Thursday 28th, March 2024
canara news

ಬಂಗ್ರ ಕುಳೂರುನಲ್ಲಿ `ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ' ಕಾರ್ಯಕ್ರಮ

Published On : 01 Jan 2023   |  Reported By : Rons Bantwal


ಸ್ವಾಭಿಮಾನ ಬಿಟ್ಟು ಸಹಾಯ ಪಡೆದಾಗ ಒಳಿತು ಸಾಧ್ಯ : ಕೆ.ಪ್ರಕಾಶ್ ಶೆಟ್ಟಿ

ಮುಂಬಯಿ (ಆರ್‍ಬಿಐ), ಡಿ.30: ಬಾಲ್ಯದಲ್ಲಿ ನನ್ನ ಮನೆಯ ಒಳಗೂ ಹೊರಗೂ ಮಳೆ ಸುರಿಯುತ್ತಿತ್ತು, ಚಂದ್ರನನ್ನು ನಾನು ಮನೆಯ ಒಳಗಡೆಯೇ ಮಲಗಿ ನೋಡಿದ್ದೇನೆ. ಬಡತನ ಕಣ್ಣಾರೆ ಕಂಡವನು ನಾನು. ಸ್ವಾಭಿಮಾನ ಬಿಟ್ಟು ಸಹಾಯ ಪಡೆದುಕೊಳ್ಳಿ ಮುಂದಿನ ದಿನಗಳು ಖಂಡಿತ ಒಳ್ಳೆಯದಾಗುತ್ತದೆ. ನಾನು ದುಡಿಯಲು ಊರು ಬಿಟ್ಟು ಹೋದ ಸಂದರ್ಭದಲ್ಲಿ ಅನೇಕ ಮಂದಿ ನೆರವು ನೀಡಿದ್ದಾರೆ. ಅವರೆಲ್ಲರ ಋಣ ನನ್ನ ಮೇಲಿದೆ. ಆತ್ಮತೃಪ್ತಿಗಾಗಿ ಈ ಯೋಜನೆ ಹಾಕಿಕೊಂಡಿದ್ದೇನೆ. ನಿಮ್ಮೆಲ್ಲರ ಆಶೀರ್ವಾದವೇ ನನಗೆ ಬಲುದೊಡ್ಡ ಆಸ್ತಿಯಾಗಿದೆ" ಎಂದು ಎಂಆರ್‍ಜಿ ಸಮೂಹದ ಕಾರ್ಯಾಧಕ್ಷ ಕೆ.ಪ್ರಕಾಶ್ ಶೆಟ್ಟಿ ತಿಳಿಸಿದರು.

 

ಇತ್ತೀಚೆಗೆ ಮಂಗಳೂರು ಬಂಗ್ರ ಕೂಳೂರು ಅಲ್ಲಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಜರುಗಿಸಲಾದ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ವಿತರಣಾ ಕಾರ್ಯಕ್ರಮವನ್ನುದ್ದೇಶಿಸಿ ಪ್ರಕಾಶ್ ಶೆಟ್ಟಿ ಮಾತನಾಡಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ, ಹರೇಕಳ ಹಾಜಬ್ಬ, ಅಮೈ ಮಹಾಲಿಂಗ ನಾಯ್ಕ, ತಿಮ್ಮಕ್ಕನ ದತ್ತುಪುತ್ರ ಉಮೇಶ್, ಗುರ್ಮೆ ಫೌಂಡೇಶನ್‍ನ ಸಂಸ್ಥಾಪಕಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಪ್ರಧಾನ ಅಭ್ಯಾಗತರಾಗಿ ಹಾಗೂ ಆಶಾ ಪ್ರಕಾಶ್ ಶೆಟ್ಟಿ ದಂಪತಿ, ಎಂಆರ್‍ಜಿ ಆಡಳಿತ ನಿರ್ದೇಶಕ ಗೌರವ್ ಪಿ. ಶೆಟ್ಟಿ ವೇದಿಕೆಯಲ್ಲಿದ್ದು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ 1250 ಕುಟುಂಬಗಳಿಗೆ 3 ಕೋಟಿ ರೂಪಾಯಿ ಮೊತ್ತದ ಸಹಾಯಹಸ್ತ ವಿತರಣೆ ಮಾಡಿದರು. ಸಾಂಕೇತಿಕವಾಗಿ 7 ಮಂದಿಗೆ ವೇದಿಕೆಯಲ್ಲಿ ಸಹಾಯ ಹಸ್ತ ವಿತರಿಸಿದರು.

ಇಂದಿನ ದಿನ ನನ್ನ ಜೀವನದಲ್ಲಿ ಅತ್ಯಂತ ಸಂತೋಷ ಮತ್ತು ತೃಪ್ತಿ ಕೊಡುವ ದಿನವಾಗಿದೆ. 2019ರಲ್ಲಿ ನನ್ನ 60ನೇ ಹುಟ್ಟುಹಬ್ಬವನ್ನು "ಪ್ರಕಾಶಾಭಿನಂದನ" ಹೆಸರಲ್ಲಿ ಇದೇ ವೇದಿಕೆಯಲ್ಲಿ ಅಭಿಮಾನಿಗಳು ಬಹಳಷ್ಟು ಅದ್ಧೂರಿಯಿಂದ ನಡೆಸಿದ್ದರು. ಅಂದಿನ ವೇದಿಕೆಯಲ್ಲಿ ನಾನು ಪ್ರತೀ ವರ್ಷ ಒಂದು ಕೋಟಿ ರೂ. ಹಣವನ್ನು ಸಮಾಜಕ್ಕೆ ನೆರವಿನ ರೂಪದಲ್ಲಿ ನೀಡುವುದಾಗಿ ಘೋಷಿಸಿದ್ದೆ. ಅದರಂತೆ 2019ರಲ್ಲಿ ಒಂದೂವರೆ ಕೋಟಿ ರೂ. ನೆರವು ನೀಡಲಾಗಿದೆ. 2020-21ರಲ್ಲಿ ಕೊರೋನಾ ಹಾವಳಿ ಇದ್ದರೂ ತಲಾ 2 ಕೋಟಿ ರೂಪಾಯಿ ನೆರವು ನೀಡಲಾಯಿತು. ಈ ವರ್ಷ 1,250 ಮಂದಿಗೆ ಸುಮಾರು 3 ಕೋಟಿಯಷ್ಟು ಹಣವನ್ನು ನೆರವಿನ ರೂಪದಲ್ಲಿ ನೀಡಲಾಗುತ್ತಿದೆ. 10,000 ದಿಂದ 5 ಲಕ್ಷ ರೂಪಾಯಿ ತನಕ ವಿದ್ಯಾಭ್ಯಾಸ, ಆರೋಗ್ಯ, ಬಡ ಕುಟುಂಬಗಳಿಗೆ ಆಸರೆಯಾಗಲು ಸಹಾಯ ಧನವನ್ನು ಹಂಚಲಾಗುತ್ತಿದೆ. 2,000 ಅರ್ಜಿಗಳು ಬಂದಿದ್ದು ಎಲ್ಲವನ್ನೂ ಸ್ವೀಕರಿಸಲು ಸಾಧ್ಯವಾಗಿಲ್ಲ ಅದಕ್ಕಾಗಿ ಕ್ಷಮಿಸಿ ಮುಂದಿನ ಬಾರಿ ಎಲ್ಲಾ ಅರ್ಜಿಗಳನ್ನು ಸ್ವೀಕರಿಸಿ ಎಲ್ಲರಿಗೂ ನೆರವು ನೀಡಲು ಪ್ರಯತ್ನಿಸುತ್ತೇನೆ. ನನ್ನ ಸಂಸ್ಥೆಯಲ್ಲಿ 4,000 ಮಂದಿ ಸಿಬ್ಬಂದಿ ದುಡಿಯುತ್ತಿದ್ದಾರೆ. ನನ್ನ ಧರ್ಮಪತ್ನಿ ನನ್ನ ಕಾರ್ಯಕ್ಕೆ ಬೆನ್ನೆಲುಬಾಗಿದ್ದು ಮಗ-ಸೊಸೆ ನನ್ನ ಈ ಕಾರ್ಯದಲ್ಲಿ ಜೊತೆಗೆ ನಿಂತಿದ್ದಾರೆ. ಕುಟುಂಬ ನನಗೆ ಬೆಂಬಲ ನೀಡುತ್ತಿದೆ. ಅವರು ಮತ್ತು ನಾನು ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ಹಂಚುವ ಮೂಲಕ ನಿಮ್ಮ ಆಶೀರ್ವಾದ ಪಡೆಯುತ್ತಿದ್ದೇವೆ ಎಂದೂ ಪ್ರಕಾಶ್ ಶೆಟ್ಟಿ ತಿಳಿಸಿದರು.

ಉಮೇಶ್ ಮಾತನಾಡಿ"ಸಾಲುಮರದ ತಿಮ್ಮಕ್ಕ ಹುಲ್ಲು ಜೋಪಡಿಯಲ್ಲಿ ಸಮಾಜದ ಕಟ್ಟಕಡೆಯ ಕುಟುಂಬದಲ್ಲಿ ಜನಿಸಿದ್ರು. ಮದುವೆಯಾಗಿ ಮತ್ತೊಂದು ಹುಲ್ಲಿನ ಮನೆಗೆ ಹೋದರು. ಆದರೆ ಹಲವು ವರ್ಷಗಳ ಕಾಲ ಮಕ್ಕಳಾಗಲಿಲ್ಲ ಇದಕ್ಕಾಗಿ ಸಮಾಜದ ಅವಮಾನ ಅನುಭವಿಸಿದರು. ಕೊನೆಗೆ ವೃಕ್ಷಗಳೇ ನನ್ನ ಮಕ್ಕಳು ಅಂತ ನಿರ್ಧರಿಸಿ ಸಾಲು ಮರಗಳನ್ನು ನೆಡಲು ಪ್ರಾರಂಭಿಸಿದರು. ಅಲ್ಲಿಂದ ಅವರ ಸಾಧನೆ ಪದ್ಮಶ್ರೀ ತನಕ ಸಾಗಿದೆ. ಸದ್ಯ 112ನೇ ವಯಸ್ಸಿನಲ್ಲಿ ಕರ್ನಾಟಕ ಸರಕಾರ "ಪರಿಸರ ರಾಯಭಾರಿ" ಎಂದು ಗುರುತಿಸಿ ಸ್ಥಾನಮಾನ ನೀಡಿದೆ. ತಿಮ್ಮಕ್ಕ ಅವರಿಗೆ ಎಷ್ಟೋ ಮಂದಿ ಘೋಷಣೆಯಾದ ಅದೆಷ್ಟೋ ಲಕ್ಷದ ಚೆಕ್‍ಗಳು ಬೌನ್ಸ್ ಆಗಿವೆ. ಅನೇಕ ನೆರವು ತಲುಪಲೇ ಇಲ್ಲ. ಆದರೆ ಪ್ರಕಾಶ್ ಶೆಟ್ಟಿ ಅವರು ನೇರವಾಗಿ ಮನೆಗೆ ಬಂದು 5 ಲಕ್ಷ ರೂಪಾಯಿ ಚೆಕ್ ನೀಡಿದರು. ಇಂತಹ ಜನನಾಯಕರು ರಾಜಕೀಯಕ್ಕೆ ಬರಬೇಕು. ಸರಕಾರದ ನೆರವು ಬಡಜನರಿಗೆ ಸಿಗುವಂತಾಗಬೇಕು" ಎಂದರು.

ಹಾಜಬ್ಬ ಮಾತಾಡುತ್ತಾ, "ನನ್ನ ಜೀವನವನ್ನು ಬಸ್ ನಿಲ್ದಾಣದಲ್ಲಿ ಕಿತ್ತಳೆ ಮಾರಿಕೊಂಡು ಕಳೆದವನು. ನನಗೆ ಮನೆ, ಭೂಮಿ ಕೊಟ್ಟು ಬೆಳೆಸಿದವರು ಬಂಟ ಸಮುದಾಯದವರು. ನನ್ನ ಎದುರಲ್ಲಿ ಇಂದು ಪ್ರಕಾಶ್ ಶೆಟ್ಟಿ ಅವರು ನನ್ನಂತಹ ಸಾವಿರಾರು ಮಂದಿಗೆ ನೆರವು ನೀಡಿದ್ದಾರೆ. ಅವರಿಗೆ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ" ಎಂದರು.

ಅಮೈ ಮಹಾಲಿಂಗ ಮಾತಾಡುತ್ತಾ, "ನೀವು ನಿಮಗೆ ಅಲ್ಪ ಜಮೀನು ಇದ್ದರೂ ಅದರಲ್ಲಿ ಒಂದು ತೆಂಗು ಕಂಗು ಗಿಡವನ್ನಾದರೂ ನೆಟ್ಟುಬಿಡಿ. ಅದು ನಿಮ್ಮ ಕುಟುಂಬಕ್ಕೆ ಬೆಳಕು ನೀಡುತ್ತದೆ. ನಾನು ವಾರಗಟ್ಟಲೆ ಊಟಕ್ಕೂ ಇಲ್ಲದೆ ಪರದಾಡುತ್ತಿದ್ದ ಕಾಲವಿತ್ತು. ಈಗ ನನ್ನನ್ನು ಅಲ್ಲಲ್ಲಿ ಜನರು ಗುರುತಿಸುತ್ತಿದ್ದಾರೆ. ಸಮಾಜಕ್ಕೆ ಅಲ್ಪ ಮೊತ್ತದ ಸಹಾಯ ಸಲ್ಲಿಸುತ್ತಿದ್ದೇನೆ. ಪಟ್ಟಣಕ್ಕೆ ಹೋಗುವ ಬದಲು ಹಳ್ಳಿಯಲ್ಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ" ಎಂದರು.

ಗುರ್ಮೆ ಸುರೇಶ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ "ಆಲದ ಮರದಂತೆ ನೊಂದವರ ಆಶಾಕಿರಣ ಆಗಿರುವ ಪ್ರಕಾಶ್ ಶೆಟ್ಟಿ, ತಾವು ಕಷ್ಟಪಟ್ಟು ದುಡಿದ ಹಣವನ್ನು ಕೂಡಿಡದೆ ಸಮಾಜಕ್ಕೆ ಇಂತಿಷ್ಟು ಪಾಲು ನೀಡುತ್ತಿದ್ದಾರೆ. ಇದು ಇನ್ನಷ್ಟು ಮಂದಿಗೆ ಸ್ಫೂರ್ತಿಯಾಗಲಿ. ನೊಂದವರು, ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವ ಪ್ರಕಾಶ್ ಶೆಟ್ಟಿ ಅವರ ಸಂಖ್ಯೆ ಸಾವಿರವಾಗಲಿ. ಪ್ರತೀ ವರ್ಷ ತಮ್ಮ ಜನ್ಮದಿನದಂದು ಸಮಾಜಕ್ಕೆ ನೆರವಿನ ಸಹಾಯಹಸ್ತ ಚಾಚುವ ಅವರ ಗುಣ ಶ್ಲಾಘನೀಯವಾದುದು ಎಂದರು.

ಆಶಾ ಪ್ರಕಾಶ್ ಶೆಟ್ಟಿ ದಂಪತಿ ಸಾಲುಮರದ ತಿಮ್ಮಕ್ಕ, ಹರೇಕಳ ಹಾಜಬ್ಬ, ಅಮೈ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here