ಮುಂಬಯಿ (ಆರ್ಬಿಐ), ಮೇ.06: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್ಕೆಬಿ ಎಸೋಸಿಯೇಶನ್ ಸಹಯೋಗದೊಂದಿಗೆ ಕಳೆದ ಗುರುವಾರ (ಮೇ.5) ಸಯಾನ್ ಅಲ್ಲಿನ ಗೋಕುಲದಲ್ಲಿ ಶ್ರೀ ನರಸಿಂಹ ಜಯಂತಿಯನ್ನು ಸಂಭ್ರಮದಿಂದ ಆಚರಿಸಿತು.
ನರಸಿಂಹ ಜಯಂತಿ ನಿಮಿತ್ತ ಸಂಜೆ ಹೂಮಾಲೆಗಳಿಂದ ಶೃಂಗರಿಸಿದ ಮಂಟಪದಲ್ಲಿ ಶ್ರೀ ನರಸಿಂಹ ದೇವರ ಹಾಗೂ ಶ್ರೀ ಗೋಪಾಲಕೃಷ್ಣ ದೇವರ ಭಾವಚಿತ್ರವನ್ನಿಟ್ಟು ಪ್ರತಿಷ್ಠಾಪಿಸಿ, ವೇದಮೂರ್ತಿ ದರೆಗುಡ್ಡೆ ಶ್ರೀನಿವಾಸ್ ಭಟ್ ಅವರು ದೇವತಾ ಪ್ರಾರ್ಥನೆ, ಕಲ್ಪೋಕ್ತ ಪೂಜೆ ಇತ್ಯಾದಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿ ನಂತರ ಶ್ರೀ ನರಸಿಂಹ ದೇವರಿಗೆ ಮಹಾಮಂಗಳಾರತಿ ನೆರವೇರಿಸಿ ನೆರೆದ ಸದ್ಭಕ್ತರಿಗೆ ತೀರ್ಥ ಪ್ರಸಾದವನ್ನಿತ್ತು ಅನುಗ್ರಹಿಸಿದರು.
ಭಗವಾನ್ ಶ್ರೀ ಕೃಷ್ಣನಿಗೆ ಅತಿ ಪ್ರಿಯ ವಸಂತ ಋತು. ಹಾಗಾಗಿ ಈ ಬಾರಿ ಶ್ರೀ ನರಸಿಂಹ ಜಯಂತಿಯ ಶುಭ ಸಂದರ್ಭದಲ್ಲಿ ಪ್ರಪ್ರಥಮವಾಗಿ ವಸಂತ ಪೂಜೆಯನ್ನು ಆಚರಿಸುವ ಸಂಕಲ್ಪವನ್ನು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮಾಡಿತು. ಅರ್ಚಕರಾದ ವೇದಮೂರ್ತಿ ಗಣೇಶ್ ಭಟ್ ಅವರು ದೇಗುಲದಲ್ಲಿ ಶ್ರೀ ಗೋಪಾಲಕೃಷ್ಣ ದೇವರ ದಿವ್ಯ ಮೂರ್ತಿಯನ್ನು ವಿಶೇಷ ಫಲಪುಷ್ಪಗಳ ಹಾರಗಳಿಂದ ಅಲಂಕರಿಸಿ ರಾತ್ರಿ ಪೂಜೆಗೈದು ಮಂಗಳಾರತಿ ಬೆಳಗಿದರು.
ನಂತರ ಅರ್ಚಕರು ಶ್ರೀ ದೇವರ ಶೃಂಗರಿಸಿದ ಉತ್ಸವ ಮೂರ್ತಿಯಿಯನ್ನು ತೀರ್ಥಮಂಟಪದಲ್ಲಿ ರಜತ ತೊಟ್ಟಿಲಿನಲ್ಲಿರಿಸಿ, ವಸಂತ ಮಾಸದ ವಿಶೇಷ ಫಲಗಳು, ಸಾಂಪ್ರದಾಯಿಕ ಪಾನಕ, ಕೋಸಂಬರಿ ಇತ್ಯಾದಿಗಳನ್ನು ನೈವೇದಿಸಿ ಮಂಗಳಾರತಿ ಬೆಳಗಿದರು. ಗೋಕುಲ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆಸಿದ್ದು ಭಜನಾ ಮಂಡಳಿಯವರಿಂದ ತೂಗಿರೆ ರಂಗನ ತೂಗಿರೆ ಕೃಷ್ಣನ ಜೋಗುಳ ಹಾಡಿನೊಂದಿಗೆ ಶ್ರೀ ದೇವರ ತೊಟ್ಟಿಲನ್ನು ತೂಗಲಾಯಿತು.
ಹಿರಿಯ ಪುರೋಹಿತ ವೇದಮೂರ್ತಿ ಗುರುರಾಜ ಉಡುಪರ ಸಹಿತ ವೇದಮೂರ್ತಿಗಳಾದ ದಿನೇಶ್ ಉಪ್ಪರ್ಣ, ಶ್ರೀಕರ ಭಟ್, ಸುಬ್ರಹ್ಮಣ್ಯ ಐತಾಳ್, ಗಿರಿಧರ್ ಉಡುಪ, ಪರೇಲ್ ಶ್ರೀನಿವಾಸ್ ಭಟ್, ಬಿಎಸ್ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್, ವಿಜಯಲಕ್ಷ್ಮಿ ಎಸ್.ರಾವ್ ದಂಪತಿ, ಉಭಯ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರನೇಕರು ಸಹಿತ ನೂರಾರು ಭಕ್ತರು ಉಪಸ್ಥಿತರಿದ್ದರು.