ಮಂದಿರ ನಿಧಿಸಂಗ್ರಹ ಅಭಿಯಾನ ನಮ್ಮ ಅಭಿಮಾನ-ಗೋಪಾಲ ಸಿ.ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.28: ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀರಾಮ ಮಂದಿರಕ್ಕೆ ರಾಷ್ಟ್ರವ್ಯಾಪಿ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಶ್ರೀರಾಮ ಮಂದಿರದ ನಿಧಿಸಂಗ್ರಹದ ಅಭಿಯಾನ ನಮ್ಮ ಅಭಿಮಾನ. ಇದಕ್ಕಾಗಿ ತನ್ನ ಸಾರಥ್ಯದಲ್ಲೂ ಕನಿಷ್ಠ ಅರ್ಧ ಕೋಟಿ (ರೂಪಾಯಿ 50 ಲಕ್ಷ) ದೇಣಿಗೆ ಸಂಗ್ರಹಿಸಲು ಗುರಿಯನ್ನು ಇಟ್ಟು ಕೊಂಡಿದ್ದಾರೆ. ತನ್ನ ಕ್ಷೇತ್ರದಲ್ಲಿನ ರಾಷ್ಟ್ರಪ್ರೇಮಿಗಳು ಮತ್ತು ಧಾರ್ಮಿಕ ಹಿತೈಷಿಗಳ ಸಹಯೋಗದಿಂದ ಈ ತನಕ ಸುಮಾರು 30 ಲಕ್ಷ ರೂಪಾಯಿ ದೇಣಿಗೆಯನ್ನು ಸಂಗ್ರಹಿಸಲಾಗಿದ್ದು ಇನ್ನೂ ಸುಮಾರು 30 ಲಕ್ಷ ರೂಪಾಯಿ ಒಟ್ಟುಗೂಡಿಸುವ ಆಶಯ ಇರಿಸಲಾಗಿದೆ ಎಂದು ಭಾರತ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸರ್ವೋತ್ಕೃಷ್ಟ ಸಂಸದ ಮಾನ್ಯತೆಗೆ ಪಾತ್ರರಾದ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ತಿಳಿಸಿದರು.
ಮಂದಿರಕ್ಕೆ ಬೇಕಾಗುವಂತಹ ನಿಧಿ ಸಂಗ್ರಹ ಅಭಿಯಾನ ರಾಷ್ಟ್ರವ್ಯಾಪಿ ನಡೆಯುತ್ತಿದ್ದು ಆ ಮೂಲಕ ಎಲ್ಲಾ ರಾಮಭಕ್ತರ ಮಂದಿರವಾಗಿ ರೂಪುಗೊಳ್ಳಲಿದೆ. ಆದ್ದರಿಂದ ಮಂದಿರದ ಒಂದು ಕಲ್ಲಿನ ಸೇವೆಯಾಗಿ ಆದರೂ ಪ್ರತೀಯೊಬ್ಬ ರಾಮಭಕ್ತ ದೇಣಿಗೆ ನೀಡಿ ಶ್ರೀರಾಮ ಕೃಪೆಗೆ ಪಾತ್ರರಾಗುವ ಭರವಸೆ ನಮಗಿದೆ.
ಕಳೆದ ಮಕರ ಸಂಕ್ರಾತಿಯಿಂದ ಮೊದಲ್ಗೊಂಡು ಸುಮಾರು ನಲ್ವತ್ತೈದು ದಿವಸಗಳ ಒಳಗೆ ನಿಧಿಸಂಗ್ರಹ ನಡೆಯಲಿದೆ. ಟ್ರಸ್ಟ್ನ ಆಶಯದಂತೆ ಭಾರತೀಯ ಪ್ರತಿಯೊಬ್ಬ ರಾಮಭಕ್ತನೂ ಕೂಡಾ ಕನಿಷ್ಠ ಹತ್ತು ರೂಪಾಯಿ ಮತ್ತು ಮನೆಯೊಂದರಂತೆ ಕನಿಷ್ಠ ನೂರು ರೂಪಾಯಿಯನ್ನಾದರೂ ನೀಡಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪಾತ್ರರಾಗಬೇಕು ಅನ್ನುವುದೇ ನಮ್ಮ ಅಪೇಕ್ಷೆ ಎಂದು ಗೋಪಾಲ ಶೆಟ್ಟಿ ತಿಳಿಸಿದರು.
ಇದೀಗಲೇ ಶ್ರೀ ಗೋಪಾಲ್ ಸಿ.ಶೆಟ್ಟಿ (ಸಂಸದ) ತುಳು-ಕನ್ನಡಿಗರ ಅಭಿಮಾನಿ ಬಳಗದ ಮುಖ್ಯಸ್ಥ, ಬೃಹನ್ಮುಂಬಯಿ ಯ ಹೆಸರಾಂತ ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ ನೇತೃತ್ವದಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ನೂತನ ಯೋಜನಾ ಸಮಿತಿ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್.ಪಯ್ಯಡೆ, ರವೀಂದ್ರ ಎಸ್.ಶೆಟ್ಟಿ, ಡಾ| ಪಿ.ವಿ ಶೆಟ್ಟಿ, ಗೌರವ್ ಪಯ್ಯಡೆ, ದೇವರಾಜ್ ಶೆಟ್ಟಿ ಅಂತೆಯೇ ಸತೀಶ್ ಶೆಟ್ಟಿ, ಗಂಗಾಧರ್ ಶೆಟ್ಟಿ ಮತ್ತು ಪ್ರಮೋದ್ ಕಾಮತ್ ಇವರುಗಳು ತಮ್ಮ ದೇಣಿಗೆಯನ್ನು ಸಂಸದ ಗೋಪಾಲ ಶೆಟ್ಟಿ ಅವರಿಗೆ ಹಸ್ತಾಂತರಿಸಿದ್ದು. ರಾಮ ಜನ್ಮಭೂಮಿಯಲ್ಲಿನ ರಾಮ ಮಂದಿರ ನಿರ್ಮಾಣಕ್ಕೆ ದಾನಿಗಳು ನೀಡಲಿಪ್ಛಿಸಿದ್ದಲ್ಲಿ ತಮ್ಮೆಲ್ಲರ ನೆಚ್ಚಿನ ಸಂಸದ ಗೋಪಾಲ ಶೆಟ್ಟಿ ಮುಖೇನ ಹಸ್ತಾಂತರಿಸ ಬಹುದು. ಚೆಕ್ ಕೊಡಲು ಇಚ್ಛಿಸುವವರು ತನ್ನನ್ನು ಸಂಪರ್ಕಿಸಿದ್ದಲ್ಲಿ ಗೋಪಾಲ ಶೆಟ್ಟಿ ಅವರಿಗೆ ಹಸ್ತಾಂತರಿಸಬಹುದು ಎಂದು ಎರ್ಮಾಳ್ ಹರೀಶ್ ಈ ಮೂಲಕ ತುಳು ಕನ್ನಡಿಗರು ಮತ್ತು ತಮ್ಮ ಸಂಘ ಸಂಸ್ಥೆಗಳ ಮುಖ್ಯಸ್ಥರಲ್ಲಿ ವಿನಂತಿಸಿದ್ದಾರೆ.
ಶ್ರೀ ರಾಮ ದೇವಾಲಯ ನಿರ್ಮಾಣದ ಶ್ರೀರಾಮ ಭಕ್ತರ ಸಾವಿರಾರು ವರ್ಷಗಳ ಕನಸು ಶೀಘ್ರದಲ್ಲೇ ನನಸಾಗಲಿದ್ದು ಇದರ ದೇಣಿಗೆ ಸಂಗ್ರಹದಲ್ಲೂ ಬಹಳ ಒಳ್ಳೆಯ ಪ್ರತಿಕ್ರಿಯೆ ಲಭಿಸುತ್ತಿದೆ. ಈ ತನಕ ಸಂಗ್ರಹಿಸಿದ (ರೂಪಾಯಿ 30 ಲಕ್ಷ) ಚೆಕ್ಗಳನ್ನು ಸಂಸದರಿಗೆ ಹಸ್ತಾಂತರಿಸಿದ್ದೇವೆ. ನಾವು ಸಂಸದರ ಆಶಯದ ಟಾರ್ಗೆಟ್ನ್ನು ಶೀಘ್ರವಾಗಿ ಪೂರೈಸಲಿದ್ದೇವೆ. ಬಾಕಿ ಮೊತ್ತವನ್ನು ಮುಂದಿನ ಶನಿವಾರ (ಜ.30) ಒಳಗಾಗಿ ಸಂಗ್ರಹಿಸಲಾಗುವುದು ಮತ್ತು ಅದನ್ನು ಮತ್ತೊಮ್ಮೆ ಸಂಸದರಿಗೆ ಹಸ್ತಾಂತರಿಸಿ ಶ್ರೀ ರಾಮ ದೇವರ ಋಣ ಪೂರೈಸಲಿದ್ದೇವೆ. ಇದೀಗಲೇ ಈ ದೈವಿಕ ಉದ್ದೇಶಕ್ಕಾಗಿ ಉದಾರವಾಗಿ ದೇಣಿಗೆ ನೀಡಿದ ಉತ್ತರ ಮುಂಬಯಿ ಕ್ಷೇತ್ರದ ಎಲ್ಲಾ ಹೋಟೆಲಿಗರಿಗೆ, ಮತ್ತು ಕೊಡುಗೈ ದಾನಿಗಳಿಗೆ ನಮ್ಮ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇವೆ.
ಮಂದಿರ ನಿರ್ಮಾಣ ಟ್ರಸ್ಟ್ನ ನಿಮಗಳಂತೆ ಮಂದಿರದ ನವೀಕರಣ ಯಾ ದುರಸ್ತಿ ಉದ್ದೇಶಕ್ಕಾಗಿ 50% ಸ್ವಯಂಪ್ರೇರಿತ ಕೊಡುಗೆ, ಶ್ರೀ ರಾಮ್ ಜನ್ಮಭೂಮಿ ತೀರ್ಥ್ ಕ್ಷೇತ್ರ ಇದರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಜಿ ಅಡಿಯಲ್ಲಿ ಉಲ್ಲೇಖಿಸಲಾದ ಇತರ ಷರತ್ತುಗಳಿಗೆ ಒಳಪಟ್ಟು ಸೆಕೆಂಡ್ 80ಈ(2) (ಬಿ) ಅಡಿಯಲ್ಲಿ ಕಡಿತಕ್ಕೆ ಅರ್ಹರಾಗಿರುತ್ತಾರೆ.
1961ರಂತೆ (ಸಿಬಿಡಿಟಿ ಅಧಿಸೂಚನೆ ಸಂಖ್ಯೆ 24/ 2020 / ಎಫ್.ನಂ.176/ 8/ 2017 / ಐಟಿಎ-ಐ).ರೂಪಾಯಿ 2,000/- ಅನ್ನು ಕಡಿತವಾಗಿ ಅನುಮತಿಸಲಾಗುವುದಿಲ್ಲ. ಇವೆಲ್ಲವನ್ನೂ ದಾಣಿಗಳ ಗಮನದ್ದಲ್ಲಿರಿಸಿಯೇ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಚೆಕ್ನ್ನು Shri Ram Janmbhoomi Teerth Kshetra ಹೆಸರಲ್ಲಿ ನೀಡಬೇಕು. ಕ್ಷೇತ್ರದ PAN Number AAZTS6197B ಆಗಿದ್ದು ನಮ್ಮಲ್ಲಿ ದೇಣಿಗೆ ನೀಡುವವರೂ ತಾವು ನೀಡುವ ಚೆಕ್ನ ಹಿಂಭಾಗ ತಮ್ಮ ಸಂಪೂರ್ಣ ಹೆಸರು, ಪಾನ್ ಕಾರ್ಡ್ ಸಂಖ್ಯೆ ಮತ್ತು ಮೊಬಾಯ್ಲ್ ಸಂಖ್ಯೆಯನ್ನು ತಪ್ಪದೆ ನಮೂದಿಸ ಬೇಕು. ಒಟ್ಟುಗೂಡಿಸಿದ ಒಟ್ಟು ಮೊತ್ತವನ್ನು ಶೀಘ್ರದಲ್ಲೇ ಸಮರ್ಪಿಸಲಾಗುವುದು ಎಂದೂ ಎರ್ಮಾಳ್ ಹರೀಶ್ ತಿಳಿಸಿದ್ದಾರೆ.