ಗೋಕುಲ ಬ್ರಹ್ಮಕಲಶ-ಹೊರೆಕಾಣಿಕೆ ಪೂರ್ವಭಾವಿ ಸಭೆ
ಮುಂಬಯಿ, ಎ.06: ಬಿಎಸ್ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳ ಸಯಾನ್ ಪೂರ್ವದಲ್ಲಿ ಅತ್ಯಾಧುನಿಕ ನವಕಾಲೀನ ಸೌಲಭ್ಯಗಳೊಂದಿಗೆ ಪುನರಾಭಿವೃದ್ಧಿಯೊಂದಿಗೆ ನಿರ್ಮಾಣಗೊಂಡ ಗೋಕುಲ ಭವನ ಮತ್ತು ಗೋಕುಲ ಶ್ರೀ ಕೃಷ್ಣಮಂದಿರದಲ್ಲಿ ಶ್ರೀ ಕೃಷ್ಣನ ಪುನ:ರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಕಾರ್ಯಕ್ರಮಗಳು ಇದೇ ಬರುವ ಮೇ.08ರಿಂದ ಮೇ 16ರ ತನ ಸಯಾನ್ನ ಗೋಕುಲದಲ್ಲಿ ವಿಜೃಂಭನೆಯಿಂದ ನೆರವೇರಿಸಲು ನಿಶ್ಚಯಿಸಲಾಗಿದೆ.
ಆ ಪ್ರಯುಕ್ತ ಗೋಕುಲ ಬ್ರಹ್ಮಕಲಶ-ಹೊರೆಕಾಣಿಕೆ ಪೂರ್ವಭಾವಿ ಸಭೆಯನ್ನು ಇದೇ ತಾ.09.04.2022ನೇ ಶನಿವಾರ ಸಂಜೆ 5.00 ಗಂಟೆಗೆ ಗೋಕುಲ್ ಹಾಲ್, ಪ್ಲಾಟ್ ಸಂಖ್ಯೆ-273, ಗೋಕುಲ್ ಮಾರ್ಗ್, ಸಾಯನ್ ಆಸ್ಪತ್ರೆಯ ಎದುರುಗಡೆ, ಸಾಯನ್ ಪೂರ್ವ, ಮುಂಬಯಿ ಇಲ್ಲಿ ಜರುಗಿಸಲಾಗುವುದು.
ಕರ್ನಾಟಕ ಮೂಲದ ವಿಶೇಷವಾಗಿ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಮೂಲತಃ ಮಹಾನಗರದಲ್ಲಿನ ಎಲ್ಲಾ ಸಂಘ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿ ಎಲ್ಲಾ ರೀತಿಯಿಂದ ಸಹಕರಿಸಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಉಭಯ ಸಂಸ್ಥೆಗಳ ಪದಾಧಿಕಾರಿಗಳು ಈ ಮೂಲಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಗೋಕುಲದ ಪುನರ್ ನಿರ್ಮಾಣ: ಸುಮಾರು 70 ವರ್ಷಗಳಷ್ಟು ಪುರಾತನವಾದ ಗೋಕುಲದ ಕಟ್ಟಡ ಜೀರ್ಣಾವಸ್ಥೆಯಲ್ಲಿದ್ದು ಸದ್ಯ ಗೋಕುಲದ ಶ್ರೀ ಗೋಪಾಲಕೃಷ್ಣನ ಮಂದಿರ, ಹವಾ ನಿಯಂತ್ರಿತ ಸಭಾಗೃಹ ಒಳಗಂಡ ಭವ್ಯ ಗೋಕುಲ ಭವನ ಸಿದ್ಧಗೊಂಡಿದೆ. ಇಲ್ಲಿನ ಆರಾಧ್ಯಮೂರ್ತಿ ಶ್ರೀ ಗೋಪಾಲಕೃಷ್ಣ ದೇವರ ದಿವ್ಯ ಮೂರ್ತಿ ಸದ್ಯ ನೆರೂಲ್ ಅಲ್ಲಿರುವ ಆಶ್ರಯದ ಬಾಲಾಲಯದಲ್ಲಿದ್ದು ಮತ್ತೆ ಶ್ರೀ ಗೋಪಾಲಕೃಷ್ಣನ ಶಿಲಾಮಯ ಮಂದಿರದಲ್ಲಿ ಪ್ರತಿಷ್ಠಾಪಿಸಲು ಬ್ರಹ್ಮಕಲಶೋತ್ಸವದ ಸಿದ್ಧತೆ ಭರದಿಂದ ಸಾಗುತ್ತಿದೆ.
70 ವರ್ಷಗಳಷ್ಟರ ಭವ್ಯ ಇತಿಹಾಸವಿರುವ ಗೋಕುಲ ಸಂಕುಲ, ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣ ಗೊಂಡ ಸುಂದರ ಶ್ರೀ ಕೃಷ್ಣ ಮಂದಿರದಲ್ಲಿ ಮತ್ತೆ ತ್ರಿಭಂಗಿಯಲ್ಲಿ ನಿಂತು ಕೊಳಲನ್ನು ಊದುವ, ಹಾಲು ಬಿಳುಪಿನ ಅಮೃತ ಶೀಲಾಮೂರ್ತಿ ಆರಾಧ್ಯ ದೇವರು ಶ್ರೀ ಗೋಪಾಲಕೃಷ್ಣ ಮುರಲೀ ಗಾನ ಲೋಲ ವಿರಾಜಮಾನನಾಗಿ ಭಕ್ತರ ಮನದಿಚ್ಛೆಯನ್ನು ಸಾಕಾರಗೊಳಿಸುಗಲು ಸನ್ನದ್ಧನಾಗಿರುವನು. ಅಂತೆಯೇ ಆಧುನಿಕ ಸವಲತ್ತು ಸೌಲಭ್ಯಗಳಿಂದ ಸಜ್ಜಾದ ನೂತನ ಗೋಕುಲ ಭವನ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣಗೊಂಡ, ಸುಂದರ ಶ್ರೀ ಕೃಷ್ಣ ಮಂದಿರ ಲೋಕಾರ್ಪಣೆಗೊಂಡು ಸದಸ್ಯ ಭಕ್ತಬಾಂಧವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ಸಜ್ಜಾಗುತ್ತಿದೆ. ಗೋಕುಲ ನೂತನ ಮಂದಿರದಲ್ಲಿ ಶ್ರೀಕೃಷ್ಣನನ್ನು ಕಣ್ತುಂಬಾ ನೋಡಿ ಆನಂದಿಸಿ ಜನ್ಮ ಸಾರ್ಥಕ ಪಡೆಯುವ ಸಮಯ ಸನ್ನಿಹಿತವಾಗಿದೆ ಎಂದು ಬಿಎಸ್ಕೆಬಿಎ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಈ ಮೂಲಕ ತಿಳಿಸಿದ್ದಾರೆ.