ರೈತರು ಹಾಗೂ ಎಲ್ಲ ವರ್ಗದ ಗ್ರಾಹಕರ ಹಿತರಕ್ಷಣೆಯೊಂದಿಗೆ ರಾಜ್ಯ ಇಂಧನ ಇಲಾಖೆಗೆ ಮುಂದಿನ 17 ತಿಂಗಳಲ್ಲಿ ಹೊಸ ರೂಪು ನೀಡಿ ದೇಶದಲ್ಲೇ ಮಾದರಿ ಇಲಾಖೆಯಾಗಿ ಪರಿವರ್ತಿಸುವುದಾಗಿ ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕøತಿ ಖಾತೆಯ ಸಚಿವರಾದ ಸುನೀಲ್ ಕುಮಾರ್ ಹೇಳಿದರು.
ಕಲಬುರಗಿಯಲ್ಲಿ ಹೋಟೆಲ್, ಬೇಕರಿ ಮತ್ತು ವಸತಿಗೃಹ ಮಾಲಿಕರ ಸಂಘ, ದಕ್ಷಿಣ ಕನ್ನಡ ಸಂಘ ಹಾಗೂ ಆರ್ಯ ಈಡಿಗ ಸಮಾಜದ ವತಿಯಿಂದ ಸೆ. 7 ರಂದು ಹೋಟೆಲ್ ಆಮಂತ್ರಣ ಸಭಾಂಗಣದಲ್ಲಿ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಸಚಿವರು ಮಾತನಾಡುತ್ತಿದ್ದರು. ರೈತರು, ಹೋಟೆಲ್ ಹಾಗೂ ಕೈಗಾರಿಕಾ ಉದ್ದಿಮೆದಾರರು ಕೋವಿಡ್ ಕಾಲದಲ್ಲಿ ನಷ್ಟ ಅನುಭವಿಸಿ ತೀವ್ರ ತೊಂದರೆಗೆ ಒಳಗಾಗಿದ್ದಾರೆ. ವಿದ್ಯುತ್ ಬಿಲ್ ಮನ್ನಾ ಅಸಾಧ್ಯವಾದರೂ ಸಂಕಷ್ಟಕ್ಕೆ ಹೇಗೆ ನೆರವಾಗಬಹುದು ಎಂಬುದನ್ನು ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಕಾನೂನಿನ ಚೌಕಟ್ಟಿನಲ್ಲಿ ನೆರವಾಗುವುದಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ರೈತರು ವಿದ್ಯುತ್ ಪೂರೈಕೆಯ ಅವಧಿ ಬಗ್ಗೆ ಅಹವಾಲುಗಳನ್ನು ಸಲ್ಲಿಸಿದ್ದು ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು. ಇಲಾಖೆಯ ಎಲ್ಲ ಎಸ್ಕಾಂಗಳಿಗೆ ಭೇಟಿ ಕೊಟ್ಟು ಪರಿಸ್ಥಿತಿ ಅಧ್ಯಯನ ಮತ್ತು ಗ್ರಾಹಕ ಸ್ನೇಹಿ ವ್ಯವಸ್ಥೆ ಕಲ್ಪಿಸಲು ಶ್ರಮಿಸಲಾಗುತ್ತದೆ. ಇನ್ನುಳಿದ 17 ತಿಂಗಳಲ್ಲಿ ನಾಡಿನ ಜನರ ಸಹಕಾರದೊಂದಿಗೆ ಸರ್ವಾಂಗೀಣ ಬದಲಾವಣೆಯೊಂದಿಗೆ ಇಲಾಖೆಯ ಕಾರ್ಯಶೈಲಿ ಮತ್ತು ಅಭಿವೃದ್ಧಿ ಪರ ಯೋಜನೆಗಳಿಗೆ ರೂಪು ನೀಡಿ ದೇಶದಲ್ಲೇ ಮಾದರಿ ಇಲಾಖೆಯಾಗಿ ಪರಿವರ್ತಿಸಲು ಮನಸ್ಸು ಮಾಡಿರುವುದಾಗಿ ಹೇಳಿದ ಅವರು 56 ವರ್ಷಗಳ ದಕ್ಷಿಣ ಕನ್ನಡ ಸಂಘದ ಕೆಲಸ ಪ್ರಶಂಸನೀಯವಾದುದು ಎಂದು ಹೇಳಿದರು.
ಖ್ಯಾತ ಉದ್ಯಮಿ ಮತ್ತು ರಾಜ್ಯ ಹೋಟೆಲ್ ಅಸೋಸೆಯೇಶನ್ನ ಉಪಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ಇಂಧನ ಇಲಾಖೆ ದೊಡ್ಡ ಖಾತೆಯಾಗಿದ್ದು ದಕ್ಷ ಸಚಿವರ ದೂರದೃಷ್ಟಿ ಯೋಜನೆಗಳಿಂದ ನಾಡಿನ ಜನತೆಗೆ ಸಹಕಾರಿಯಾಗಲಿ. ಸಾಮಾನ್ಯ ವ್ಯಕ್ತಿಯೊಬ್ಬ ತಮ್ಮ ಶ್ರಮ, ನಿಷ್ಠೆಯಿಂದ ಅತೀ ದೊಡ್ಡ ಖಾತೆ ಪಡೆಯುವಂತಾದುದು ಯೋಗ್ಯತೆಗೆ ಸಂದ ಗೌರವÀ ಎಂದು ಪ್ರಶಂಸಿಸಿದರು. ಹೋಟೆಲ್ ಉದ್ಯಮಿಗಳು ಕೋವಿಡ್ ಸಂಕಷ್ಟಕ್ಕೆ ತುತ್ತಾಗಿ ತೀವ್ರ ಕಷ್ಟ ನಷ್ಟ ಅನುಭವಿಸಿರುವುದರಿಂದ ಇಲಾಖೆಯ ಬಿಲ್ ಪಾವತಿ ಅವಧಿ ವಿಸ್ತರಣೆ ಮಾಡಬೇಕು, ಶುಲ್ಕ ಕಡಿತ ಮುಂತಾದ ನೆರವು ನೀಡಬೇಕೆಂದು ಹೋಟೆಲ್ ಸಂಘದ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ನರಸಿಂಹ ಮೆಂಡನ್ ಹೇಳಿದರು.
ಆರ್ಯ ಈಡಿಗ ಸಮಾಜದ ಕಲಬುರಗಿಯ ಜಿಲ್ಲಾ ಅಧ್ಯಕ್ಷ ರಾಜೇಶ ಗುತ್ತೇದಾರ್ ಮಾತನಾಡಿ 26 ಒಳಪಂಗಡಗಳಿರುವ ಹಾಗೂ 60 ಲಕ್ಷಕ್ಕೂ ಅಧಿಕ ಜನಸಮುದಾಯ ಇರುವ ಈಡಿಗ ಸಮುದಾಯಕ್ಕೆ ‘ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ’ವನ್ನು ಸರಕಾರ ಘೋಷಣೆ ಮಾಡಬೇಕು ಎಂದರು. ಸಭೆಯಲ್ಲಿ ಹಾಜರಿದ್ದ ಉದ್ಯಮಿ ಸತೀಶ್ ಗುತ್ತೇದಾರ್ ಮಾತನಾಡಿ ಬಡ ರೈತರ ಹಿತದೃಷ್ಟಿಯಿಂದ ವಿದ್ಯುತ್ ಪೂರೈಕೆ ಅವಧಿ ಬಗ್ಗೆ ಮರು ಚಿಂತನೆ ಮಾಡುವಂತೆ ಇಂಧನ ಸಚಿವರಿಗೆ ರೈತರ ಪರ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ಮತ್ತಿಮೂಡ್, ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಉದ್ಯಮಿ ಚಂದ್ರಕಾಂತ ಗುತ್ತೇದಾರ್, ಸತ್ಯನಾಥ ಶೆಟ್ಟಿ, ಪ್ರಶಾಂತ್ ಶೆಟ್ಟಿ ಇನ್ನಾ, ಪ್ರವೀಣ್ ಜತ್ತನ್,ದಯಾನಂದ ಶೆಟ್ಟಿ, ವೆಂಕಟೇಶ್ ಕಡೇಚೂರ್, ಮಿಲಿತ್ ಹೆಗ್ಡೆ, ಸುದರ್ಶನ ಜತ್ತನ್, ರಮಾನಂದ ಭಂಡಾರಿ, ಮಹಾಕೀರ್ತಿ ಶೆಟ್ಟಿ, ಸಂತೋಷ ಪೂಜಾರಿ ಹಾಗೂ ಸುನಿಲ್ ಶೆಟ್ಟಿ ಮತ್ತಿತರರಿದ್ದರು. ದಕ್ಷಿಣ ಕನ್ನಡ ಸಂಘದÀ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.