ಮುಂಬಯಿ (ಆರ್ಬಿಐ), ಸೆ.25: ಕೇಂದ್ರ ಸರ್ಕಾರದ ಆಯುಷ್ ಇಲಾಖಾ ಸಚಿವ ಸರ್ಬಾನಂದ ಸೋನೊವಾಲ್ ಶನಿವಾರ ಧರ್ಮಸ್ಥಳಕ್ಕೆ ಆಗಮಿಸಿ, ದೇವರದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಧರ್ಮಾಧಿಕಾರಿ ಡಿ| ವೀರೇಂದ್ರ ಹೆಗ್ಗಡೆ ಅವರು ಸಚಿವರನ್ನು ಗೌರವಿಸಿದರು.
ಧರ್ಮಸ್ಥಳದಲ್ಲಿ ಶಾಂತಿವನದಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೂ ಭೇಟಿ ನೀಡಿದ ಸಚಿವ ಆಸ್ಪತ್ರೆಯಲ್ಲಿರುವ ವಿಶೇಷ ಸೌಲಭ್ಯಗಳು, ಶಿಸ್ತು, ಸ್ವಚ್ಛತೆ ಮತ್ತು ಸೌಜನ್ಯಪೂರ್ಣ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಹರೀಶ್ ಪೂಂಜ ಮತ್ತು ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ. ಸಚಿವರ ಜೊತೆ ಉಪಸ್ಥಿತರಿದ್ದರು.
ಉಡುಪಿಯಲ್ಲಿ ಎಸ್.ಡಿ.ಎಂ ಆಯುರ್ವೇದ ಆಸ್ಪತ್ರೆಯಲ್ಲಿ ರತ್ನಶ್ರೀ ಆರೋಗ್ಯಧಾಮ ಉದ್ಘಾಟಿಸಿದ ಬಳಿಕ ಸಚಿವರು ಧರ್ಮಸ್ಥಳಕ್ಕೆ ಆಗಮಿಸಿದ್ದರು. ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಭೋಜನ ಸ್ವೀಕರಿಸಿದ ಸಚಿವರು ಮಂಗಳೂರುಗೆ ಪ್ರಯಾಣಿಸಿದರು.