ಮೂಡುಬಿದಿರೆ ತಾಲೂಕಿನ ದರೆಗುಡ್ಡೆಯ ಸರಕಾರಿ ಪ್ರೌಢಶಾಲೆಯಲ್ಲಿ ಗ್ರಾಹಕ ಮಾಹಿತಿ ಕಾರ್ಯಕ್ರಮ ಅಕ್ಟೋಬರ್ 7ರಂದು ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವೇದಿಕೆಯ ಅಧ್ಯಕ್ಷ, ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ ಮೂಡುಬಿದಿರೆಯವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಅವರು ತಮ್ಮ ಮಾಹಿತಿ ಕಾರ್ಯಕ್ರಮದಲ್ಲಿ ದೈನಂದಿನ ವಸ್ತುಗಳನ್ನು ಕೊಳ್ಳುವಾಗ ಗ್ರಾಹಕರು ವಹಿಸಬೇಕಾದ ಜಾಗರೂಕತೆ, ರಾಷ್ಟ್ರೀಯ ಗ್ರಾಹಕ ಹಿತ ರಕ್ಷಣಾ ಕಾಯಿದೆಯ ಪ್ರಮುಖ ಅಂಶಗಳು, ಗ್ರಾಹಕ ರಕ್ಷಣೆ, ಕಾನೂನಿನ ಬಲ, ಜಿಲ್ಲೆ, ರಾಜ್ಯ, ರಾಷ್ಟ್ರ ಫೋರಂ ಗಳಿಂದ ದೊರಕುವ ಸೌಲಭ್ಯಗಳು, ಗ್ರಾಹಕ ಅತಿ ಅಗತ್ಯವಾಗಿ ನಿರ್ವಹಿಸಬೇಕಿರುವ ದಾಖಲೆಗಳ ಪ್ರಾಧಾನ್ಯತೆಯನ್ನು ಹಲವಾರು ಸ್ವಂತ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರಿಗೆ ಮನವರಿಕೆ ಮಾಡಿಕೊಟ್ಟರು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಶಿಕ್ಷಣಕ್ಕೆ ಇರುವ ಪ್ರಾಧಾನ್ಯತೆ ಹಾಗೂ ಲಾಭಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟು ಪೋಷಕರಿಗೂ ತಿಳಿಸುವಂತೆ ಹೇಳಿದರು.
ಶಿಕ್ಷಕರಾದ ಶ್ರೀಮತಿ ಅನ್ನಪೂರ್ಣೇಶ್ವರಿ, ಶ್ರೀಮತಿ ಮೀರಾ ಡಯಾಸ್, ಶ್ರೀಮತಿ ವಿಲ್ಮಾ, ಇಸ್ಮಾಯಿಲ್, ಶಿವರಾಜ್ ಹಾಗೂ ರಮೇಶ ರವರು ಕಾರ್ಯಕ್ರಮವನ್ನು ಸಂಘಟಿಸಿದ್ದರು. ಶಿಕ್ಷಕ ಅರುಣ್ ರವರು ಸ್ವಾಗತಿಸಿ ವಂದಿಸಿದರು.