ಮಂಗಳೂರು: ಕುಟುಂಬ ವೈದ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಐಎಂಎ ಅಧ್ಯಕ್ಷ ಶಿವಕುಮಾರ್ ಬಿ ಲಕ್ಕೋಲ್ ಒತ್ತಾಯಿಸಿದರು.
ಶನಿವಾರ ಮಂಗಳೂರು ಐಎಂಎ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಜ್ಞ ವೈದ್ಯರ ಮತ್ತು ಕಾರ್ಪೊರೇಟ್ ಸಂಸ್ಕøತಿಯಿಂದಾಗಿ ವೈದ್ಯಕೀಯ ಸೇವೆ ಜನಸಾಮಾನ್ಯರ ಕೈಗೆಟುಕದಂತಾಗಿದೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರನ್ನು ಅತಿ ನಿಕಟವಾಗಿ ಪರೀಕ್ಷಿಸಿ ಚಿಕಿತ್ಸೆ ನೀಡುವ ಕುಟುಂಬ ವೈದ್ಯ ಪದ್ಧತಿಗೆ ಒತ್ತು ನೀಡಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಒಂದು ಲಕ್ಷ ನಕಲಿ ವೈದ್ಯರಿದ್ದಾರೆ ಎಂದು ಸರ್ಕಾರ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಇವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಒಂದು ವೈದ್ಯಪದ್ಧತಿಯಲ್ಲಿ ಪದವಿ ಪಡೆದಿದ್ದರೆ, ಅದೇ ಪದ್ಧತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಆದರೆ ಹಲವು ಮಂದಿ ವೈದ್ಯರು ತಾವು ಪದವಿ ಪಡೆಯದ ವೈದ್ಯಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತಿರುವುದು ಸಮಸ್ಯೆಯ ಮೂಲ ಕಾರಣ ಎಂದು ವಿಶ್ಲೇಷಿಸಿದರು. ನಕಲಿ ವೈದ್ಯರ ಹಾವಳಿ ತಡೆಗೆ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ವೈದ್ಯರು ಮತ್ತು ವೈದ್ಯ ಸಿಬ್ಬಂದಿಯ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಹಾಗೂ ಹಲ್ಲೆಗಳು ವೈದ್ಯರ ಮಾನಸಿಕ ಬಲವನ್ನು ಕುಗ್ಗಿಸಿವೆ. ಈ ಹಿನ್ನೆಲೆಯಲ್ಲಿ ವೈದ್ಯರಿಗೆ ಮತ್ತು ಆಸ್ಪತ್ರೆಗಳಿಗೆ ಸೂಕ್ತ ರಕ್ಷಣೆ ಒದಗಿಸುವ ಜತೆಗೆ ಹಲ್ಲೆ ಮಾಡುವವರನ್ನು ಬೇಗನೇ ಬಂಧಿಸಿ ಶಿಕ್ಷಿಸುವ ಕಾನೂನು ಜಾರಿಗೊಳಿಸಬೇಕು. ತಪ್ಪಿತಸ್ಥರಿಗೆ ಜಾಮೀನು ಸಿಗಲಾರದಂತೆ ಈಗ ಇರುವ ಕಾನೂನಿನಲ್ಲಿ ಬದಲಾವಣೆ ತರಬೇಕು ಎಂದು ಅಭಿಪ್ರಾಯಪಟ್ಟರು.
ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆಯ ಜಾರಿಯಲ್ಲಿ ಆಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕು. ಅಗ್ನಿಶಾಮಕ ವಿಭಾಗದಿಂದ ಬೇಕಾದ ನಿರಾಕ್ಷೇಪಣ ಪತ್ರ ಪಡೆಯುವುದು ದುಸ್ತರವಾಗಿದ್ದು, ತಾಲೂಕು ಹಾಗೂ ನಗರ ಪ್ರದೇಶದಳ ಸಣ್ಣ ಮತ್ತು ಮಧ್ಯಮ ಗಾತ್ರದ ಆಸ್ಪತ್ರೆಗಳಿಗೆ ಇದರಿಂದ ಸಂಕಷ್ಟ ಎದುರಾಗಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗಳಿಗಾಗಿಯೇ ಸರಳೀಕೃತ ಅಗ್ನಿಸುರಕ್ಷತಾ ಕಾಯ್ದೆ ಜಾರಿಗೆ ತರಬೇಕು ಎಂದು ಮನವಿ ಮಾಡಿದರು.
ಮಾನವ ಸಹಜವಾಗಿ ನಡೆಯುವ ಸಣ್ಣ ಪುಟ್ಟ ತಪ್ಪುಗಳಿಗೆ ಕೂಡಾ ಪಿಸಿಪಿಎನ್ಡಿಟಿ ಕಾನೂನಿನ ಅಡಿಯಲ್ಲಿ ವೈದ್ಯರಿಗೆ ಗಂಭೀರ ಶಿಕ್ಷೆ ನೀಡಲಾಗುತ್ತಿದ್ದು, ಇದನ್ನು ರದ್ದುಪಡಿಸಿ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳಲ್ಲಿ ಮಾತ್ರ ವೈದ್ಯರಿಗೆ ಶಿಕ್ಷೆ ವಿಧಿಸಬೇಕು ಎಂದು ಸಲಹೆ ಮಾಡಿದರು.
ಆಧುನಿಕ ವೈದ್ಯಪದ್ಧತಿಯನ್ನು ಇತರ ವೈದ್ಯಪದ್ಧತಿಯ ಜತೆಗೆ ಸೇರಿಸುವ ಅವೈಜ್ಞಾನಿಕ ವಿಧಾನವನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಸಮುದಾಯ ಆರೋಗ್ಯದಲ್ಲಿ ವಐದ್ಯರು ಭಾಗವಹಿಸುವ ನಿಟಿಟನಲ್ಲಿ ಐಎಂಎ ನಡೆ ಶಾಲೆಯ ಕಡೆ, ಐಎಂಎ ನಡೆ ಸೈನಿಕರ ಕಡೆ ಮತ್ತಯ ಐಎಂಎ ನಡೆ ಹಳ್ಳಿಗಳ ಕಡೆ ಎಂಬ ವಿನೂತನ ಕಾರ್ಯಕ್ರಮವನ್ನು ಐಎಂಎ ರಾಜ್ಯಾದ್ಯಂತ ಹಮ್ಮಿಕೊಳ್ಳಲಿದೆ ಎಂದು ವಿವರಿಸಿದರು.
ಸಹಾಯಕ ಕಾರ್ಯದರ್ಶಿ, ಪದಾಧಿಕಾರಿಗಳಾದ ಲಕ್ಷ್ಮಣ್ ಡಿ. ಬಾಕಳೆ, ಡಾ.ಮಧುಸೂಧರ ಕರಿಗನೂರು, ವೆಂಕಟಾಚಲಪತಿ, ಪ್ರಸನ್ನ ಶಂಕರ್, ಗೀತಾ ದೊಪ್ಪ, ಸದಾನಂದ ಪೂಜಾರಿ, ಮಂಗಳೂರು ಐಎಂಎ ಅಧ್ಯಕ್ಷ ಡಾ.ವೇಣುಗೋಪಾಲ್, ಕಾರ್ಯದರ್ಶಿ ಅರ್ಚಿತ್ ಬೋಳಾರ್, ಖಜಾಂಚಿ ಬಿ. ನಂದಕಿಶೋರ್, ರಂಜನ್ ರಾವ್ ಉಪಸ್ಥಿತರಿದ್ದರು.