ಮಂಗಳೂರು: ಕೇಂದ್ರ ಸರಕಾರ ನೋಟುಗಳನ್ನು ರದ್ದುಪಡಿಸಿರುವುದರಿಂದ ಉಂಟಾದ ಆರ್ಥಿಕ ಬಿಕ್ಕಟ್ಟು ಜನಸಾಮಾನ್ಯರನ್ನು ತೀವ್ರವಾಗಿ ಬಾಧಿಸುತ್ತಿದೆ. ಹಬ್ಬ ಹಾಗೂ ಹೊಸ ವರ್ಷದ ಸಡಗರದಲ್ಲಿರುವ ಈ ಸಂದರ್ಭದಲ್ಲಿ ಹಣದ ಮೇಲೆ ನಿರ್ಬಂಧ ವಿಧಿಸಿರುವುದು ಸರಿಯಲ್ಲ. ಹೀಗಾಗಿ ತತ್ಕ್ಷಣದಿಂದ ಅದನ್ನು ಹಿಂಪಡೆಯಬೇಕು ಎಂದು ವಿ.ಪರಿಷತ್ ಮುಖ್ಯಸಚೇತಕ ಐವನ್ ಡಿ'ಸೋಜಾ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಬಡವರು, ಬ್ಯಾಂಕ್ ಖಾತೆ ಇಲ್ಲದವರು ಈಗ ಎಲ್ಲಿಗೆ ಹೋಗಬೇಕು ? ತಮ್ಮ ಹಣವನ್ನೇ ತೆಗೆಯಲು ಮಿತಿ ಹಾಕಿದರ ಹಿಂದೆ ಯಾರ ಹಿತಾಸಕ್ತಿ ಅಡಗಿದೆ ಎಂಬ ಪ್ರಶ್ನೆ ಎದುರಾಗಿದೆ ಎಂದರು. ರೈತರು ತಮ್ಮ ಬೆಳೆಯನ್ನು ಮಾರದಂತಹ ಸ್ಥಿತಿ ಇದೆ. ಕ್ಯಾಶ್ಲೆಸ್ ವ್ಯವಹಾರ ನಡೆಸಿ ಎನ್ನುತ್ತಿದ್ದಾರೆ.
ಆದರೆ ಎಷ್ಟು ಜನರಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ಇದೆ ಎಂಬುದರ ಬಗ್ಗೆ ಸರ್ವೆ ನಡೆಸಿ. ಎಲ್ಲ ಸಿದ್ಧತೆ ಮಾಡುವುದಕ್ಕಿಂತ ಮೊದಲೇ ನಿಮ್ಮಷ್ಟಕ್ಕೆ ನೀವು ನಿಯಮಾವಳಿಗಳನ್ನು ರೂಪಿಸಿದರೆ ಜನಸಾಮಾನ್ಯರು ಇದಕ್ಕೆ ಹೇಗೆ ಒಗ್ಗಿಕೊಳ್ಳಬೇಕು ಎಂದವರು ಪ್ರಶ್ನಿಸಿದರು.