ಬಣವಾಗಿ ಸ್ಪರ್ಧಿಸಿದ್ದ ಆರು ಸ್ಪರ್ಧಿಗಳ ಗೆಲುವು
(ಚಿತ್ರ / ವರದಿ : ರೋನಿಡಾ ಮುಂಬಯಿ)
ಮುಂಬಯಿ, ಮಾ.07: ಮಾಯಾನಗರಿ ಬೃಹನ್ಮುಂಬಯಿನಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಗಳ ಮೂಲಕ ಕಳೆದ ಸುಮಾರು ಆರುವರೆ ದಶಕಗಳಿಂದ ಸೇವಾ ನಿರತ ಚೆಂಬೂರು ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಗಾಗಿ ಇಂದಿಲ್ಲಿ ಚೆಂಬೂರು ಘಾಟ್ಲಾ ವಿಲೇಜ್ನ ವಿದ್ಯಾಸಾಗರ್ ವಿದ್ಯಾ ಸಂಕುಲದಲ್ಲಿನ ಸಂಘದ ಶಾಲಾ ಆವರಣದಲ್ಲಿ ಚುನಾವಣೆ ನಡೆಸಲ್ಪಟ್ಟಿತು.
ಸಂಘದ ಕಾರ್ಯಕಾರಿ ಸಮಿತಿಯ ಆರು ಸದಸ್ಯರ ಆಯ್ಕೆಗಾಗಿ ಏಳು ಅಭ್ಯಥಿಗಳು ನಾಮಪತ್ರ ಸಲ್ಲಿಸಿದ್ದು ಏಳೂ ಅಭ್ಯಥಿಗಳು ಕಣದಲ್ಲಿದ್ದರು. ಸದಸ್ಯತ್ವ ಸ್ಪರ್ಧೆಗಾಗಿ ಇಂದು ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ಚುನಾವಣಾ ಪ್ರಕ್ರಿಯೆ ನಡೆಸಲ್ಪಟ್ಟಿದ್ದು ಹಲವಾರು ಸದಸ್ಯರು ಆಗಮಿಸಿ ತಮ್ಮ ಮತಗಳನ್ನು ಚಲಾಯಿಸಿದರು.
ಆ ನಿಮಿತ್ತ ನಡೆಸಲಾದ ಚುನಾವಣೆಯಲ್ಲಿ ಸಂಘದ ಸುಧಾಕರ್ ಹೆಚ್.ಅಂಚನ್, ಅಶೋಕ್ ಸಾಲ್ಯಾನ್, ಚಂದ್ರಶೇಖರ ಎ.ಅಂಚನ್, ಗುಣಾಕರ ಹೆಚ್.ಹೆಗ್ಡೆ, ಮೋಹನ್ ಎಸ್.ಕಾಂಚನ್, ವಿಶ್ವನಾಥ ಎಸ್.ಶೇಣವ ಇವರುಗಳು ಒಂದು ಬಣವಾಗಿ ಸ್ಪರ್ಧಿಸಿದ್ದರೆ ಪ್ರತಿಸ್ಪರ್ಧಿಯಾಗಿ ಪ್ರೇಮನಾಥ್ ಎಸ್.ಸಾಲ್ಯಾನ್ ಏಕಾಂಗಿಯಗಿ ಸ್ಪರ್ಧಿಸಿದ್ದರು.
ಕಣದಲ್ಲಿದ್ದ ಪ್ರೇಮನಾಥ್ ಎಸ್.ಸಾಲ್ಯಾನ್ ಕೆಲವೇ ಮತಗಳನ್ನು ಪಡೆದು ಪರಾಭವಗೊಂಡಿದ್ದು, ಉಳಿದ ಅಭ್ಯಥಿಗಳೆಲ್ಲರೂ ವಿಜೇತರೆಣಿಸಿದರು. ಜಯ ಎ.ಶೆಟ್ಟಿ ಮುಖ್ಯ ಚುನಾವಣಾಧಿಕಾರಿ ಆಗಿದ್ದು ಹಾಗೂ ಅಶೋಕ್ ಆರ್.ಶೆಟ್ಟಿ ಮತ್ತು ರಘು ಎ. ಮೊಲಿ ಸಹಾಯಕ ಚುನಾವಣಾಧಿಕಾರಿಗಳಾಗಿ ಚುನಾವಣಾ ಪ್ರಕ್ರಿಯೆ ನಡೆಸಿ ವಿಜೇತ ಅಭ್ಯಥಿಗಳ ಫಲಿತಾಂಶ ಪ್ರಕಟಿಸಿ ಆಯ್ಕೆ ಪ್ರತಿಯನ್ನು ವಿಜೇತರಿಗೆ ಹಸ್ತಾಂತರಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನ್ಯಾಯವಾದಿ ಹೆಚ್.ಕೆ ಸುಧಾಕರ ಆರಾಟೆ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಹಾ ಸಭೆ ಮುಂದೂಡಿಕೆ: ಚೆಂಬೂರು ಕರ್ನಾಟಕ ಸಂಘದ 65ನೇ ವಾರ್ಷಿಕ ಮಹಾಸಭೆಯನ್ನು ದಿನಾಂಕ 14, ಮಾರ್ಚ್ ರವಿವಾರ ನಡೆಸಲು ಉದ್ದೇಶಿಸಿದ್ದು ಕಾರಣಾಂತರವಾಗಿ ಮುಂದೂಡಲಾಗಿದ್ದೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಸಂಘದ ಮೂಲಗಳು ತಿಳಿಸಿವೆ.