ಮುಂಬಯಿ (ಆರ್ಬಿಐ), ಮಾ.02: ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್ಗಳ 2023-2024ರ ಸಾಲಿನ ಶೇ 15ರಷ್ಟು ಅಬಕಾರಿ ಸುಂಕ ಹೆಚ್ಚಳವನ್ನು ಕಡಿತ ಮಾಡುವಂತೆ ಫೆಡರೇಶನ್ ಆಫ್ ಹೊಟೇಲ್ ಹಾಗೂ ರೆಸ್ಟೊರೆಂಟ್ ಅಸೋಸಿಯೇಶನ್ ನಿಯೋಗವು ಫೆಡರೇಶನ್ನ ಅಧ್ಯಕ್ಷ ಡಾ| ವಿರಾರ್ ಬಿ. ಶಂಕರ್ ಶೆಟ್ಟಿ ಅವರ ನೇತೃತ್ವ ಹಾಗೂ ಮೀರಾ ಭಯಂದರ್ ಶಾಸಕಿ ಗೀತಾ ಜೈನ್ ಮುಂದಾಳತ್ವದಲ್ಲಿ ಕಳೆದ ಮಂಗಳವಾರ ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ಮು ಭೇಟಿ ಮಾಡಿ ಮನವಿ ಸಲ್ಲಿಸಿತು.
ಕೊರೊನಾ ಹಾವಳಿಯಿಂದ ಕಂಗೆಟ್ಟಿರುವ ಹೊಟೇಲು ಉದ್ಯಮ ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಳ್ಳುವ ಸಮಯದಲ್ಲಿಯೇ ಸುಂಕ ದರ ಹೆಚ್ಚಳವು ಉದ್ಯಮಕ್ಕೆ ಮಾರಕ ಹೊಡೆತ ಬಿದ್ದಂತಾಗಿದೆ. ಮಾತ್ರವಲ್ಲದೆ ಸರಕಾರದ ನಿಯಮಾವಳಿಗಳ ಪ್ರಕಾರ ಕ್ರಮಬದ್ದವಾಗಿ ಉದ್ಯಮವು ಮುಂದುವರಿಯುತ್ತಿದೆ. ತೀವ್ರ ಸಂಕಷ್ಟದಲ್ಲಿರುವ ಉದ್ಯಮಕ್ಕೆ ಅಬಕಾರಿ ಸುಂಕ ಹೆಚ್ಚಳದಿಂದ ತುಂಬಲಾರದ ನಷ್ಟವಾಗುತ್ತಿದೆ ಎಂದು ನಿಯೋಗವು ಮುಖ್ಯಮಂತ್ರಿಯಾಅವರಿಗೆ ಪೂರ್ಣ ಮಾಹಿತಿಯೊಂದಿಗೆ ಮನವರಿಕೆ ಮಾಡಿತು. ಮನವಿ ಸ್ವೀಕರಿಸಿದ ಮುಖ್ಯಮಂತ್ರಿಯವರು ಈ ಬಗ್ಗೆ ಸಂಬಂಧಿತ ಇಲಾಖೆಯಿಂದ ಮಾಹಿತಿ ಪಡೆದು ನಿಯೋಗದೊಂದಿಗೆ ಚರ್ಚಿಸಿದರು.
ಹೊಟೇಲ್ ಉದ್ಯಮದ ಸಂಕಷ್ಟಗಳನ್ನು ಆಲಿಸಿದ ಮುಖ್ಯಮಂತ್ರಿಯವರು ಸರಕಾರದ ಅಬಕಾರಿ ಮಂತ್ರಿ ಶಂಭುರಾಜ್ ದೇಸಾಯಿ ಅವರಲ್ಲಿ ದೂರವಾಣಿ ಮೂಲಕ ಮಾತುಕತೆ ನಡೆಸಿ ಸುಂಕ ಹೆಚ್ಚಳವನ್ನು ಕಡಿಮೆಗೊಳಿಸುವಲ್ಲಿ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅಂತೆಯೇ ಅಲ್ಲಲ್ಲಿ ತಲೆಯೆತ್ತುತ್ತಿರುವ ಅನಧಿಕೃತ ಡಾಬಗಳಿಂದಾಗುವ ತೊಂದರೆಗಳ ಬಗ್ಗೆಯೂ ನಿಯೋಗವು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದು ಈ ಬಗ್ಗೆ ಹಾಗೂ ಅಬಕಾರಿ ಸುಂಕದ ಹೆಚ್ಚಳವನ್ನು ಶೇ. 5 ರಿಂದ 10ರಷ್ಟು ಕಡಿಮೆ ಮಾಡುವ ಭರವಸೆಯನ್ನು ನಿಯೋಗಕ್ಕೆ ನೀಡಿದರು.
ನಿಯೋಗದಲ್ಲಿ ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಸಾಲ್ಯಾನ್ ಉಪಾಧ್ಯಕ್ಷರುಗಳಾದ ಶ್ಯಾಮ್ ಎನ್. ಶೆಟ್ಟಿ, ದಯಾನಂದ ಎಸ್. ಶೆಟ್ಟಿ, ಸುರೇಂದ್ರ ರೈ, ಜೊತೆ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ, ಫೆಡರೇಶನ್ನ ಸಲಹೆಗಾರ ಕಳತ್ತೂರು ವಿಶ್ವನಾಥ ಶೆಟ್ಟಿ, ಕಲ್ಯಾಣ್ ಹೊಟೇಲ್ ಎಸೋಸಿಯೇಶನ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ರಾಕೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಬಾಬು ಶೆಟ್ಟಿ, ಮೀರಾಭಯಂದರ್ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ಮಧುಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.