ಸರ್ವೋತ್ಕೃಷ್ಟ ಸಮಾಜ ಸೇವಕ ಪ್ರಶಸ್ತಿ ಪ್ರದಾನಿಸಿದ ಮಾಜಿ ರಾಷ್ಟ್ರಪತಿ ಕೊವಿಂದ್
ಮುಂಬಯಿ (ಆರ್ಬಿಐ), ಸೆ.09: ಬಹರೈನ್ ಇಲ್ಲಿನ ಬಹರೈನ್ ಬಿಲ್ಲವಾಸ್, ಗುರುದೇವ ಸೋಶಿಯಲ್ ಸೊಸೈಟಿ ಹಾಗೂ ಶ್ರೀ ನಾರಾಯಣ ಕಲ್ಚರಲ್ ಸೊಸೈಟಿ ಜಂಟಿಯಾಗಿ ಆಯೋಜಿಸಿದ್ದ ಮೂರು ದಿನಗಳ ಗುರು ಜಯಂತಿ ಆಚರಣೆಯಲ್ಲಿ ಮುಖ್ಯ ಅತಿಥಿüಯಾಗಿ ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಪಾಲ್ಗೊಂಡಿದ್ದು ಬಹರೈನ್ನಲ್ಲಿನ ಪ್ರತಿಷ್ಠಿತ ಕನ್ನಡಿಗ ಉದ್ಯಮಿ, ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ನ ಅಧ್ಯಕ್ಷ ಹಾಜಿ ಅಬ್ದುಲ್ ರಝಕ್ ಹೆಜಮಾಡಿ ಅವರ ಸಾಮಾಜಿಕ ತುಡಿತ ಹಾಗೂ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಸರ್ವೋತ್ಕೃಷ್ಟ ಸಮಾಜ ಸೇವಕ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಕರ್ನಾಟಕ ಘನ ಸರಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸವಿತಾ ಕೊವಿಂದ್, ಬಹರೈನ್ನ ವಿದೇಶಿ ವ್ಯವಹಾರಗಳ ಸಚಿವಾಲಯದ ಅಧೀನ ಕಾರ್ಯದರ್ಶಿ ಡಾ| ಮೊಹಮ್ಮದ್ ಬಹಜದ್, ಸಾಮಾಜಿಕ ಅಭಿವೃದ್ಧಿ ಮಂತ್ರಾಲಯದ ಅಧೀನ ಕಾರ್ಯದರ್ಶಿ ಏನಾಸ್ ಅಲ್ ಮಜೀದ್, ಕೇರಳ ಶಿವಗಿರಿ ಮಠಾಧಿಪತಿ ಸ್ವಾಮೀ ಸಚ್ಚಿದಾನಂದ, ಕಾರ್ಯದರ್ಶಿ ಸ್ವಾಮಿ ಸುಭಗಾನಂದ, ಖ್ಯಾತ ಸಿನೇಮ ತಾರೆ ನವ್ಯಾ ನಾಯರ್, ಇಂಡಿಯನ್ ಸ್ಕೂಲ್ನ ಕಾರ್ಯಾಧ್ಯಕ್ಷ ಪ್ರಿನ್ಸ್ ನಟರಾಜನ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕಳೆದ ಸುಮಾರು ನಾಲ್ಕೂವರೆ ದಶಕಗಳಿಂದ ದ್ವೀಪ ರಾಷ್ಟ್ರವನ್ನು ತನ್ನ ಕರ್ಮಭೂಮಿಯನ್ನಾಗಿಸಿಕೊಂಡು ಬಹರೈನ್ನಲ್ಲಿ ನೆಲೆಸಿರುವ ಹಾಜಿ ಅಬ್ದುಲ್ ರಜಾಕ್ ಪ್ರಮುಖ ಭಾರತೀಯ ಉದ್ಯಮಿಗಳಲ್ಲಿ ಒಬ್ಬರಾಗಿ ಗುರುತಿಸಿ ಕೊಂಡಿದ್ದು ಮಾತ್ರವಲ್ಲದೆ ತಮ್ಮ ಸಮಾಜಸೇವೆಯಿಂದಾಗಿ, ಸಾಮಾಜಿಕ ಕಳ ಕಳಿಯಿಂದಾಗಿ ಇಲ್ಲಿನ ಕನ್ನಡಿಗರ ಸಮುದಾಯದಲ್ಲಿ ಜನಪ್ರಿಯರಾಗಿದ್ದಾರೆ. ಮೆಟಲ್ಕೋ ಸಮೂಹ ಸಂಸ್ಥೆಯನ್ನು ಹುಟ್ಟುಹಾಕಿ ಅನೇಕರಿಗೆ ಉದ್ಯೋಗವಕಾಶವನ್ನು ಕಲ್ಪಿಸಿದ್ದು ಮಾತ್ರವಲ್ಲದೆ ಉದ್ಯಮವನ್ನು ಸೌದಿ ಅರೇಬಿಯಾ, ದುಬೈ ದೇಶಗಳಿಗೆ ವಿಸ್ತರಿಸುವುದರ ಜೊತೆಜೊತೆಗೆ ತಮ್ಮ ಹ್ರದಯವೈಶಾಲ್ಯತೆಯನ್ನೂ ಕೂಡ ವಿಸ್ತರಿಸ್ಕೊಂಡಿದ್ದಾರೆ. ಸುಮಾರು ಮೂರು ದಶಕಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯದವರ ನೋವು ನಲಿವುಗಳಿಗೆ ಸ್ಪಂದಿಸಲಿಕ್ಕಾಗಿಯೇ "ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್" ಎನ್ನುವ ಸಂಘಟನೆಯನ್ನು ದ್ವೀಪದಲ್ಲಿ ಹುಟ್ಟುಹಾಕಿ ಅಂದಿನಿಂದ ಇಂದಿನವರೆಗೂ ಸಂಘಟನೆಯ ಅಧ್ಯಕ್ಷರಾಗಿ ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಅವರ ಸಾಮಾಜಿಕ ಕಳಕಳಿ, ದಕ್ಷ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ . ತಮ್ಮ ಈ ಸಂಘಟನೆಯ ಮುಖೇನ ಬಡ ಹೆಣ್ಣು ಮಕ್ಕಳ ಮದುವೆ, ಶಿಕ್ಷಣ, ವೈದ್ಯಕೀಯ ವೆಚ್ಚಗಳಿಗೆ ಅಆರ್ಥಿಕ ಸಹಾಯವನ್ನು ನೀಡುತ್ತಾ ಬಂದಿದ್ದಾರೆ . ಈ ಸಂಘಟನೆಯು ಕಳೆದ 25 ವರುಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ 100 ಬಡ ಕುಟುಂಬಗಳಿಗೆ ನಿರಂತರವಾಗಿ ರೇಷನ್ ನೀಡುತ್ತಿದ್ದು ಫಲಾನುಭವಿಗಳಲ್ಲಿ ಮುಸ್ಲಿಮೇತರ ಕುಟುಂಬಗಳೂ ಇರುವದು ಇಲ್ಲಿ ಉಲ್ಲೇಖನೀಯ.
ಕೋವಿಡ್ ಮಹಾಮಾರಿಯ ಸಂಧರ್ಭದಲ್ಲೂ ನಾಡಿನ ಜನರಿಗೆ 2000ಕ್ಕೂ ಹೀಚು ಆಹಾರದ ಕಿಟ್ ಗಳನ್ನೂ ಈ ಸಂಘಟನೆಯು ವಿತರಿಸಿದೆ. ದ್ವೀಪದಲ್ಲಿ ಜರುಗುವ ಹೆಚ್ಚಿನ ಕನ್ನಡ ,ತುಳು ಸಾಂಸ್ಕೃತಿಕ ಚಟುವಟಿಕೆಗಳಿಗೆ ನಿರಂತರವಾಗಿ ಪ್ರಾಯೋಜಕತ್ವವನ್ನು ನೀಡುತ್ತಾ ಬಂದಿರುವ ಅಬ್ದುಲ್ ರಜಾಕ್ ಅವರು ಇಲ್ಲಿ ಕನ್ನಡ, ತುಳು ಕಲೆ, ಭಾಷೆ, ಸಂಸ್ಕೃತಿಗಳ ಬೆಳವಣಿಗೆಗೆ ಅಪಾರ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಇಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕನ್ನಡ ಭವನಕ್ಕೂ ದೊಡ್ಡ ಮೊತ್ತದ ಆಥಿರ್üಕ ಸಹಾಯವನ್ನು ನೀಡಿದ್ದಾರೆ . ಸಮಾಜಕ್ಕೆ ಅವರು ನೀಡಿರುವ ಕೊಡುಗೆ, ಅವರ ಸಾಮಾಜಿಕ ತುಡಿತ, ಸಾಮಾಜಿಕ ಪ್ರಜ್ಞೆಯನ್ನು ಪರಿಗಣಿಸಿ ಮಾಜಿ ರಾಷ್ಟ್ರಪತಿಗಳಾದ ರಾಮನಾಥ್ ಕೊವಿಂದ್ ಅವರು ಪ್ರತಿಷ್ಠಿತ ಪ್ರಶಸ್ತಿಯಿಂದ ಪುರಸ್ಕರಿಸುವುದು ಬಹರೈನ್ನ ತುಳುವ, ಕನ್ನಡಿಗ ಸಮುದಾಯದಲ್ಲಿ ಹರ್ಷವನ್ನುಂಟುಮಾಡಿದೆ .