ಮುಂಬಯಿ (ಆರ್ಬಿಐ), ಅ.02: ಉಪನಗರ ಕಾಂದಿವಿಲಿ ಪಶ್ಚಿಮದಲ್ಲಿನ ಚಾರ್ಕೋಪ್ ವಿಲೇಜ್ನ ನಿವಾಸಿ ಚಾರ್ಕೋಪ್ ಕನ್ನಡಿಗರ ಬಳಗದ ಸ್ಥಾಪಕ ಸದಸ್ಯರಾಗಿದ್ದು ಸುಮಾರು ದಶಕಕ್ಕೂ ಮಿಕ್ಕಿದ ಅವಧಿಯಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಆಗಿದ್ದು ಪ್ರಸ್ತುತ ವಿಶ್ವಸ್ಥ ಸದಸ್ಯರಾಗಿದ್ದ ಎಂ.ಎಸ್ ರಾವ್ ಪ್ರಸಿದ್ಧ (ಮಂಗಳೂರು ಸೀತರಾಮ ರಾವ್-76.) ಇಂದು ಬೆಳಿಗ್ಗೆ ಬೆಂಗಳೂರು ಅಲ್ಲಿನ ಸುಪುತ್ರಿಯ ಸ್ವಗೃಹದಲ್ಲಿ ಅಲ್ಪಕಾಲದ ಅಸ್ವಸ್ಥತೆಯಿಂದ ನಿಧನರಾದರು.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ ಆಗಿದ್ದರೂ ತನ್ನ ಹೆಸರಿನ ಜೊತೆಗೆ ಮಂಗಳೂರು ಊರನ್ನು ಜೋಡಣೆಯಾಗಿಸಿ ಕಾಂದಿವಲಿ ಪರಿಸರದಲ್ಲಿ ಹಾಗೂ ಮುಂಬಯಿಯ ಬಹುತೇಕ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದ ಇವರು ಎಂ.(ಮಂಗಳೂರು) ಎಸ್.ರಾವ್ ಎಂದೇ ಪ್ರಸಿದ್ಧರೆಣಿಸಿದ್ದರು. ಇತ್ತೀಚೆಗಿನ ದಿನಗಳಲ್ಲಿ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದ ಕಾರಣ ಪತ್ನಿಯೊಂದಿಗೆ ಬೆಂಗಳೂರಿನಲಿನ್ಲ ತನ್ನ ಸುಪುತ್ರಿಯ ನಿವಾಸದಲ್ಲಿ ವಾಸ್ತವ್ಯವಿದ್ದು ಅಲ್ಲೇ ನಿಧನ ಹೊಂದಿದರು.
ಚಾರ್ಕೋಪ್ ಕನ್ನಡಿಗರ ಬಳಗ ಸ್ಥಾಪನೆಯಾದ ದಿನಗಳಿಂದಲೂ ಈ ಸಂಸ್ಥೆಯನ್ನು ತನ್ನ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಪರಿಗಣಿಸಿ ಅದಕ್ಕಾಗಿ ಬಹಳಷ್ಟು ದುಡಿಯುತ್ತಿದ್ದರು. ಈ ಸಂಸ್ಥೆಯನ್ನು ಬೆಳೆಸುವಲ್ಲಿ, ಸಂಸ್ಥೆಗೆ ಸ್ವಂತ ಜಾಗವನ್ನು ಖರೀದಿಸಿ ಅದರಲ್ಲಿ ಪ್ರಸ್ತುತ ಭವನವನ್ನು ನಿರ್ಮಿಸುವಲ್ಲಿ ಅವರ ಕೊಡುಗೆಯನ್ನು ಮರೆಯುವಂತಿಲ್ಲ. ಇದರೊಂದಿಗೆ ಸಯಾನ್ನ ಬಿಎಸ್ಕೆಬಿಎ (ಗೋಕುಲ) ಸಂಸ್ಥೆಯಲ್ಲಿಯೂ ಸಕ್ರಿಯರಾಗಿದ್ದು ಕೊಂಡು, ಗೋಕುಲದ ನವನಿರ್ಮಾಣ ಕಾರ್ಯದಲ್ಲಿಯೂ ಅನುಪಮ ಸೇವೆಸಲಿಸಿದ್ದರು.
ಮೃತರು ಪತ್ನಿ ಭಾರತಿ ರಾವ್, ಇಬ್ಬರು ಸುಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ. ಎಂ.ಎಸ್ ರಾವ್ ಅಗಲುವಿಕೆಗೆ ಚಾರ್ಕೋಪ್ ಕನ್ನಡಿಗರ ಬಳಗದ ಅಧ್ಯಕ್ಷ ಎಂ. ಕೃಷ್ಣ ಶೆಟ್ಟಿ, ಕಾರ್ಯದರ್ಶಿ ರಘುನಾಥ ಎನ್.ಶೆಟ್ಟಿ, ಮಾಜಿ ಅಧ್ಯಕ್ಷ ಭಾಸ್ಕರ್ ಸರಪಾಡಿ, ಬಿಎಸ್ಕೆಬಿ ಅಸೋಸಿಯೇಶನ್ನ ಡಾ| ಸುರೇಶ್ ಎಸ್.ರಾವ್ ಕಟೀಲು ಹಾಗೂ ಉಭಯ ಸಂಸ್ಥೆಗಳ ಪಧಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳು, ವಿಶ್ವಸ್ಥರು ಹಾಗೂ ಕಾಂದಿವಿಲಿ ಪರಿಸರದ ಇತರ ಗಣ್ಯರು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.