ಅಧ್ಯಕ್ಷರಾಗಿ ಕಡಂದಲೆ ಸುರೇಶ್ ಎಸ್.ಭಂಡಾರಿ ಪುನಾರಾಯ್ಕೆ
ಮುಂಬಯಿ, ಜೂ.25: ಮುಂಬಯಿ ಹಾಗೂ ಒಳನಾಡಿನಲ್ಲಿ ಸಾಹಿತ್ಯಿಕ, ಸಾಮಾಜಿಕ, ಜಾನಪದ, ಐತಿಹಾಸಿಕ, ರಾಷ್ಟ್ರೀಯ ವಿಚಾರ ಸಂಕಿರಣ ಸೇರಿದಂತೆ ಅನೇಕ ವೈಚಾರಿಕ ವಿಚಾರಗಳ ಕಾರ್ಯಕ್ರಮಗಳಿಂದ ತನ್ನನ್ನು ಗುರುತಿಸಿಕೊಂಡಿರುವ ಮಯೂರವರ್ಮ ಸಾಂಸ್ಕøತಿಕ ಪ್ರತಿಷ್ಠಾನ (ರಿ.) ಮುಂಬಯಿ ಇದರ 2022-2027ರ ಐದು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಸಲ್ಪಟ್ಟಿತು. ಘಾಟ್ಕೋಪರ್ ಅಸಲ್ಪ ಇಲ್ಲಿನ ಪ್ರತಿಷ್ಠಾನದ ಕಾರ್ಯಾಲಯದಲ್ಲಿ ನಡೆಸಲ್ಪಟ್ಟ ಸಭೆಯಲ್ಲಿ ಕಾರ್ಯಕಾರಿ ಸಮಿತಿಯು ಅಧ್ಯಕ್ಷರನ್ನಾಗಿ ಕಡಂದಲೆ ಸುರೇಶ ಎಸ್.ಭಂಡಾರಿ ಪುನಾರಾಯ್ಕೆ ಗೊಳಿಸಿತು.
Kadandale Suresh Bhandary Vishwanath Dodmane
ರಾಜೇಶ ಗೌಡ (ಉಪಾಧ್ಯಕ್ಷ) ವಿಶ್ವನಾಥ ದೊಡ್ಮನೆ (ಗೌರವ ಪ್ರಧಾನ ಕಾರ್ಯದರ್ಶಿ), ಗೋಪಾಲ ಉಳ್ಳೂರ (ಗೌರವ ಕೋಶಾಧಿಕಾರಿ), ಪದ್ಮನಾಭ ಸಪಳಿಗ (ಜೊತೆ ಕಾರ್ಯದರ್ಶಿ) ಆಯ್ಕೆಯಾಗಿರುವರು. ರಾಜೇಶ್ವರಿ ಐತಾಳ್, ಪ್ರವೀಣ ಸಪಳಿಗ, ನಿತ್ಯ ಮುಂಡ್ಕೂರ, ರಾಜ್ವರ್ಮ ಜೈನ್ ಇವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸರ್ವಾನುಮತದಿಂದ ಮುಂದಿನ ಆಯ್ಕೆಯಾಗಿರುವರು.
ಐತಿಹಾಸಿಕ ಕೃತಿ ಪ್ರಕಟಣೆ, ಜಾನಪದ ವಿಚಾರಗೋಷ್ಠಿ, ಅಡೂಗುಲಜ್ಜಿಯ ಕಥಾ ಕಮ್ಮಟ, ಕೃಷಿ ಬಂಧು ಪುರಸ್ಕಾರ, ಗಾದೆಗಳ ವೈಭವದಂತಹ ಅಪರೂಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಪ್ರತಿಷ್ಠಾನ ಕನ್ನಡ ನಾಡಿನ ಪಶ್ಚಿಮ ಘಟ್ಟದ ಸರಹದ್ದಿನ ಗೇರುಸೊಪ್ಪವನ್ನು ಕೇಂದ್ರವಾಗಿಟ್ಟುಕೊಂಡು ಮಲೆನಾಡು ಹಾಗೂ ಕರಾವಳಿಯನ್ನು ಅರ್ಧ ಶತಮಾನಕ್ಕೂ (54) ಅಧಿಕ ಸಮಯ ರಾಜ್ಯವಾಳಿದ ಕರಿಮೆಣಸಿನ ರಾಣಿ ಬಿರುದಾಂಕಿತ ರಾಣಿ ಚೆನ್ನಭೈರಾದೇವಿ ಕುರಿತು ಉಪನ್ಯಾಸ ವಿಚಾರ ಸಂಕಿರಣ, ಹಿರಿಯ ಮಹಿಳೆಗೆ ಗೌರವ ಧನದೊಂದಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಂಡು ನಾಡು-ನುಡಿಯ ಕೈಂಕರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಪ್ರತಿಷ್ಠಾನವು ಮುಂಬಯಿಯ ಹಿರಿಯ ಸಂಘಟಕ, ಸಾಮಾಜಿಕ, ಧಾರ್ಮಿಕ ಚಿಂತಕ ಸುರೇಶ ಭಂಡಾರಿ ಕಡಂದಲೆ ಅವರನ್ನು ಮುಂದಿನ ಪಂಚ ವಾರ್ಷಿಕ ಅವಧಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.