೇಳಿದರು.
ಆಕಾಶವಾಣಿಯ ಮೂಲಕ ಕಾರ್ಯಕ್ರಮಗಳು ಮತ್ತು ಕಾರ್ಯಕ್ರಮ ನಿರ್ವಾಹಕರ ಶ್ರಮವನ್ನು ಪತ್ರಕರ್ತ ಧರ್ಮಣ್ಣ ಧನ್ನಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅನಿಲ್ಕುಮಾರ್ ಹೆಚ್.ಎನ್, ಸೋಮಶೇಖರ ಎಸ್.ರಳಿ, ಶಾರದಾ ಜಂಬಲದಿನ್ನಿರು ಸಂಗಮೇಶ್, ನಿವೃತ್ತ ಸಹಾಯಕ ನಿರ್ದೇಶಕ ಎಂ.ಬಿ ಪಾಟೀಲ್, ವಿಜ್ಞಾನ ಕೇಂದ್ರದ ಲಕ್ಷ್ಮೀನಾರಾಯಣ, ಆಕಾಶವಾಣಿಯ ಹಿರಿಯ ವರದಿಗಾರರಾಗಿದ್ದ ಎಸ್.ಜೋಷಿ, ಪ್ರಗತಿಪರ ಕೃಷಿಕ ಸೋಮನಾಥ ರೆಡ್ಡಿ, ಕೃಷಿ ವಿಜ್ಞಾನ ಕೇಂದ್ರದ ನಜೀರ್ ಅಹ್ಮದ್, ರಾಜು ತೆಗ್ಗಳ್ಳಿ, ಜೆಸ್ಕಾಂ ಪ್ರದಾನ ವ್ಯವಸ್ಥಾಪಕಿ ಪ್ರಮೀಳಾ ಎಂ.ಕೆ, ಡಾ| ಮಲ್ಲಾರಾವ್ ಮಲ್ಲೆ, ಕುಪೇಂದ್ರಶಾಸ್ರಿ ಕೃಷ್ಣಿಮೂರ್ತಿ, ಮಧುಸೂದನ ಟೇಂಗಳಿಕರ್, ಲತಾ ಟೇಂಗಳಿಕರ್, ಉಷಾ ಪಾಟೀಲ್, ವಾಸುದೇವ ಪಾಟೀಲ್ ವೈಜಾಪುರ, ಶಾಂತಾ ಭೀಮಸೇನರಾವ್, ಆಕಾಶವಾಣಿ ನಿವೃತ್ತ ಅಧಿಕಾರಿ ಅಂಜನಾ ಯಾತನೂರು, ಗು.ವಿವಿಯ ಡಾ| ಚಂದ್ರಕಾಂತ ಯಾತನೂರು, ಪತ್ರಕರ್ತರಾದ ಶೇಷಮೂರ್ತಿ ಅವಧಾನಿ, ರಾಘವೇಂದ್ರ ದೇಸಾಯಿ, ಎಂ.ಎನ್. ಸುಗಂಧಿ, ಬಸವರಾಜ ಸ್ವಾಮಿ, ಬಸವರಾಜ್ ಮತ್ತಿತರರಿದ್ದರು.
30 ವರ್ಷಗಳ ಸೇವೆ ತೃಪ್ತಿ ನೀಡಿದ್ದು ನಾಡಿನ ಸಾಂಸ್ಕ್ರತಿಕ ಮೌಲ್ಯ ವರ್ಧನೆಗೆ ಕೊಡುಗೆಯಾಗಲು ಆಕಾಶವಾಣಿ ಅತ್ಯುತ್ತಮ ಮಾಧ್ಯಮ ಎಂದು ರಾಜೇಂದ್ರ ಕುಲಕರ್ಣಿ ತಿಳಿಸಿದ್ದು, ಕಾರ್ಯಕ್ರಮ ನಿರ್ವಾಹಕ ಡಾ| ಸದಾನಂದ ಪೆರ್ಲ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲಕ್ಷ್ಮೀಕಾಂತ್ ಪಾಟೀಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.