ಡಾ| ಪುಣಿಂಚತ್ತಾಯ ತುಳು ಭಾಷೆ-ತುಳು ನಾಡಿನ ದೊಡ್ಡ ಆಸ್ತಿ : ಸರ್ವೋತ್ತಮ ಶೆಟ್ಟಿ
ಮುಂಬಯಿ (ಆರ್ಬಿಐ), ಅ.14: ತುಳು ಭಾಷೆಯ ಲಿಪಿ ಸಂಶೋಧಕ ಸಾಹಿತಿ ತುಳುರತ್ನ ಡಾ| ವೆಂಕಟರಾಜ ಪುಣಿಂಚತ್ತಾಯ ಅವರು ಕನ್ನಡಕ್ಕೆ ಮಾಸ್ತಿ ಇದ್ದಹಾಗೆ ತುಳುವಿನ ಆಸ್ತಿ. ಅನಂತಪುರದಲ್ಲಿ ಮೊದಲ ತುಳು ಲಿಪಿ ಶಾಸನ ಲಭಿಸಿದ್ದರಿಂದ ಇಲ್ಲಿಯೇ ಅವರ ಹುಟ್ಟುಹಬ್ಬ ಆಚರಣೆ ಅರ್ಥಪೂರ್ಣ. ಐಲೇಸಾ-ದಿ ವಾಯ್ಸ್ ಆಫ್ ಓಷನ್ ಡಿಜಿಟಲ್ ಸಂಸ್ಥೆ ಇತ್ತೀಚೆಗೆ ಐಲೇಸಾ `ಪುವೆಂಪು ನೂತ್ತೊಂಜಿ ನೆಂಪು' ಎನ್ನುವ ತುಳು ಭಾವಗೀತೆಗಳ ಪುಸ್ತಕ ಬಿಡುಗಡೆಮಾಡುವ ಸಂದರ್ಭದಲ್ಲಿ ನಾನು ಅವರ ಸಾಧನೆಗಳ ಬಗ್ಗೆ ಹೆಚ್ಚಿಗೆ ತಿಳಿದು ಕೊಂಡಾಗ ಪುಣಿಂಚತ್ತಾಯ ಅವರ ವ್ಯಕ್ತಿತ್ವ, ತ್ಯಾಗ ಮತ್ತು ಭಾಷಾಭಿಮಾನದ ವಿಷಯದಲ್ಲಿ ಹೆಮ್ಮೆ ಮೂಡಿತು. ಅವರು ತುಳುವರ ಮನದಲ್ಲಿ ಸದಾ ಸ್ಥಾಯಿಯಾಗಿ ನಿಲ್ಲುವರು ಎಂದು ಸರ್ವೋತ್ತಮ ಶೆಟ್ಟಿ ಅಬುದಾಭಿ ತಿಳಿಸಿದರು.
ಡಾ| ಪುಣಿಂಚತ್ತಾಯ ಅವರ ಹುಟ್ಟು ಹಬ್ಬದ ನೆನಪಲ್ಲಿ ತುಳುವರ್ಲ್ಡ್ ಮಂಗಳೂರು ಮತ್ತು ಪುವೆಂಪು ನೆಂಪು ಸಮಿತಿ ಕಳೆದ ಭಾನುವಾರ ಕಾಸರಗೋಡು ಅನಂತಪುರದಲ್ಲಿ ಆಯೋಜಿಸಿದ್ದ ತುಳು ಲಿಪಿ ದಿನ ಮತ್ತು ಪುವೆಂಪು ನೆಂಪು 2022 ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಐಲೇಸಾದ ಸಾರಥಿü ಡಾ| ರಮೇಶ್ಚಂದ್ರ (ಬೆಂಗಳೂರು) ಅವರಿಗೆ ಪುವೆಂಪು ಸಮ್ಮಾನ್ ಪ್ರದಾನಿಸಿ ಸರ್ವೋತ್ತಮ ಶೆಟ್ಟಿ ಮಾತನಾಡಿ ಪುವೆಂಪು ನೆನಪಲ್ಲಿ ನೂರಒಂದು ತುಳು ಹಾಡುಗಳನ್ನು ರಾಗ ಸಂಯೋಜಿಸುವ ಪ್ರಯತ್ನಕ್ಕೆ ಮತ್ತು ಅವರ ಹೆಸರಲ್ಲಿ ಪುಸ್ತಕ ಪ್ರಕಟಿಸಿ ಬಿಡುಗಡೆ ಗೊಳಿಸಿದ್ದಕ್ಕಾಗಿ ಡಾ| ರಮೇಶ್ಚಂದ್ರ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅಭಿನಂದನೀಯ ಮತ್ತು ಅರ್ಹ ಗೌರವವಾಗಿದೆ ಎಂದೂ ಸರ್ವೋತ್ತಮ ಶೆಟ್ಟಿ ತಿಳಿಸಿದರು .
ಸಮಿತಿಯ ಗೌರವಾಧ್ಯಕ್ಷ, ಸಾಹಿತಿ ಕೃಷ್ಣಯ್ಯ ಅನಂತಪುರ ಮಾತನಾಡಿ ಡಾ| ಪುಣಿಂಚತ್ತಾಯರು ಬಹುಭಾಷಾ ಪಂಡಿತ ಅವರ ಸಾಹಿತ್ಯ ಕಾರ್ಯಗಳನ್ನು ಕಾಪಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಕುಪ್ಪಳ್ಳಿಗೆ ಒಬ್ಬ ಕುವೆಂಪು ಹಾಗೆಯೇ ಪುಂಡೂರಿಗೊಬ್ಬ ಪುವೆಂಪು ಎಂದು ಶ್ಲಾಘಿಸಿದರು.
ಪುವೆಂಪು ಅವರಂತೆ ತುಳುನಾಡಿನಲ್ಲಿ ಹಲವಾರು ಮುತ್ತು ರತ್ನಗಳಿವೆ. ತುಳು ಭಾಷೆಗೆ ನಿರಂತರವಾಗಿ ದುಡಿಯುವವರನ್ನು ಮುಂದಿನ ದಿನಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯ ಅರ್ಹವಾಗಿ ಗುರುತಿಸುವ ಮೂಲಕ ತನ್ನ ಕರ್ತವ್ಯ ಮೆರೆಯಲಿದೆ' ಎಂದು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ| ಪಿ. ಸುಬ್ರಮಣ್ಯ ಯಡಪಡಿತ್ತಾಯ ಹೇಳಿದರು .
ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಜಿ.ಕತಲ್ಸಾರ್ ಮಾತನಾಡಿ ನನಗೆ ತುಳುವಿನಲ್ಲಿ ಸಹಿ ಹಾಕುವುದನ್ನು ಕಲಿಸಿಕೊಟ್ಟವರೇ ಡಾ| ಪುಣಿಂಚತ್ತಾಯರು. ಅವರ ಹೆಸರಲ್ಲಿ ನಡೆಯುವ ತುಳು ಲಿಪಿದಿನ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತ್ನ ದ.ಕ ಜಿಲ್ಲಾಧ್ಯಕ್ಷ, ಕೇರಳ ತುಳು ಅಕಾಡಮಿ ಅಧ್ಯಕ್ಷ ಜಯಾನಂದ, ತುಳುವರ್ಲ್ಡ್ ಅಧ್ಯಕ್ಷ ಡಾ| ರಾಜೇಶ್ ಆಳ್ವ , ಪೆÇ್ರ| ಎಂ.ಪಿ ಶ್ರೀನಾಥ್, ನಿಟ್ಟೆ ವಿಶ್ವವಿದ್ಯಾಲಯದ ಡಾ| ಸಾಯಿಗೀತ, ಫೆÇ್ಲೀರಿಡಾ ತುಳು ಕೂಟದ ಶ್ರೀವಲ್ಲಿ ರೈ ಮಾರ್ಟೆಲ್, ಭಾಸ್ಕರ್ ಕಾಸರಗೋಡು, ಮಾಧವ ಭಂಡಾರಿ, ನ್ಯಾಯವಾದಿ ಉದಯ ಗಟ್ಟಿ, ನ್ಯಾಯವಾದಿ ಥಾಮಸ್ ಡಿಸೋಜಾ, ಅರವಿಂದ ಅಲೆವೂರಾಯ, ಬಿ.ಪಿ ಶೇಣಿ , ಪ್ರಭಾವತಿ ಕೆದಿಲಾಯ, ವಿಜಯರಾಜ ಪುಣಿಂಚತ್ತಾಯ, ಐಲೇಸಾದ ಗೋಪಾಲ್ ಪಟ್ಟೆ ಮತ್ತಿತರರು ಉಪಸ್ಥಿತರಿದ್ದು ಅಂತಃಪುರದ ದೇವ ಮೊಸಳೆ ಬಬಿಯಾ ಕಾಲವಶಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಾಗೂ ಬಬಿಯ ಗೌರವಾರ್ಥ ಮನರಂಜನೆ ರದ್ದುಗೊಳಿಸಿ ಕಾರ್ಯಕ್ರಮ ಸೀಮಿತಗೊಳಿಸಿ ಗೌರವ ಸಲ್ಲಿಸಲಾಯಿತು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ರವಿ ನಾಯ್ಕಾಪು ವಂದಿಸಿದರು.