ಕಜೆ ಅಕ್ಕಿ ಮಹಾನಗರಕ್ಕೆ ಮುಂಬಯಿ ಬಿಡುಗಡೆ ; ಪೂರ್ವಭಾವಿ ಸಭೆ
ಮುಂಬಯಿ, ಆ.01: ಉಡುಪಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದ ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಉತ್ಪಾಧಿತ `ಉಡುಪಿ ಕೇದಾರ ಕಜೆ' ಅಕ್ಕಿಯನ್ನು ಮುಂಬಯಿ ಮಹಾನಗರದ ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕಳೆದ ಆದಿತ್ಯವಾರ ಸಂಜೆ ಕಾಂದಿವಲಿ ಪಶ್ಚಿಮದ ಮಹಾವೀರ ನಗರದಲ್ಲಿನ ಕಮಲಾ ವಿಹಾರ ಸ್ಪೋರ್ಟ್ಸ್ ಕ್ಲಬ್ ಸಭಾಗೃಹದಲ್ಲಿ ಉತ್ತರ ಮುಂಬಯಿ (ಬೋರಿವಿಲಿ) ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಪ್ರಸ್ತಾವನೆಗೈದು ಬರುವ ಆ.07ನೇ ಆದಿತ್ಯವಾರ ಕುರ್ಲಾ ಪೂರ್ವದ ಚುನ್ನಾಭಟ್ಟಿ ಇಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಉಡುಪಿ ಕೇದಾರೋತ್ಥಾನ ಉತ್ಪಾದಿತ ಕಜೆ ಅಕ್ಕಿ ಮುಂಬಯಿ ಮಹಾನಗರಕ್ಕೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಮುಂಬಯಿವಾಸಿ ತುಳು ಕನ್ನಡಿಗರಿಗೆ ಉಪಯೋಗ ಆಗುವ ನಿಟ್ಟಿನಲ್ಲಿ ಸಮಾರಂಭ ಆಯೋಜಿಸಿ ಸುಲಭವಾಗಿ ಕೈಸೇರುವಂತೆ ಅಕ್ಕಿಯ ವ್ಯವಸ್ಥೆ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಪ್ರಧಾನ ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ ಮಾತನಾಡಿ ಅಂದು ಸಂಜೆ 5.30 ಗಂಟೆಗೆ ಸಂಸದ ಗೋಪಾಲ್ ಸಿ.ಶೆಟ್ಟಿ ಸಾರಥ್ಯ, ರಾಷ್ಟ್ರೀಯ ಮತ್ತು ರಾಜ್ಯ ರಾಜಕಾರಣಿಗಳ ಉಪಸ್ಥಿತಿಯಲ್ಲಿ ಭವ್ಯ ಸಮಾರಂಭ ಜರುಗಲಿದ್ದು ಗಣ್ಯರು ಉಡುಪಿ ಕಜೆ ಅಕ್ಕಿಯನ್ನು ಮುಂಬಯಿ ಜನತೆಗೆ ಬಿಡುಗಡೆ ಮಾಡಲಿದ್ದಾರೆ. ಹಡೀಲು ಭೂಮಿಯಲ್ಲಿ ಬೆಳೆಸಿದ ಕಜೆ ಅಕ್ಕಿಯ ಸ್ವಾಧಿಷ್ಟ ರುಚಿಯ ಭೋಜನದೊಂದಿಗೆ ರಾತ್ರಿ 8.00 ಗಂಟೆಗೆ ಊಟ ಉಣ್ಣಿಸಲಿದ್ದೇವೆ ಎಂದರು.
ಅಪರಾಹ್ನ 2.30 ಗಂಟೆಗೆ ಕಲಾಜತ್ತು ತಂಡದ ನಾಟಕ ಸಾಂಸ್ಕೃತಿಕ ವೈಭವದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕೇದಾರೋತ್ಥಾನ ಟ್ರಸ್ಟ್ ಉಡುಪಿಯಾದ್ಯಂತ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಸುಮಾರು 1,500 ಎಕರೆ ಹಿಂಗಾರು ಭೂಮಿಯಲ್ಲಿ ಟ್ರಸ್ಟ್ ಯಶಸ್ವಿಯಾಗಿ ಭತ್ತದ ಕೃಷಿ ಮಾಡಿದೆ. ಟ್ರಸ್ಟ್ ವಿವಿಧ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಕ್ಷೇತ್ರದ ವಿವಿಧೆಡೆ ಪಾಳು ಭೂಮಿಯನ್ನು ಗುರುತಿಸಿತ್ತು. ತಮ್ಮ ಭತ್ತದ ಗದ್ದೆಗಳನ್ನು ಕೃಷಿ ಮಾಡದೆ ಬಿಟ್ಟ ರೈತರು, ಟ್ರಸ್ಟ್ ಕೈಗೊಂಡ ಉಪಕ್ರಮಗಳಿಂದ ಸುಮಾರು 900 ಟನ್ ಭತ್ತವನ್ನು ಉತ್ಪಾದಿಸಲು ಸಾಧ್ಯವಾಗಿದೆ. `ಉಡುಪಿ ಕೇದಾರ ಕಜೆ' ಎಂಬ ಬ್ರಾಂಡ್ನ ಕರಾವಳಿ ಜನತೆಯ ಇಷ್ಟದ ಅಕ್ಕಿ ಬಳಿಕ ಮುಂಬಯಿನಲ್ಲೂ ಲಭ್ಯವಾಗಲಿದೆ ಎಂದು ಕಲಾಜಗತ್ತು ಸಂಸ್ಥೆಯ ರೂವಾರಿ ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ ತಿಳಿಸಿದರು.
ಸಭೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಅಶೋಕ ಎಸ್.ಸುವರ್ಣ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್.ಪಯ್ಯಡೆÀ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅವಿೂನ್, ಭಾರತ್ ಬ್ಯಾಂಕ್ನ ನಿರ್ದೇಶಕ ಗಂಗಾಧರ್ ಜೆ.ಪೂಜಾರಿ, ಕರ್ನಾಟಕ ಸಂಘ ಮುಂಬಯಿ ಇದರ ಡಾ| ಭರತ್ಕುಮಾರ್ ಪೆÇಲಿಪು, ಸುಭಾಶ್ ಜಯ ಸುವರ್ಣ ಸೇರಿದಂತೆ ಕರ್ನಾಟಕ ಕರಾವಳಿಯ ಜಾತೀಯ, ಸಾಮಾಜಿಕ ಸಂಘ-ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು. ವಿಜಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಹೆಚ್ಚಿನ ವಿವರಗಳನ್ನು ಶೀಘ್ರವಾಗಿ ಪ್ರಕಟಿಸುವುದಾಗಿ ತಿಳಿಸಿ ವಂದಿಸಿದರು.