ಸುರೇಶ್ ಭಂಡಾರಿ ಮುಂಬಯಿ ಕಂಡ ಅಗ್ರಮಾನ್ಯ ವ್ಯಕ್ತಿ : ಡಾ| ಶಿವರಾಮ ಭಂಡಾರಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಮೇ.21: ಸುರೇಶ್ ಭಂಡಾರಿ ಓರ್ವ ರಾಷ್ಟ್ರಪ್ರೇಮಿ ಆಗಿದ್ದು ಮುಂಬಯಿ ಕಂಡ ಅಗ್ರಮಾನ್ಯ ವ್ಯಕ್ತಿಯಲ್ಲೋರ್ವರು. ಇವರ ಜೀವನಶೈಲಿ ಭಾವೀ ಜನಾಂಗಕ್ಕೆ ಮಾದರಿ ಆಗಿದೆ. ಭಾವೈಕ್ಯದ ಬಾಳಿಗೆ ಪ್ರೇರಕರಾದ ಓರ್ವ ಧೀಮಂತ ಧುರೀಣನ ಜೀವನದ ಹೆಗ್ಗುರುತು ಸುರೇಶಣ್ಣನ ಷಷ್ಠ್ಯಬ್ದಿಪೂರ್ತಿ ಸಂಭ್ರಮವಾಗಿದೆ. ಆದ್ದರಿಂದ ಈ ಸಮಾರಂಭ ಬರೇ ಸಡಗರದ ಕಾರ್ಯಕ್ರಮವಾಗದೆ ಒಂದು ಮೈಲಿಗಲ್ಲು ರೂಪಿಸುವ ಭವ್ಯ ಸಮಾರಂಭ ಆಗಬೇಕು ಎಂದು ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ, ಸುರೇಶ್ ಎಸ್.ಭಂಡಾರಿ ಸಂಭ್ರಮ ಸಮಿತಿ ಉಪಾಧ್ಯಕ್ಷ ಡಾ| ಶಿವರಾಮ ಕೆ.ಭಂಡಾರಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ಕುರ್ಲಾ ಪೂರ್ವದ ಚುನ್ನಾಭಟ್ಟಿ ಅಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬರುವ ಜೂನ್.12ರ ಭಾನುವಾರ ದಿನಪೂರ್ತಿಯಾಗಿಸಿ ಆಯೋಜಿಸಿರುವ ಕಡಂದಲೆ ಸುರೇಶ್ ಎಸ್.ಭಂಡಾರಿ ಜನ್ಮದ ಷಷ್ಠ್ಯಬ್ದಿಪೂರ್ತಿ ಸಂಭ್ರಮ ಮತ್ತು ಗ್ರಂಥ ಗೌರವ ಬಿಡುಗಡೆ ಭವ್ಯ ಸಮಾರಂಭ ಆಯೋಜನೆ ನಿಮಿತ್ತ ಇಂದಿಲ್ಲಿ ಶನಿವಾರ ಸಂಜೆ ಘಾಟ್ಕೋಪರ್ನ ಮನಿಫೆÇೀಲ್ಡ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು ಸಭೆಯ ಅಧ್ಯಕ್ಷತೆ ವಹಿಸಿ ಶಿವರಾಮ ಭಂಡಾರಿ ಮಾತನಾಡಿದರು.
ಸಭೆಯಲ್ಲಿ ಸಮಾರಂಭದ ಕೇಂದ್ರಬಿಂದು ಕಡಂದಲೆ ಸುರೇಶ್ ಎಸ್.ಭಂಡಾರಿ, ಅಭಿನಂದನಾ ಸಮಿತಿಯ ಜೊತೆ ಕಾರ್ಯದರ್ಶಿ ಕರ್ನೂರು ಮೋಹನ್ ರೈ, ಗೌರವ ಸಲಹೆಗಾರರಾದ ನ್ಯಾಯವಾದಿ ಆರ್.ಎಂ ಭಂಡಾರಿ, ಅಶೋಕ ಪಕ್ಕಳ, ಸದಸ್ಯರಾದ ಪ್ರಕಾಶ್ ಎಂ.ಶೆಟ್ಟಿ ಸುರತ್ಕಲ್, ಹೇಮಾ ಎಸ್.ಅವಿೂನ್, ಜಯಶೀಲ ಭಂಡಾರಿ, ನವೀನ್ ಕೆ.ಇನ್ನ, ರಾಕೇಶ್ ಭಂಡಾರಿ, ಅಭಿನಂದನಾ ಗಂಥದ ಪ್ರಧಾನ ಸಂಪಾದಕ ಸಾ.ದಯಾ (ದಯಾನಂದ ಸಾಲಿಯಾನ್), ಗಣೇಶ್ ಕುಮಾರ್, ಸೋಮಶೇಖರ್ ಎಂ.ಭಂಡಾರಿ, ಅಶೋಕ ಎಸ್.ಸುವರ್ಣ, ವಿಶ್ವನಾಥ ದೊಡ್ಡಮನೆ, ಲತೀಶ್ ಕೆ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿ ಸಲಹೆ ಸೂಚನೆಗಳನ್ನಿತ್ತು ಸಮಾರಂಭದ ಯಶಸ್ಸಿಗೆ ಶುಭ ಹಾರೈಸಿದರು.
ಸಂಭ್ರಮ ಸಮಿತಿ ಗೌ| ಪ್ರ| ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಸ್ವಾಗತಿಸಿ ಸಮಾರಂಭದ ಸಿದ್ಧತೆಗಳ ಬಗ್ಗೆ ತಿಳಿಸಿ ಅಂದು ಬೆಳಿಗ್ಗೆ ಮಹಾನಗರದಲ್ಲಿನ ವಿವಿಧ ಸಂಸ್ಥೆಗಳ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಸಮಾರಂಭದ ಉದ್ಘಾಟನೆ, ಪೂರ್ವಾಹ್ನ ಕಲಾವಿದರ ತಂಡಗಳಿಂದ ಸಮೂಹ ನೃತ್ಯ ವೈಭವ, ಮಧ್ಯಾಹ್ನ ಎಹಸಾನ್ ಖುರೇಶಿ ಮತ್ತು ತಂಡದ ಮಿಮಿಕ್ರಿ, ಅಪರಾಹ್ನ ಸಂಭ್ರಮ ಸಮಾರಂಭ ಮತ್ತು ಗ್ರಂಥ ಗೌರವ ಬಿಡುಗಡೆ, ಸಂಜೆ ಪಟ್ಲ ಸತೀಶ್ ಶೆಟ್ಟಿ ಅವರ ನಿರ್ದೇಶನದಲ್ಲಿ ಯಕ್ಷಗಾನ ಇತ್ಯಾದಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿ ಸಭಾಕಲಾಪ ನಿರೂಪಿಸಿದರು. ಗಣೇಶ್ ಕುಮಾರ್ ಪ್ರಾರ್ಥನೆಯೊಂದಿಗೆ ಸಭೆ ಆದಿಗೊಂಡಿತು. ಸಾ.ದಯಾ ಕೃತಜ್ಞತೆ ಸಮರ್ಪಿಸಿದರು.