ಅಭಿನಯ ಅನ್ನೋದು ಪ್ರತಿಭೆ ಅಲ್ಲ ಕೌಶಲ್ಯ ಆಗಿದೆ : ಮೋಹನ್ ಮಾರ್ನಾಡ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಆ.05: ನಟನೆ ಪ್ರಾಕೃತಿಕ ಸಹಜವಾಗಿದೆ. ಆದರೆ ಅಭಿನಯ ಅನ್ನೋದು ಪ್ರತಿಭೆ ಅಲ್ಲ ಕೌಶಲ್ಯವಾಗಿದೆ. ಬದುಕು ಅನ್ನುವುದೇ ರಂಗಭೂಮಿ ಆಗಿದ್ದು ಇಲ್ಲಿ ಎಲ್ಲರೊಂದಿಗೆ ಸಹನೆಯಿಂದ ಮಾತನಾಡುವುದೇ ಅಭಿನಯವಾಗಿದೆ. ನಟನೆಯಲ್ಲಿ ಧ್ವನಿ, ಉಚ್ಚಾರ ಸ್ಪಷ್ಟವಾಗಿರಬೇಕು. ಇಲ್ಲಿನ ಸಂವಹನೆಗೆ ತರಬೇತಿಯ ಅಗತ್ಯವಿದ್ದು ನಾಟಕದಲ್ಲಿ ಕೊಡು ಕೊಳ್ಳುವಿಕೆ ಮುಖ್ಯವಾಗಿದೆ. ನಟನೆಯು ಜವಾಬ್ದಾರಿಯುತವಾಗಿದ್ದು, ಇದಕ್ಕೆ ಓದಿನ ಅವಶ್ಯವಿದ್ದು ನಾಟಕ ಬದುಕು ಕಟ್ಟಿಕೊಳ್ಳುವ ಪಾಠವಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗ ಕಲಾವಿದ ಮೋಹನ್ ಮಾರ್ನಾಡ್ ತಿಳಿಸಿದರು.
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ.) ಮುಂಬಯಿ ಇಂದಿಲ್ಲಿ ಶುಕ್ರವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಇಲ್ಲಿನ ವಿದ್ಯಾನಗರಿಯ ತಿಲಕ್ ಭವನದ ಭೂಗೋಳ ವಿಭಾಗದ ಸಭಾಗೃಹದಲ್ಲಿ ಆಯೋಜಿಸಿದ್ದ ವಾಚನ ಅಭಿನಯ ಮತ್ತು ಕಲೆ ಕಮ್ಮಟ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಅಭಿನಯ ಕಲೆ ಕುರಿತು ಮೋಹನ್ ಮಾರ್ನಾಡ್ ಮಾತನಾಡಿತಾನು ಅಭಿನಯಿಸಿದ ನಾಟಕಗಳ ನಿರೂಪನವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಐಲೇಸಾ ಮುಂಬಯಿ ಸಂಚಾಲಕ, ಕಂಠದಾನ ಕಲಾವಿದ ಸುರೇಂದ್ರ ಕುಮಾರ್ ಮಾರ್ನಾಡ್ ಅವರು ಧ್ವನಿಯ ಕುರಿತು ಹಾಗೂ ಕಂಠದಾನ ಕಲಾವಿದ ಅವಿನಾಶ್ ಕಾಮತ್ ವಾಚನ ಕಲೆಯ ಕುರಿತು ಅನುಭವವನ್ನು ವ್ಯಕ್ತ ಪಡಿಸಿದರು.
ನಮಗೆ ದ್ವನಿಯೇ ಸಂಜೀವಿನಿಯಾಗಿದ್ದು ಇದು ನಮಗೆ ಆಕಾರ, ಸಕಾರ, ರೂಪವಾಗಿ ಜೊತೆಗಾರನಾಗಿ ಜೋಳಿಗೆಯ ನೇಕಾರನಾಗಿ ಒಲಿದಿದೆ. ಹೊಟ್ಟೆಬಟ್ಟೆಯ ಅನ್ನದ ತಟ್ಟೆಯಾಗಿದೆ. ಧ್ವನಿಗೆ ಅಕ್ಷರದ ಲೇಪನ ಸಿಕ್ಕಿದರೆ ಇನ್ನೂ ಚೆಂದವಾಗಿರುತ್ತದೆ. ಆದ್ದರಿಂದ ಒಂದು ದೇಹಕ್ಕೆ ಜೀವ ಕೊಡುವುದೇ ಧ್ವನಿಯಾಗಿದೆ ಎಂದು ಸುರೇಂದ್ರ ಮಾರ್ನಾಡ್ ತಮ್ಮ ಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಅವಿನಾಶ್ ಕಾಮತ್ ಮಾತನಾಡಿ ಓದುವಿಕೆ ಮತ್ತು ವಾಚನಗಾರಿಕೆ ಬಗ್ಗೆ ತಿಳಿಯುವುದು ಇವತ್ತಿಗೆ ಅಗತ್ಯವಿದೆ. ಮನುಜನ ಅಂತರ್ಗತ ಮತ್ತು ರಕ್ತಗತವಾದ ಕಲೆಯೇ ವಾಚನಗಾರಿಕೆ ಆಗಿದ್ದು ಓದುವಿಕೆ ಭಾವರಹಿತವಾಗಿ ದ್ದು, ವಾಚನದಲ್ಲಿ ಭಾವನೆಯೇ ಪ್ರಧಾನವಾದದ್ದು ಎಂದರು.
ನಾಲಗೆಯ ಮೂಲಕ ಹೊರಡುವ ಪ್ರತೀ ಶಬ್ದ, ಧ್ವನಿ ಮತ್ತು ವಾಚಿಕವು ವಿಜ್ಞಾನವಾಗಿದೆ. ಮಾತು ಎಷ್ಟು ಸ್ಪಷ್ಟವಾಗಿ, ಉಚ್ಚಾರವನ್ನು ಎಷ್ಟು ನೀಟಾಗಿ ಪ್ರಸ್ತುತ ಪಡಿಸಬಹುದು ಅನ್ನುವುದು ವಾಚಿಕ ಅಭಿನಯ ತಿಳಿಸುತ್ತದೆ. ಬೇರೆಬೇರೆ ನಾಟಕ, ಪಾತ್ರಗಳ ಪ್ರತೀ ಸಂಭಾಷಣೆಯೂ ಅದರ ಪಾತ್ರ ಸ್ವಾಭಾವ, ಸನ್ನಿವೇಶಕ್ಕೆ ಅನುಗುಣವಾಗಿ ಭಿನ್ನವಾಗಿರುತ್ತದೆ. ಇದೊಂದು ಯಶಸ್ವೀ ಕಮ್ಮಟವಾಗಿದೆ ಎಂದು ಹಿರಿಯ ರಂಗತಜ್ಞ ಡಾ| ಭರತ್ಕುಮಾರ್ ಪೆÇಲಿಪು ತಿಳಿಸಿದರು.
ಭಾಷೆಯೇ ಕಾವ್ಯ ಅನ್ನುವ ಮಾತಿದ್ದು ಭಾಷೆಯನ್ನ ಸ್ಪಷ್ಟ, ಖಚಿತವಾಗಿ ನಾವು ಬಳಕೆ ಮಾಡಬೇಕು. ಭಾಷೆಯ ದುಂದುವೆಚ್ಚ ತರವಲ್ಲ. ಭಾಷೆಯನ್ನು ವಿರೂಪಗೊಳಿಸುವುದು ಸರ್ವತಾ ಸರಿಯಲ್ಲ. ಭಾಷೆ ಬರೇ ವ್ಯವಹಾರಿಕ ದೃಷ್ಟಿಯಿಂದ ಬಳಕೆಯಾಗಿಸದೆ ಭಾಷೆಯ ಒಳಗಿನ ಸಂಗೀತ, ಮಾಧುರ್ಯವಿದ್ದು ಭಾಷೆಯನ್ನು ವಿಶೇಷ ಕಾಳಜಿಯಿಂದ ಬಳಕೆ ಮಾಡಬೇಕು ಎಂದು ಡಾ| ಉಪಾಧ್ಯ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ನಾಟಕಕಾರರಾದ ನಾರಾಯಣ ಶೆಟ್ಟಿ ನಂದಳಿಕೆ, ಕೆ.ವಿ ಐತಾಳ್, ಮಧುಸೂಧನ್ ಟಿ.ಆರ್, ಕನ್ನಡ ವಿಭಾಗದ ಹಿರಿಯ ವಿದ್ಯಾಥಿರ್üಗಳಾದ ಕಲಾ ಭಾಗ್ವತ್, ಸುರೇಖಾ ಹೆಚ್.ದೇವಾಡಿಗ, ಅನಿತಾ ಪಿ.ಪೂಜಾರಿ, ಸುರೇಖಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ನಳಿನಾ ಪ್ರಸಾದ್ ಅರ್ಥಗರ್ಭಿತವಾದ ಕವಿತೆ ವಾಚಿಸಿದರು.
2022ನೇ ಸಾಲಿನ ಕನ್ನಡ ವಿಭಾಗದ ಎಂ.ಎ ಪ್ರಥಮ ವರ್ಷದ ವಿದ್ಯಾಥಿರ್üಗಳ ಸ್ವಾಗತ ಕಾರ್ಯಕ್ರಮ ನಡೆಸಲ್ಪಟ್ಟಿತು. ಕನ್ನಡ ವಿಭಾಗದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ಕೃತಜ್ಞತೆ ಸಮರ್ಪಿಸಿದರು.