Saturday 2nd, December 2023
canara news

ಪ್ರಜಾಪ್ರಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯಲ್ಲಿ ಆಯೋಜಿತ ಮಹಾಶಿವರಾತ್ರಿ ಕಾರ್ಯಕ್ರಮ

Published On : 18 Feb 2023   |  Reported By : Rons Bantwal


ಕೆಲಸ ಕಾರ್ಯಗಳ ಬದ್ಧತೆಯೇ ಅಭಿವೃದ್ಧಿಗೆ ಸೋಪಾನ: ಸಚಿವ ಡಾ| ನಾರಾಯಣ ಗೌಡ


ಮುಂಬಯಿ (ಆರ್‍ಬಿಐ), ಫೆ.18: ನಮ್ಮ ಪಾಲಿನ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡಿ ನಮ್ಮ ಕೆಲಸದ ಮೇಲೆ ಬದ್ಧತೆಯನ್ನು ತೋರುವುದೇ ನಮ್ಮ ಏಳ್ಗೆಗೆ ಸೋಪಾನವಾಗುತ್ತದೆ ಎಂಬ ಸತ್ಯವನ್ನು ಎಲ್ಲಿಯವರೆಗೆ ತಿಳಿಯುವುದಿಲ್ಲವೋ ಅಲ್ಲಿಯವರೆಗೆ ನಾವು ಮಾಡುವ ಕೆಲಸದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರದ ಕ್ರೀಡೆ, ಯುವ ಸಬಲೀಕರಣ, ರೇಷ್ಮೆಖಾತೆಗಳ ಸಚಿವ ಡಾ| ಕೆ.ಸಿ.ನಾರಾಯಣ ಗೌಡ ಹೇಳಿದರು.

ಕೆ.ಆರ್.ಪೇಟೆ ಪಟ್ಟಣದ ಸುಭಾಷ್‍ನಗರ ಬಡಾವಣೆಯಲ್ಲಿರುವ ಪ್ರಜಾಪ್ರಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಇಂದಿಲ್ಲಿ ಆಯೋಜಿಸಿದ್ದ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ಸಂದೇಶ ನೀಡಿ ಸಚಿವರು ಮಾತನಾಡಿದರು.

ಮಹಾಶಿವರಾತ್ರಿ ಜಾಗರಣೆಯ ಪುಣ್ಯದಿನವಾದ ಇಂದು ನಾವು ಅಜ್ಞಾನದ ಅಂಧಕಾರದಿಂದ ಹೊರಬಂದು ಧಾರ್ಮಿಕ ಜಾಗೃತಿಯನ್ನು ಮೂಡಿಸಿಕೊಂಡು ಸತ್ಯದ ದಾರಿಯಲ್ಲಿಯೇ ಸಾಗಿ ಗುರಿಸಾಧನೆ ಮಾಡುತ್ತೇವೆ ಎಂದು ಮಾನಸಿಕವಾಗಿ ನಿಶ್ಚಯ ಮಾಡಿಕೊಳ್ಳುವುದೇ ಜಾಗರಣೆಯ ಸತ್ಯ ಸಂದೇಶವಾಗಿದೆ. ಅಂತೆಯೇ ನಾವು ಮಾಡುವ ಯಾವುದೇ ಕೆಲಸವು ಚಿಕ್ಕದಿರಲಿ ಅಥವಾ ದೊಡ್ಡದಾಗಿರಲಿ ನಾವು ಮಾಡುವ ಕೆಲಸದಲ್ಲಿ ನಿಜವಾದ ಸಾರ್ಥಕತೆಯನ್ನು ಹೊಂದಿ ಅಭಿವೃದ್ಧಿ ಹೊಂದುವುದೇ ನಿಜವಾದ ಶಿವರಾತ್ರಿಯ ಸತ್ಯದರ್ಶನವಾಗಿದೆ. ನಾವು ಮಾಡುವ ಕೆಲಸವು ಸಮಾಜಮುಖಿ ಆಗಿದ್ದು ಭಗವಂತನು ಮೆಚ್ಚುವಂತಿರಬೇಕೇ ಹೊರತು ಇನ್ನೊಬ್ಬರಿಗೆ ನೋವುಂಟು ಮಾಡುವಂತಿರಬಾರದು ಎಂದರು.

ಎಲ್ಲಿಯವರೆಗೆ ತಿಳಿಯುವುದಿಲ್ಲವೋ ಅಲ್ಲಿಯವರೆಗೆ ನಾವು ಭಗವಂತನ ಸಾಕ್ಷಾತ್ಕಾರ ಹೊಂದಲು ಸಾಧ್ಯವಿಲ್ಲ. ಸದಾ ಕಾಲವೂ ಒಂದಿಲ್ಲೊಂದು ಕೆಲಸದ ಒತ್ತಡದಲ್ಲಿ ಮುಳುಗಿಹೋಗಿರುವ ನಾವು ಆತ್ಮಜಾಗೃತಿಗೆ, ಭಗವಂತನ ಒಲುಮೆಗೆ ಸಮಯವನ್ನು ನೀಡಲು ಸಾಧ್ಯವಾಗುತ್ತಿಲ್ಲ. ರಾಮಾಯಣ, ಮಹಾಭಾರತ, ಭಗವದ್ಗೀತೆ ಗ್ರಂಥಗಳ ಪಾರಾಯಣ ಮಾಡುವುದು, ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನವನ್ನು ವಿಕಾಸಗೊಳಿಸಿಕೊಳ್ಳುವುದು ನಮ್ಮ ಮೊದಲ ಆಧ್ಯತೆಯಾಗಬೇಕು. ಆಗ ಮಾತ್ರ ನಾವು ಸಾಧನೆ ಮಾಡುವ ಜೊತೆಗೆ ಹೆಸರು ಕೀರ್ತಿಯನ್ನು ಸುಲಭವಾಗಿ ಗಳಿಸಬಹುದಾಗಿದೆ. ಪ್ರಜಾಪಿತ ಬ್ರಹ್ಮಕುಮಾರಿ ಆಶ್ರಮವು ವಿಶ್ವದಾಧ್ಯಂತ ಶಾಖೆಗಳನ್ನು ತೆರೆದು ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮವು ಜಗ್ತಿನಲ್ಲಿಯೇ ಯಾವುದೂ ಇಲ್ಲ. ಆತ್ಮಜಾಗೃತಿಗಾಗಿ ನಾವು ಸನ್ಮಾರ್ಗದಲ್ಲಿ ನಡೆಯುವ ಜೊತೆಗೆ ಮಾನವತೆಗೆ ಒತ್ತು ನೀಡಿ ಪರೋಪಕಾರ ಗುಣಗಳು ಹಾಗೂ ನೈತಕತೆಯನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂಬ ಸತ್ಯಸಂದೇಶವನ್ನು ನಾಡಿಗೆ ನೀಡುತ್ತಿದೆ. ವಿಶ್ವಸಂಸ್ಥೆಗೆ ನಮ್ಮ ದೇಶದ ಶಾಂತಿಯ ಪ್ರತಿನಿಧಿಯಾಗಿರುವ ಬ್ರಹ್ಮಕುಮಾರಿ ಆಶ್ರಮದ ಸಂದೇಶಗಳನ್ನು ವಿಶ್ವದ ರಾಷ್ಟ್ರಗಳು ಪಾಲಿಸಿದರೆ ಸಾಕು ಯುದ್ಧ, ಭಯೋತ್ಪಾಧಕ ಚಟುವಟಿಕೆಗಳಿಂದ ಮುಕ್ತವಾದ ಆರೋಗ್ಯವಂತ ಸಮಾಜವನ್ನು ಸುಲಭವಾಗಿ ನಾವು ನಿರ್ಮಿಸಬಹುದಾಗಿದೆ ಎಂದೂ ಸಚಿವ ನಾರಾಯಣ ಗೌಡ ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರ ಧರ್ಮಪತ್ನಿ ದೇವಕಿ ಎನ್.ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ರಾಜ್ಯ ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣೂ ಹುಲ್ಲೂರು, ಪ್ರಜಾಪ್ರಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವ್ಯವಸ್ಥಾಪಕಿ ಸವಿತಕ್ಕ, ಪುರಸಭೆ ಸದಸ್ಯೆ ಶೋಭಾ ದಿನೇಶ್, ಕೆ.ಆರ್ ನೀಲಕಂಠ, ಮಾಜಿಸದಸ್ಯೆ ಬಿ.ಎನ್ ಪದ್ಮಾವತಿ, ಕೆ.ಆರ್ ಪುಟ್ಟಸ್ವಾಮಿ, ಡಾ| ದಿವಾಕರ್, ನಾಯಕನಹಳ್ಳಿ ಭೀಮಣ್ಣ, ಶಿಕ್ಷಕಿ ಅನಿತಾ ಚೇತನ್, ಟಿ.ಎಸ್.ಮಂಜುನಾಥ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.




More News

ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ  (ಉತ್ಹಾನ ದ್ವಾದಶಿ ) ಆಚರಣೆ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ (ಉತ್ಹಾನ ದ್ವಾದಶಿ ) ಆಚರಣೆ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ

Comment Here