ಮುಂಬಯಿ (ಆರ್ಬಿಐ), ಆ.02: ಕೊರೊನಾ ಲಾಕ್ಡೌನ್ನಿಂದಾಗಿ ಮುಂಬಯಿಯಲ್ಲಿ ಕ್ಯಾಟರಿಂಗ್ ಮತ್ತು ಡೆಕೋರೇಷನ್ ಉದ್ಯಮಕ್ಕೆ ಬಹಳಷ್ಟು ಧಕ್ಕೆಯಾಗಿದ್ದು ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವ ಸಲುವಾಗಿ ಇಂದಿಲ್ಲಿ ನವಿಮುಂಬಯಿ ವೆಡ್ಡಿಂಗ್ ಅಸೋಸಿಯೇಶನ್ (ರಿ.) ನಿಯೋಗವು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ದಾದರ್ ಶಿವಾಜಿ ಪಾರ್ಕ್ನ ಕೃಷ್ಣ ಕುಂಜ ನಿವಾಸದಲ್ಲಿ ಭೇಟಿಯಾಗಿ ತಮ್ಮ ಉದ್ಯಮದ ಸಮಸ್ಯೆಗಳನ್ನು ತಿಳಿಸಿ ಮನವಿಸಲ್ಲಿಸಿದರು.
ಸಮಸ್ಯೆಗಳ ನಿವಾರಣೆಗಾಗಿ ಕಳೆದ ಕೆಲವು ತಿಂಗಳುಗಳಿಂದ ಈ ಅಸೋಸಿಯೇಶನ್ ಬಹಳ ಶ್ರಮ ಪಡುತ್ತಾ ಹಲವಾರು ಮಂತ್ರಿಗಳ ಬಳಿ ತೆರಳಿ ನೆನೆಗುದಿಗೆ ಬಿದ್ದಿರುವ ಈ ಉದ್ಯಮವನ್ನು ಮತ್ತು ಈ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಿ ಕ್ಯಾಟರಿಂಗ್ ಉದ್ಯಮವನ್ನು ಉಳಿಸುವ ಪ್ರಯತ್ನ ನಡೆಸಬೇಕಾಗಿ ಮನವಿ ನೀಡಿದೆ.
ಈ ಸಂದರ್ಭದಲ್ಲಿ ವೆಡ್ಡಿಂಗ್ ಅಸೋಸಿಯೇಶನ್ ಅಧ್ಯಕ್ಷ ಸಿಂಧೂರ್ ರಾಜೇಶ್ ಗೌಡ, ಕಾರ್ಯದರ್ಶಿ ಉಮೇಶ್ ದರ್ವೇಸ್, ಕೋಶಾಧಿಕಾರಿ ಕೈಲಾಸ್ ಮುದ್ರಾಸ್, ಮಾರ್ಗದರ್ಶಕರಾದ ಗಿರೀಶ್ ರಾವ್ ಮುಂತಾದ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಕೇಟರಿಂಗ್ ಉದ್ಯಮದ ಸಮಸ್ಯೆಗಳನ್ನು ಆಲಿಸಿದ ರಾಜ್ ಸಾಹೇಬ್ ಆದಷ್ಟು ಬೇಗ ರಾಜ್ಯದ ಗ್ರಹಮಂತ್ರಿ ಅಜಿತ್ ಪವಾರ್ ಅವರನ್ನು ಭೇಟಿಯಾಗಿ ನಿಮ್ಮ ಉದ್ಯಮದ ಕಾನೂನು ಸಡಿಲಿಕೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾಗಿ ಸಿಂಧೂರ್ ರಾಜೇಶ್ ಗೌಡ ತಿಳಿಸಿದ್ದಾರೆ.