ಮುಂಬಯಿ (ಆರ್ಬಿಐ), ಜ.17: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಮತ್ತು ಬಿಎಸ್ಕೆಬಿ ಎಸೋಸಿಯೇಶನ್ ಸಾಯನ್ ಇವುಗಳ ಸಹಯೋಗದೊಂದಿಗೆ ಮಕರ ಸಂಕ್ರಾಂತಿಯ ಆಚರಣೆ ಸಂಕ್ರಾಂತಿ ಪರ್ವದಿನ ಕಳೆದ ಶುಕ್ರವಾರ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ಅಂಧೇರಿ ಪಶ್ಚಿಮದಲ್ಲಿನ ಅದಮಾರು ಮಠದಲ್ಲಿ ಕೋವಿಡ್ ನಿಯಮಾಯಾವಳಿಗಳೊಂದಿಗೆ ಅತ್ಯಂತ ಸರಳವಾಗಿ ಆಚರಿಸಲಾಯಿತು.
ವೇದಮೂರ್ತಿ ಕೃಷ್ಣರಾಜ ಉಪಾಧ್ಯಾಯರವರ ಪೌರೋಹಿತ್ಯದಲ್ಲಿ ಪೂಜಾವಿಧಿಗಳು ವಿಧಿವತ್ತಾಗಿ ಜರಗಿದವು. ಡಾ| ಅರುಣ್ ರಾವ್ ಮತ್ತು ಶೈಲಿನಿ ರಾವ್ ದಂಪತಿ ಯಜಮಾನತ್ವ ವಹಿಸಿದ್ದು, ಮಹಾ ಮಂಗಳಾರತಿ ನಂತರ ಸೀಮಿತ ಸಂಖ್ಯೆಯಲ್ಲಿ ನೆರೆದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ನಡೆಯಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೋಕುಲ ಭಜನಾ ಮಂಡಳಿ ಹಾಗೂ ವಲಯದ ಭಜನಾ ಮಂಡಳಿಗಳಾದ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ, ಅಂಧೇರಿ, ಶ್ರೀ ವಿಠ್ಠಲ ಭಜನಾ ಮಂಡಳಿ, ಮೀರಾ ರೋಡ್ ಮತ್ತು ಶ್ರೀ ಹರಿಕೃಷ್ಣ ಭಜನಾ ಮಂಡಳಿ, ನವಿ ಮುಂಬಯಿಯ ಸದಸ್ಯೆಯರಿಂದ ಹರಿನಾಮ ಸಂಕೀರ್ತನೆ ಪ್ರಸ್ತುತಗೊಂಡಿದ್ದು ವಾರ್ಷಿಕ ಮಕರ ಸಂಕ್ರಾಂತಿ ಸರಳವಾಗಿ ಸಂಪನ್ನಗೊಂಡಿತು