ವಾಟ್ಸಪ್ ಯುಗದಲ್ಲಿ ಗ್ರಂಥಗಳ ಓದುವ ಹವ್ಯಾಸ ಕಡಿಮೆಯಾಗುತ್ತಿದೆ-ದಿವಾಕರ ಶೆಟ್ಟಿ ಇಂದ್ರಾಳಿ
ಮುಂಬಯಿ (ಆರ್ಬಿಐ), ಸೆ.26: ಇಂದಿನ ವಾಟ್ಸಪ್ ಯುಗದಲ್ಲಿ ಗ್ರಂಥಗಳನ್ನು ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ನಮ್ಮಲ್ಲಿ ಪೂರ್ವ ಹಾಗೂ ಪಶ್ಚಿಮ ಎರಡೂ ಕಡೆ ಬೃಹತ್ ಗ್ರಂಥಾಲಯ ಇದೆ. ಇದರ ಪ್ರಯೋಜನ ಕನ್ನಡಿಗರು ಪಡೆಯಬೇಕು. ಹೊರನಾಡ ಶ್ರೇಷ್ಠ ಸಂಘಟನೆ ಎಂದು ಗುರುತಿಸಿಕೊಂಡಿರುವ ನಮ್ಮ ಕರ್ನಾಟಕ ಸಂಘ ಡೊಂಬಿವಲಿ ಸಂಸ್ಥೆಯ ಕಾರ್ಯಚಟುವಟಿಕೆ ಯಾವತ್ತೂ ನಿಂತ ನೀರಾಗಬಾರದು. ಕೊರೊನದಿಂದಾಗಿ ಅನಿವಾರ್ಯವಾಗಿ ಕಾರ್ಯಕ್ರಮ ಸ್ಥಗಿತ ಗೊಂಡಿದೆ. ಈಗ ಮತ್ತೆ ನಮ್ಮ ಸಂಘವು ಇಂದಿನ ಕೃತಿ ಸಮೀಕ್ಷೆಯ ಮೂಲಕ ಚಲನಶೀಲತೆ ಪಡೆಯ ಬೇಕಾಗಿದೆ ಎಂದು ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಸಂಘದ ವಾಚನಾಲಯ ವಿಭಾಗ ಆಯೋಜಿಸಿದ ಕೃತಿ ಸಮೀಕ್ಷಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದಿವಾಕರ ಶೆಟ್ಟಿ ಇಂದ್ರಾಳಿ ಮಾತನಾಡಿದರು.
ಸಂಘದ ಕಾರ್ಯಧ್ಯಕ್ಷ ಸುಕುಮಾರ್ ಎನ್.ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಈಗಂತೂ ಒಳ್ಳೆಯ ಸಾಹಿತ್ಯ ಕೃತಿಗಳು ಸಾಹಿತ್ಯಾಸಕ್ತರಿಗೆ ಸರಿಯಾಗಿ ದೊರೆಯುತ್ತಿಲ್ಲ. ಅಂತಹ ಕೃತಿಗಳ ಬಗ್ಗೆ ಸಾಹಿತ್ಯಾಸಕ್ತರಿಗೆ, ಸಹೃದಯರಿಗೆ ಸೂಕ್ಷ್ಮವಾಗಿ ಮನಸ್ಸಿಗೆ ಮುಟ್ಟಿಸುವುದೇ ಈ ಸಮೀಕ್ಷೆಯ ಉದ್ದೇಶ. ಪ್ರಜಾಪ್ರಭುತ್ವದ ಉಳಿವಿಗಾಗಿ ಸಹಕಾರಿಯಾಗಬೇಕಾಗಿದ್ದ ಹೆಚ್ಚಿನ ಮಾಧ್ಯಮಗಳಿಂದು ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಂಘದ ವಾಚನಾಲಯ ವಿಭಾಗ ಆಯೋಜಿಸಿರುವ ಕೃತಿ ಸಮೀಕ್ಷೆಯಲ್ಲಿ, ನಾಗರಾಜ ವಸ್ತಾರೆ ಅವರ `ಪ್ರಿಯೇ ಚಾರುಶೀಲೆ' ಕಾದಂಬರಿ ಬಗ್ಗೆ ಸಾ.ದಯಾ, ಬಾಬು ಶಿವ ಪೂಜಾರಿ ಅವರ `ಶ್ರೀ ನಾರಾಯಣ ಗುರು ವಿಜಯ ದರ್ಶನ' ಬಗ್ಗೆ ಅನಿತಾ ಪಿ.ಪೂಜಾರಿ ತಾಕೋಡೆ ಹಾಗೂ ಸನತ್ ಕುಮಾರ್ ಜೈನ್ ಅವರ `ಸನ್ನಿಧಿ' ಕೃತಿ ಬಗ್ಗೆ ಅಂಜಲಿ ತೊರವಿ ಸಮೀಕ್ಷೆಗೈದರು.
ಸಂಘದ ಉಪಾಧ್ಯಕ್ಷ ದೇವದಾಸ್ ಕುಲಾಲ್, ದಿನೇಶ್ ಕುಡ್ವ, ಲೋಕನಾಥ್ ಶೆಟ್ಟಿ ವೇದಿಕೆಯಲ್ಲಿದ್ದು, ಸುನಂದಾ ಶೆಟ್ಟಿ ಪ್ರಾರ್ಥನೆಗೈದರು. ವಾಚನಾಲಯ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾಕರ ಆರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಮಹಿಳಾ ವಿಭಾಗದ ಸೂಷ್ಮಾ ಶೆಟ್ಟಿ, ಯೋಗಿನಿ ಶೆಟ್ಟಿ, ವಿಮಲಾ ಶೆಟ್ಟಿ, ಮಾಧುರಿಕ ಬಂಗೇರ ಅತಿಥಿüಗಳನ್ನು ಗೌರವಿಸಿದರು. ವಾಚನಾಲಯ ವಿಭಾಗದ ಕಾರ್ಯದರ್ಶಿ ವಸಂತ್ ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.