ಕನ್ನಡಕ್ಕೆ ಭಾರತ ಮಟ್ಟದಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನ : ಕು| ಐಶ್ವರ್ಯಾ ಪೂಜಾರಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಮಾ.06: ಹನಿ ಧ್ವನಿಯಂತಹ ಕೃತಿಯನ್ನು ಕಿರಿಯವಳಾದ ನನ್ನಿಂದ ಬಿಡುಗಡೆಗೊಳಿಸಿರುವುದು ನನ್ನ ಸೌಭಾಗ್ಯ. ಕನ್ನಡಕ್ಕೆ ಭಾರತ ಮಟ್ಟದಲ್ಲಿ ಶಾಸ್ತ್ರೀಯ ಭಾಷೆ ಎಂಬ ಸ್ಥಾನಮಾನ ಸಿಕ್ಕಿರುವುದು ಅಭಿಮಾನ ಪಡುವಂತಹದ್ದು ಅಂತಹ ಕನ್ನಡ ಸಾಹಿತ್ಯ ಲೋಕಕ್ಕೆ ಹನಿ ದ್ವನಿ ಸಂಕಲನ ಜ್ಞಾನದ ಮುಡಿಗೆ ಶೋಭೆ ತರುತ್ತದೆ ಎಂದು 2019-20ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ಮುಂಬಯಿ ಕನ್ನಡ ರಾತ್ರಿ ಶಾಲೆಗಳ ಪೈಕಿ ಪ್ರಥಮ ಸ್ಥಾನ ಪ್ರಾಪ್ತಿಸಿದ್ದ ಕು| ಐಶ್ವರ್ಯಾ ಆರ್.ಪೂಜಾರಿ ತಿಳಿಸಿದರು.
ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಸಂಘದ ವಾಚನಾಲಯದಲ್ಲಿ ಇಂದಿಲ್ಲಿ ಶನಿವಾರ ಸಂಜೆ ಅಕ್ಷರಗಂಗಾ ಪ್ರಕಾಶನ ನವಿಮುಂಬಯಿ ಪ್ರಕಾಶಿತ ಹಿರಿಯ ಪತ್ರಕರ್ತ, ಲೇಖಕ ಸೋಮನಾಥ ಎಸ್.ಕರ್ಕೇರ ರಚಿತ ನೂರು ಹನಿಗವನಗಳ ಸಂಕಲನ `ಹನಿ-ಧ್ವನಿ' ಪುಸ್ತಕ ಬಿಡುಗಡೆಗೈದು ಕು| ಐಶ್ವರ್ಯಾ ಮಾತನಾಡಿದರು.
ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಗುರುರಾಜ ಎಸ್.ನಾಯಕ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಇದರ ವಿಜ್ಞಾನಿ ಚಿದಾನಂದ ಮಗದುಮ, ಮಂಜುನಾಥ ಬಡಿಗೇರ ಹಾಗೂ ವಿಶೇಷ ಆಮಂತ್ರಿತರಾಗಿ ಹಿರಿಯ ರಂಗ ಕಲಾವಿದ, ನಿರ್ದೇಶಕ ಡಾ| ಬಿ.ಆರ್ ಮಂಜುನಾಥ್ ಉಪಸ್ಥಿತರಿದ್ದರು.
ಮಗದುಮ ಮಾತನಾಡಿ ಮುಂಬಯಿಯಲ್ಲಿ ಕಲಿತು ಉದ್ಯೋಗವನ್ನು ನಿರ್ವಹಿಸುತ್ತಾ ಬಂದಿರುವ ಕರ್ಕೇರಾ ಅವರಂತಹ ಅನೇಕರು ನಗರದಲ್ಲಿ ನಿರಂತರ ಬರೆಯುತ್ತಿದ್ದಾರೆ. ಇವರನ್ನು ಕಂಡಾಗ ಅಭಿಮಾನವಾಗುತ್ತದೆ. ಐಶ್ವರ್ಯ ಪೂಜಾರಿ ರಾತ್ರಿ ಶಾಲೆಯಲ್ಲಿ ಕಲಿತು ಮಾಡಿದ ಸಾಧನೆ ಅನುಪಮವಾದುದು. ಇಂದಿನ ದಿನಗಳಲ್ಲಿ ಇಂತಹ ಸಾಧನೆ ಬಹಳ ಮಹತ್ವದ್ದು ಅನಿಸುತ್ತದೆ ಎಂದು ಹನಿ-ಧ್ವನಿ ಕೃತಿಯ ಸೋಮನಾಥ ಕರ್ಕೇರ ಹಾಗೂ 2019-20ನೇ ಸಾಲಿನ ಎಸ್.ಎಸ್.ಸಿ. ಪರೀಕ್ಷೆಯಲ್ಲಿ ಮುಂಬಯಿ ಕನ್ನಡ ರಾತ್ರಿ ಶಾಲೆಗಳ ಪೈಕಿ ಪ್ರಥಮ ಹಾಗೂ ಎಲ್ಲಾ ಮಾಧ್ಯಮಗಳಲ್ಲಿ ತೃತೀಯ ಸ್ಥಾನ ಗಳಿಸಿದ ಐಶ್ವರ್ಯ ಪೂಜಾರಿ ಅವರನ್ನು ಗೌರವಿಸಿ ಅಭಿನಂದಿಸಿದರು.
ಡಾ| ಮಂಜುನಾಥ್ ಮಾತನಾಡಿ ತಮಗೆ ಅನಿಸಿದ್ದನ್ನು ಬೇರೆಯವರಿಗೆ ತಿಳಿಸಲಿಕ್ಕೆ ಭಾಷೆ ಬೇಕು. ಅನಿಸಿಕೆ ಯಾವತ್ತೂ ಚಿಕ್ಕದಾಗಿರಬೇಕು ಎಂದು ಕೃತಿಕಾರ ಕರ್ಕೇರ ಅವರನ್ನು ಅಭಿನಂದಿಸಿದರು.
ಮಲ್ಲಿಕಾರ್ಜುನ ಬಡಿಗೇರ ಮಾತನಾಡಿ ಹನಿ ಧ್ವನಿ ಕೃತಿಯಲ್ಲಿ ಕಟುವಾದ ವಿಡಂಬನೆಯನ್ನು ಕಾಣಬಹುದು. ಈ ಕೃತಿಯನ್ನು ಓದುವಾಗ ತಮ್ಮನ್ನು ತಾವು ಆತ್ಮಾವಲೋಕನದತ್ತ ಕೊಂಡೊಯ್ಯುವಂತೆ ಪ್ರೇರೇಪಿಸುತ್ತದೆ.
ಕೃತಿಕರ್ತ ಸೋಮನಾಥ ಕರ್ಕೇರ ತಮ್ಮ ಕೃತಿಯ ಹಿನ್ನೆಲೆಯನ್ನು ಕುರಿತು ತಾನು ಸುಮಾರು ಐವತ್ತು ವರ್ಷಗಳಿಂದ ಬರೆಯಲು ಒದಗಿದ ಪ್ರೇರಕ ಶಕ್ತಿಗಳನ್ನು ನೆನಪಿಸಿದರು.
ಗುರುರಾಜ್ ನಾಯಕ್ ಅಧ್ಯಕ್ಷೀಯ ನುಡಿಗಳನ್ನಾಡಿ ಕರೊನದಿಂದ ಕಳೆದ ವರ್ಷ ಮುಂಬಯಿ ಕನ್ನಡ ಸಂಘದ ಆಶ್ರಯದಲ್ಲಿ ಯಾವುದೇ ಕಾರ್ಯಕ್ರಮಗಳು ಜರಗಿಲ್ಲ. ಈ ವರ್ಷ ಕರ್ಕೇರ ಹನಿ ಧ್ವನಿ ಬಿಡುಗಡೆ ಕೊಳ್ಳುತ್ತಿರುವುದು ಅಭಿನಂದನೀಯ. ದುಬೈಯಲ್ಲಿ ಕಳೆದ ವರ್ಷ ಬಿಡುಗಡೆ ಗೊಳ್ಳಬೇಕಾಗಿದೆ ಆ ಕಾರ್ಯಕ್ರಮ ಇಲ್ಲಿ ಇಂದು ಜೋರಾಗುತ್ತಿದೆ ಎಂದು ಕೃತಿಕಾರರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಡಾ| ರಜನಿ ವಿ.ಪೈ, ವಾಚನಾಲಯಾಧಿಕಾರಿ ಎಸ್.ಕೆ ಪದ್ಮನಾಭ, ಸದಸ್ಯರಾದ ನಾರಾಯಣ ರಾವ್, ಸಾ.ದಯಾ, ಕೆ. ಮಂಜುನಾಥಯ್ಯ ಮತ್ತಿತರ ಗಣ್ಯರು ಹಾಜರಿದ್ದು ಕೃತಿಕಾರರನ್ನು ಅಭಿನಂದಿಸಿದರು.
ಗಗನ್ ಮೂಲ್ಯ ಪ್ರಾರ್ಥನೆಯನ್ನಾಡಿದರು. ಕೃತಿಕರ್ತ ಸೋಮನಾಥ ಕರ್ಕೇರ ಸ್ವಾಗತಿಸಿ ಅತಿಥಿüಗಳಿಗೆ ಪುಷ್ಪಗುಪ್ಛ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ಕವಿ, ಶಿಕ್ಷಕ ಮಲ್ಲಿಕಾರ್ಜುನ ಬಡಿಗೇರ ಕೃತಿ ಪರಿಚಯಿಸಿದರು. ಅರ್ಚನ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಂಘದ ಸುಧಾಕರ್ ಸಿ.ಪೂಜಾರಿ ವಂದಿಸಿದರು.