ಮುಂಬಯಿ, ಸೆ.18: ಹಿರಿಯ ಪತ್ರಕರ್ತ, ಲೇಖಕ, ಕತೆಗಾರ, ಕರ್ನಾಟಕ ಮಲ್ಲ ಕನ್ನಡ ದೈನಿಕದ ಮಾಜಿ ಉಪ ಸಂಪಾದಕ ಶ್ರೀಪತಿ ಚಂಪ (76.) ಅಲ್ಪಾವಧಿಯ ಅನಾರೋಗ್ಯದಿಂದ ಇಂದಿಲ್ಲಿ ಶನಿವಾರ ಉಪನಗರ ಡೊಂಬಿವಿಲಿ ಪಶ್ಚಿಮದ ಶಿವಾಜಿ ನಗರದ ಸಂಕೇಶ್ವರ್ ಪಾಮ್ಸ್ ಇಲ್ಲಿನ ಸ್ವಗೃಹದಲ್ಲಿ ನಿಧನರಾದರು.
ಉಡುಪಿ ಜಿಲ್ಲೆಯ ಹೆಜಮಾಡಿ ಪಡುಕೆರೆ ಇಲ್ಲಿನ ಪ್ರತಿಷ್ಠಿತ ಚಂಪಾ ಮನೆತನದ ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವದ ಚಂಪಾರವರು "ಪಗಾರ" ಕಥಾಸಂಕಲನದ ಮೂಲಕ ಕರಾವಳಿಯ ಜನಜೀವನವನ್ನು ವಿಶಿಷ್ಟವಾಗಿ ಕಟ್ಟಿಕೊಟ್ಟು ಪ್ರಸಿದ್ಧಿ ಪಡೆದಿದ್ದರು. ಬಾಲ್ಯದಿಂದಲೇ ಪ್ರತಿಭಾವಂತರಾಗಿದ್ದ ಅವರು ಸಾಮಾಜಿಕ ಚಿಂತನೆಯನ್ನು ಮೈಗೂಡಿಸಿ ಕೊಂಡು ಸಂಘಟಕ, ಸಮಾಜ ಸೇವಕರಾಗಿ ಜನಾನುರಾಗಿದ್ದರು.
ಚಂಪಾ ಇವರು ಕರಾವಳಿ ತುಳು ಚಿತ್ರ ಸಹ ನಿರ್ದೇಶಕರಾಗಿ, ಉಡಲ್ ದ ತುಡರ್ ತುಳು ಚಿತ್ರದಲ್ಲೂ ಮಹತ್ತರ ಪಾತ್ರವಹಿಸಿದ್ದರು. ಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಶ್ರೀಪತಿ ಚಂಪಾ ಆಗಲುವಿಕೆಯಿಂದ ಓರ್ವ ಪ್ರಜ್ಞಾವಂತ ಪತ್ರಕರ್ತ ಮತ್ತು ಪತ್ರಕರ್ತ ಸಂಘದ ಓರ್ವ ಹಿರಿಯ ಸದಸ್ಯನನ್ನು ಕಳೆದು ಕೊಂಡಿದ್ದೇವೆ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ) ಇದರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ತಿಳಿಸಿದ್ದಾರೆ. ಚಂಪಾ ನಿಧನಕ್ಕೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತ ಪಡಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.