ಮುಂಬಯಿ, ಜೂ.17: ಗೌರವಾನ್ವಿತ ಸಿವಿಲ್ ನ್ಯಾಯಾಧೀಶ , ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಕೆರೆ ಸಂರಕ್ಷಣಾ ಪ್ರಾಧಿಕಾರದ ಸದಸ್ಯ ಮಾನ್ಯ ಸಂದೀಪ್ ಸಾಲಿಯಾನ್ ಅವರ ನೇತೃತ್ವದಲ್ಲಿ ಐಲೇಸಾ ಝೂಮ್ ವೇದಿಕೆಯಲ್ಲಿ ನಡೆದ ಊರಿಗೊಂದು ಕೆರೆ ಕಾರ್ಯಕಮದಿಂದ ಪ್ರೇರಿತರಾದ ಸೌದಿ ಅರೇಬಿಯಾದಲ್ಲಿ ನೆಲೆಯಾಗಿರುವ ನರೇಂದ್ರ ಶೆಟ್ಟಿ ಮತ್ತು ಸುಮನಾ ಶೆಟ್ಟಿ ದಂಪತಿಗಳು ಕಾರ್ಯೋನ್ಮುಖರಾಗಿ ಉಡುಪಿ ಕಟಪಾಡಿ ಪಡು ಏಣಗುಡ್ಡೆಯ ಮಾಯಂದಾಲ್ ಕೆರೆಯನ್ನು ಗ್ರಾಮಸ್ಥರ ನೆರವಿನಿಂದ ಎರಡೇ ದಿನಗಳಲ್ಲಿ ಸ್ವಚ್ಛ ಗೊಳಿಸಿ ಆದರ್ಶಪ್ರಾಯರಾಗಿದ್ದಾರೆ.
ಈ ಕಾರ್ಯಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಮತಾ ಶೆಟ್ಟಿ ಮತ್ತು ಪಂಚಾಯತ್ ಅಧ್ಯಕ್ಷೆ ಇಂದಿರಾ ಎಸ್ ಆಚಾರ್ಯ ಇವರ ಸಂಪೂರ್ಣ ಸಹಕಾರ ದೊರೆತು ಗ್ರಾಮಸ್ಥರಾದ ಪ್ರಭಾಶೆಟ್ಟಿ, ಪ್ರಸೀನ್ ಪೂಜಾರಿ, ಉಮೇಶ್, ರಾಗಿಣಿ, ವಿಠ್ಠಲ ಪೂಜಾರಿ, ಲಕ್ಷ್ಮೀ ನಾರಾಯಣ, ಚೇತನ್, ಅಜಿತ್, ಭವಾನಿ ರಘು ಮತ್ತು ಹಿರಿಯರ ಸಹಕಾರದೊಂದಿಗೆ ಜೆಸಿಬಿ ಮತ್ತು ಶ್ರಮದಾನದಿಂದ ಈ ಕೆರೆ ಕಾಯಕಲ್ಪ ಸಾಧ್ಯವಾಯ್ತು.
ಈ ಕೆರೆಯ ಸಂರಕ್ಷಣೆ ಮತ್ತು ಇನ್ನಷ್ಟು ಕೆರೆಗೆಳ ಅಭಿವೃದ್ಧಿ , ಸ್ವಚ್ಛತೆಯ ಬಗ್ಗೆಯೂ ಗ್ರಾಮಸ್ಥರು ಪಣತೊಟ್ಟಿದ್ದಾರೆ. ನೀರಿನ ಬವಣೆಯನ್ನು ಈ ಬೇಸಗೆಯಲ್ಲಿ ಸ್ವತಃ ಅನುಭವಿಸಿದ್ದರಿಂದ ಮತ್ತು ನ್ಯಾಯಾಧೀಶ ಸಂದೀಪ್ ಸಾಲಿಯಾನ್ ಅವರ ಮಾತುಗಳಿಂದ ಹಾಗೆಯೇ ಖಲೀಫಾ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ದಿನೇಶ್ ಶೆಟ್ಟಿ ಇವರಿಂದ ಪ್ರೇರಿತನಾಗಿ ಈ ಕಾರ್ಯದಲ್ಲಿ ತಾನು ತೊಡಗಿಕೊಂಡೆ ಹಾಗೂ ಮುಂದಿನ ದಿನಗಳಲ್ಲಿ ಈ ಜಲಕ್ಷಾಮದ ಪರಿಣಾಮಗಳ ವಿರುದ್ಧ ಜಾಗ್ರತಿ ಮೂಡಿಸುವುದಕ್ಕಾಗಿ ಪ್ರತಿಯೊಬ್ಬರೂ ಜವಾಬ್ದಾರಿ ನಿರ್ವಹಿಸುವುದು ಅಗತ್ಯ ಎಂದು ಮನಗಂಡು ತಾನು ಈ ಕೆರೆ ಕಾಯಕಲ್ಪಕ್ಕೆ ಮನಸ್ಸು ಮಾಡಿದೆ ಎಂದು ಶ್ರೀ ನರೇಂದ್ರ ಶೆಟ್ಟಿಯವರು ತಿಳಿಸಿದರು .
ಐಲೇಸಾ ಸಂಸ್ಥೆ ಈ ಕಾರ್ಯದಲ್ಲಿ ತೊಡಗಿಸಿಕೊಂಡ ನರೇಂದ್ರ ಶೆಟ್ಟಿ ದಂಪತಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಎಲ್ಲಾ ಗ್ರಾಮಸ್ಥರಿಗೆ ಪ್ರಕೃತಿ ಮಾತೆ ಸನ್ಮ0ಗಲಗೈಯಲಿ ಎಂದು ಹಾರೈಸಿದೆ .