ಮುಂಬಯಿ, ಜ.20-ಮುಂಬಯಿ ಉಪನಗರದ ಡೊಂಬಿವಲಿ ಠಾಕೂರ್ವಾಡಿ ನಿವಾಸಿ, ಸಯನ್ ಜಿಎಸ್ಬಿ ಸೇವಾ ಮಂಡಳ ಹಾಗೂ ಜನಪ್ರಿಯ ಯಕ್ಷಗಾನ ಮಂಡಲ ಕುರ್ಲಾ ಇದರ ಹಿರಿಯ ಸದಸ್ಯ ಕೂಳೂರು ಅನಂತರಾಯ ನಾಯಕ್ (79.) ಕಳೆದ ಗುರುವಾರ (ಜ.18) ಡೊಂಬಿವಲಿಯ ತನ್ನ ಸ್ವಗೃಹದಲ್ಲಿ ವಯೋಸಹಜತಾ ಅಸೌಖ್ಯದಿಂದ ನಿಧನರಾದರು.
ಮಂಗಳೂರು ಕೂಳೂರು ಮೂಲತಃರಾಗಿದ್ದು ತವರೂರಲ್ಲಿ ವಿದ್ಯಾಭ್ಯಾಸ ಪೂರೈಸಿ ಮುಂಬಯಿಗೆ ಆಗಮಿಸಿದ್ದ ಅವರು ಸೇವಾಕಾರ್ಯಗಳ ಕೆಲಸ ಮಾಡುತ್ತಾ ಡೊಂಬಿವಲಿಯಲ್ಲಿ ನೆಲೆಸಿದ್ದರು. ಮಾಟುಂಗಾ ಕಿಂಗ್ಸ್ ಸರ್ಕಲ್ನಲ್ಲಿ ನಡೆಯುತ್ತಿರುವ ಜಿಎಸ್ಬಿ ಸೇವಾ ಮಂಡಲದ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು ಮಾಧ್ಯಮದ ಸಹಾಯಕರಾಗಿದ್ದು, ಹವ್ಯಾಸಿ ಯಕ್ಷಗಾನ ಕಲಾವಿದರಾಗಿ, ಲೇಖಕರಾಗಿ, ಪತ್ರಕರ್ತರಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಅನಂತರಾಯ ನಾಯಕ್ ಅವರ ನಿಧನಕ್ಕೆ ಮಾಟುಂಗಾ ಶ್ರೀಕೃಷ್ಣ ಬೋರ್ಡಿಂಗ್ ರಾಮನಾಯಕ್ ಹೊಟೇಲಿನ ಸತೀಶ್ ಆರ್. ನಾಯಕ್ ಪರಿವಾರ, ಜಿಎಸ್ಬಿ ಸೇವಾ ಮಂಡಲ, ಜನಪ್ರಿಯ ಯಕ್ಷಗಾನ ಮಂಡಳಿ, ಜಿಎಸ್ಬಿ ಸಮಾಜ ಬಾಂಧವರು ಹಾಗೂ ಅವರ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.