Mumbai(ಆರ್ಬಿಐ), ಜ.23: ಮಹಾರಾಷ್ಟ್ರ ರಾಜ್ಯ ಶಾಸನದ ಅಧೀನತ್ವದ ಬೃಹನ್ಮುಂಬಯಿಯಲ್ಲಿನ ದಾದರ್ ಪಶ್ಚಿಮ ಪ್ರಭಾದೇವಿ ಇಲ್ಲಿನ ವಿಶ್ವಪ್ರಸಿದ್ಧ ದೇವಾಲಯ ಶ್ರೀ ಸಿದ್ಧಿವಿನಾಯಕ ಮಂದಿರ ಇದರ ವ್ಯವಸ್ಥಾಪಕ ಸಮಿತಿಗೆ ವಿಶ್ವಸ್ಥ ಸದಸ್ಯ (ಟ್ರಸ್ಟಿ) ಆಗಿ ಮಹಾನಗರದಲ್ಲಿನ ಹೆಸರಾಂತ ಉದ್ಯಮಿ, ಧಾರ್ಮಿಕ ಮುಂದಾಳು ಭಾಸ್ಕರ್ ಆರ್.ಶೆಟ್ಟಿ ಇನ್ನ ಇವರನ್ನು ಸರಕಾರ ನಿಯುಕ್ತಿ ಗೊಳಿಸಿದೆ.
ಮಂದಿರದ ವ್ಯವಸ್ಥಾಪಕ ಸಮಿತಿಗೆ ಮುಂದಿನ ಮೂರು ವರ್ಷಗಳ ಕಾಲಾವಧಿಗೆ ನೂತನ ಸಮಿತಿ ಮಹಾ ಸರಕಾರವು ಸದಸ್ಯರ ನಿಯುಕ್ತಿ ನಡೆಸಿದ್ದು, ಅಶೋಕ್ ಚಂದ್ರಕಾಂತ್ ಬಾಂದೇಕರ್ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಸಂಜಯ್ ಹರೀಶ್ಚಂದ್ರ ಸಾವಂತ್ ಅವರನ್ನು ಕೋಶಾಧಿಕಾರಿಯನ್ನಾಗಿಸಿ ಒಟ್ಟು ಹನ್ನೊಂದು ಸದಸ್ಯರನ್ನು ನೇಮಕ ಗೊಳಿಸಿದ್ದು ಆ ಪಯ್ಕಿ ತುಳು ಕನ್ನಡಿಗರಲ್ಲಿ ಭಾಸ್ಕರ್ ಶೆಟ್ಟಿ ಓರ್ವರಾಗಿದ್ದಾರೆ.
ಈ ಶುಭಾವಸರದಲ್ಲಿ ತವರೂರ ಬಂಧುಮಿತ್ರರಾದ ಜಯರಾಮ ಶೆಟ್ಟಿ ಇನ್ನ, ಸಿಮಂತೂರು ಚಂದ್ರಹಾಸ ಶೆಟ್ಟಿ ಮಾಟುಂಗಾ, ಲತೀಶ್ ಶೆಟ್ಟಿ ದಾದರ್, ಪಿ.ಧನಂಜಯ ಶೆಟ್ಟಿ ಸಯಾನ್, ಹರೀಶ್ ಕೊಟ್ಟಾರಿ ಸಯಾನ್ ಮತ್ತಿತರ ಗಣ್ಯರು ಭಾಸ್ಕರ್ ರಾಮ ಶೆಟ್ಟಿ ಅವರನ್ನು ಭೇಟಿಗೈದು ಪುಷ್ಫಗುಪ್ಛವನ್ನಿತ್ತು ಶುಭಾರೈಸಿದರು.
ಕಾರ್ಕಳ ತಾಲೂಕು ಇನ್ನ ಗ್ರಾಮದ ಬಡಗರಗುತ್ತು ಮನೆತನದ ಭಾಸ್ಕರ್ ಶೆಟ್ಟಿ ಅವರು ರಾಜಕೀಯ ಪಕ್ಷಗಳಲ್ಲಿ ಸಕ್ರೀಯರಾಗಿ ತೊಡಗಿಸಿ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಇದರ ಧಾರಾವಿ ವಾರ್ಡ್ನ ನಗರ ಸೇವಕರಾಗಿದ್ದವರು. ಸಯಾನ್ ಧಾರಾವಿಯಲ್ಲಿ ಎವರೆಸ್ಟ್ ಹೊಟೇಲು ಸಹಿತ ಇತರ ಹೊಟೇಲುಗಳನ್ನು ಹೊಂದಿರುವ ಇವರು ಎವರೆಸ್ಟ್ ಭಾಸ್ಕರಣ್ಣ ಎಂದೇ ಪ್ರಸಿದ್ಧರು. ಈ ಹಿಂದೆ ಆಹಾರ್ ಸಂಸ್ಥೆಯ ಉಪಾಧ್ಯಕ್ಷರಾಗಿಯೂ ದುಡಿದಿದ್ದರು.