ರಾಯರ ತಪಃಪ್ರಭಾವಕ್ಕೆ ಒಳಗಾದವರು ಭಾಗ್ಯವಂತರು : ಡಾ| ರಾಮದಾಸ ಉಪಾಧ್ಯಾಯ
ಮುಂಬಯಿ (ಆರ್ಬಿಐ), ಸೆ.01: ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮತ್ತು ಶ್ರೀ ಪೇಜಾವರ ಮಠ ಮುಂಬಯಿ ವತಿಯಿಂದ ಗುರು ಸಾರ್ವಭೌಮ ಶ್ರೀರಾಘವೇಂದ್ರ ರಾಯರ 352ನೇ ಆರಾಧನಾ ಮಹೋತ್ಸವ ವನ್ನು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಆದೇಶ, ಅನುಗ್ರಹ ಮತ್ತು ಆಶೀರ್ವದಗಳೊಂದಿಗೆ ವೈಭವದಿಂದ ಆಚರಿಸಲಾಯಿತು.
ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿಯಲ್ಲಿನ ಮಧ್ವ ಭವನದ (ಪೇಜಾವರ ಮಠ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಇಂದಿಲ್ಲಿ ಶುಕ್ರವಾರ ರಾಯರ ಆರಾಧನೆ ನಡೆಸಲಾಗಿದ್ದು ಪೇಜಾವರ ಶಾಖೆಯ ಆಡಳಿತಾಧಿಕಾರಿ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಅವರು ರಾಘವೇಂದ್ರಶ್ರೀಗಳ ಸಮಾಜಕ್ಕೆ ಅವರ ತ್ಯಾಗ, ಭಕ್ತರ ಮೇಲಿನ ಕಾರುಣ್ಯ, ಕೊಡುಗೆ, ಅನುಗ್ರಹದ ಬಗ್ಗೆ ಉಪನ್ಯಾಸವನ್ನಿತ್ತು ಅರ್ವತ್ತರ ಹರೆಯದಲ್ಲಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ರಾಯರು ಮೂರು ಕೃತಿಗಳನ್ನು ರಚಿಸಿ ಶ್ರೀಕೃಷ್ಣನಿಗೆ ಅರ್ಪಿಸಿ ಚಂದ್ರಿಕಾ ಕೃತಿಯನ್ನು ದಶಕಾಲ ಪಠಿಸಿ ಮಂಗಲೋತ್ಸವ ನಡೆಸಿದ್ದರು. ಉಡುಪಿ ನೆಲೆ ಸ್ಮರಣಾರ್ಥ ಉಡುಪಿ ಕೃಷ್ಣನ ಚಿನ್ನದ ಪ್ರತಿಮೆಯೊಂದನ್ನು ತಾವೇ ಸಿದ್ಧಪಡಿಸಿ ಪೂಜಿಸಿ ಕೊಂಡೊಯ್ದರು ಹಾಗೂ ಇಂದು ಎನಗೆ ಗೋವಿಂದ? ಎಂಬ ದಾಸರ ಹಾಡನ್ನು ಉಡುಪಿಯಲ್ಲೇ ರಚಿಸಿದ್ದರು ಎಂದೇಳಲಾಗುತ್ತಿದೆ ಎಂದರು.
ರಾಯರ ತಪಃಪ್ರಭಾವಕ್ಕೆ ಒಳಗಾದ ಭಕ್ತರು ಭಾಗ್ಯವಂತರು. ಎಲ್ಲ ಧರ್ಮೀಯರಿಗೂ ಅನುಗ್ರಹ ಮಾಡಿದ್ದ ಯತಿಗಳು ಇವರಾಗಿದ್ದರು. ಇವರ ಅನೇಕ ಮಂತ್ರಗಳು ತುಂಬಾ ಶಕ್ತಿದಾಯಕವಾಗಿದ್ದು ಅವುಗಳ ಪಠಣದಿಂದ ಸಂಕಷ್ಟ ನಿವಾರಣೆ ಆಗುತ್ತದೆ ಎನ್ನಲಾಗುತ್ತಿದೆ. ಇನ್ನು ಈ ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು ದಿನವೂ ಪಠಿಸಲು ಆಗಲಿಲ್ಲ ಅಂದರೆ ರಾಯರ ವಿಶೇಷ ದಿನವಾದ ಗುರುವಾರ ಪಠಿಸಬಹುದು ಎಂದು ಡಾ| ರಾಮದಾಸ ಉಪಾಧ್ಯಾಯ ತಿಳಿಸಿದರು .
ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಅಧ್ಯಕ್ಷ ಎ.ಎಸ್ ರಾವ್, ಗೌರವ ಕಾರ್ಯದರ್ಶಿ ಬಿ.ಆರ್ ಗುರುಮೂರ್ತಿ, ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ ಮತ್ತಿತರ ಪದಾಧಿಕಾರಿಗಳು, ಸದಸ್ಯರು, ಶ್ರೀ ಪೇಜಾವರ ಮಠದ ವಿದ್ವಾನ್ ಹರಿ ಭಟ್ ಪುತ್ತಿಗೆ, ವಿದ್ವಾನ್ ಪ್ರಕಾಶ ಆಚಾರ್ಯ ರಾಮಕುಂಜ, ನಿರಂಜನ್ ಗೋಗ್ಟೆ ಹಾಗೂ ಇನ್ನಿತರ ಪುರೋಹಿತÀರು, ಕ್ರಿಕೆಟುಪಟು ಸುನೀಲ್ ಜೋಶಿ, ವಿಜಯ ಭಾರಧ್ವಾಜ್ ಮತ್ತಿತರ ಗಣ್ಯರು, ಉಪಸ್ಥಿತರಿದ್ದು, ಮಧ್ವೇಶ ಭಜನಾ ಮಂಡಳಿ ಸಾಂತಕ್ರೂಜ್ ಮತ್ತಿತರರು ಭಜನೆಗೈದರು.
ಆರಂಭದಲ್ಲಿ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿ ಬಳಿಕ ಭಕ್ತರನ್ನೊಳಗೊಂಡು ಪುರೋಹಿತÀರು ಶ್ರೀರಾಘವೇಂದ್ರ ರಾಯರನ್ನು ಆರಾಧಿಸಿದರು. ಪೂಜಾಧಿಗಳೊಂದಿಗೆ ಮಹಾ ಮಂಗಳಾರತಿ ನೆರವೇರಿಸಿ ನೆರೆದ ರಾಯರ ಭಕ್ತರಿಗೆ ಆಶೀರ್ವಚಿಸಿದರು.