ವರ್ಷಾಂತ್ಯದೊಳಗೆ ಕೊಂಕಣಿ ಭವನ ಸಮರ್ಪಿಸಲಾಗುವುದು
ಮುಂಬಯಿ (ಆರ್ಬಿಐ), ಜೂ.18: ಕರ್ನಾಟಕ ಸರಕಾರದಿಂದ ಇತ್ತೀಚೆಗೆ ನೇಮಕಗೊಂಡಿರುವ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಹನ್ನೊಂದನೇ ಅಧ್ಯಕ್ಷರಾಗಿ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇಂದಿಲ್ಲಿ ಅಧಿಕಾರ ವಹಿಸಿಕೊಂಡರು.
ಮಂಗಳೂರು ಮಹಾನಗರ ಪಾಲಿಕೆಯಲ್ಲಿನ ಅಕಾಡೆಮಿ ಹೊರಾಂಗಣದಲ್ಲಿ ನಡೆಸಲ್ಪಟ್ಟ ಸರಳ ಪದಗ್ರಹಣ ಸಮಾರಂಭದಲ್ಲಿ ಅತಿಥಿü ಅಭ್ಯಾಗತರುಗಳಾಗಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ಅಕಾಡೆಮಿ ಮಾಜಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಅವರು ನೂತನ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅವರಿಗೆ ಕೃಷಿ ಉಪಕರಣ ನೊಗ ನೀಡಿ ಸಾಂಕೇತಿಕವಾಗಿ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.
ಆಲ್ವಾರಿಸ್ ಮಾತನಾಡಿ ಕಳೆದ 35 ವರ್ಷಗಳ ಕೊಂಕಣಿ ಸೇವೆಯನ್ನು ಗುರುತಿಸಿ ಸರಕಾರ ಜವಾಬ್ದಾರಿ ನೀಡಿದೆ. ಹಿಂದಿನ ಅಧ್ಯಕ್ಷರುಗಳ ಅವಧಿಯಲ್ಲಿ ಹಲವು ಕೆಲಸಗಳಾಗಿವೆ. ನಮ್ಮ ಸಮಿತಿ ಮುಂದೆ ಅರ್ಧದಲ್ಲಿ ನಿಂತ ಕೊಂಕಣಿ ಭವನ ಸಂಪೂರ್ಣಗೊಳಿಸುವ ಜವಾಬ್ದಾರಿಯಿದೆ. ಇನ್ನೂ ಮೂರು ಕೋಟಿ ಅನುದಾನದ ಅಗತ್ಯವಿದೆ. ವರ್ಷಾಂತ್ಯದೊಳಗೆ ಸಂಪೂರ್ಣಗೊಳಿಸಿ ಕೊಂಕಣಿ ಜನರಿಗೆ ಸಮರ್ಪಿಸಲಾಗುವುದು. ಇನ್ನುಳಿದಂತೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಕಾರಗಳಲ್ಲಿ ಸಂಶೋಧನೆಗಳಿಗೆ ಪ್ರಾತಿನಿಧ್ಯ ನೀಡಿ, ಭಾಷಾ ಸಂಬಂಧಿ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು. ಎಲ್ಲರ ಸಹಕಾರ ಅತ್ಯವಶ್ಯಕ ಎಂದರು.
ಅಕಾಡೆಮಿಯ ಪ್ರಭಾರ ರಿಜಿಸ್ಟ್ರಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ. ಇವರು ನೂತನ ಸದಸ್ಯರುಗಳಾದ ರೆ| ಫಾ| ಪ್ರಶಾಂತ್ ಮಾಡ್ತಾ ಬೆಂಗಳೂರು, ರೊನಾಲ್ಡ್ ಕ್ರಾಸ್ತಾ, ನವೀನ್ ಲೋಬೊ, ಸಪ್ನಾ ಮೇ ಕ್ರಾಸ್ತಾ, ಸಮರ್ಥ ಭಟ್, ಸುನೀಲ್ ಸಿದ್ಧಿ ಯಲ್ಲಾಪುರ, ಜೇಮ್ಸ್ ಲೋಪಿಸ್ ಹೊನ್ನಾವರ, ದಯಾನಂದ ಮಡ್ಕೇಕರ್ ಕಾರ್ಕಳ ಹಾಗೂ ಪ್ರಮೋದ್ ಪಿಂಟೊ ಚಿಕ್ಕಮಗಳೂರು ಇವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿ ಶುಭಾರೈಸಿದರು.
ಮಾಜಿ ಸಚಿವ ರಮಾನಾಥ ರೈ, ಮನಪಾ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವಾ, ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ.ಪಿಂಟೊ, ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಅಧ್ಯಕ್ಷ ವಸಂತ ರಾವ್, ನ್ಯಾಯವಾದಿ ಆಲ್ವಿನ್ ಪಿ.ಮೊಂತೇರೊ ಸೇರಿದಂತೆ ಅನೇಕ ಸಾಹಿತಿ ಲೇಖಕರು, ಧುರೀಣರು ಉಪಸ್ಥಿತರಿದ್ದರು. ವಿತೋರಿ ಕಾರ್ಕಳ್ (ವಿಕ್ಟರ್ ಮತಾಯಸ್) ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಜಿ. ಧನ್ಯವದಿಸಿದರು.