ವಿಶೇಷ ಸಂಘಟನಾ ಪ್ರಶಸ್ತಿ ಮುಡಿಗೇರಿಸಿದ ತುಳು ಸಂಘ ಬರೋಡಾ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಬೆಂಗಳೂರು, ಮಾ.07: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ವಿತರಣಾ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇಂದಿಲ್ಲಿ ಭಾನುವಾರ ಬೆಂಗಳೂರು ಇಲ್ಲಿನ ರವೀಂದ್ರ ಕಲಾಕ್ಷೇತ್ರದ ಸಭಾಗೃಹದಲ್ಲಿ ನೆರವೇರಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ತಮ್ಮ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿಸಿ ಅಕಾಡೆಮಿಯ ಮುಖವಾಣಿ ಮದಿಪು ಬಿಡುಗಡೆ ಗೊಳಿಸಿದರು. ಬಳಿಕ ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಮತ್ತಿತರ ಗಣ್ಯರನ್ನೊಳಗೊಂಡು 2020ನೇ ಸಾಲಿನ ವಿಶೇಷ ಸಂಘಟನಾ ಪ್ರಶಸ್ತಿಯನ್ನು ತುಳು ಸಂಘ ಬರೋಡಾ ಸಂಸ್ಥೆಗೆ ಪ್ರದಾನಿಸಿದರು. ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಅನುಪಸ್ಥಿತಿಯಲ್ಲಿ ಮದನ್ಕುಮಾರ್ ಮುಡಿಗೆರೆ (ಬರೋಡಾ) ಪ್ರಶಸ್ತಿ ಸ್ವೀಕರಿಸಿದರು.
ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನಗೈದರು. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಶುಭಶಂಸನೆಗೈದರು. ಮಟ್ಟಾರು ರತ್ನಾಕರ ಹೆಗ್ಡೆ ಮುಖ್ಯ ಅತಿಥಿüಯಾಗಿದ್ದು ಸಚಿವ ಎಸ್.ಅಂಗಾರ ದರು.
ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಸಮಾರಂಭ ಬೆಳಿಗ್ಗೆ ಉದ್ಘಾಟಿಸಿದ್ದು, ಧರ್ಮಸ್ಥಳ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ರಾಜ್ಯಸಭಾ ಸದಸ್ಯ ಕೆ.ನಾರಾಯಣ, ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ ಉಪಸ್ಥಿತಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ಸಾರ್ ಅಧ್ಯಕ್ಷತೆಯಲ್ಲಿ ಸಮಾರಂಭ ನೆರವೇರಿತು.
2020ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿಯನ್ನು ರಾಮಚಂದರ್ ಬೈಕಂಪಾಡಿ (ಸಾಹಿತ್ಯ), ಲಲಿತಾ ಆರ್.ರೈ (ಸಾಹಿತ್ಯ), ರತ್ನಾಕರ್ ರಾವ್ ಕಾವೂರು ಮತ್ತು ತುಂಗಪ್ಪ ಎಂ.ಬಂಗೇರ ಪುಂಜಾಲಕಟ್ಟೆ (ನಾಟಕ), ಎ.ಕೆ ವಿಜಯ್ ಕೋಕಿಲಾ (ಸಿನಿಮಾ), ಶಾಂತರಾಮ್ ವಿ.ಶೆಟ್ಟಿ ಮತ್ತು ಡಾ| ಕೆ.ಚಿನ್ನಪ್ಪ ಗೌಡ (ಕವನ), ರಾಜಶ್ರೀ ಟಿ.ರೈ ಪೆರ್ಲಾ (ಕಾದಂಬರಿ), ಆನಂದ ಪೂಜಾರಿ ಹಳೆಯಂಗಡಿ (ಜಾನಪದ), ಯುವ ಸಾಧಕ ಪ್ರಶಸ್ತಿಯನ್ನು ಯೋಗೀಶ್ ಶೆಟ್ಟಿ ಜೆಪ್ಪು (ಸಂಘಟಕ), ನವೀನ್ ಶೆಟ್ಟಿ ಎಡ್ಮೆಮಾರ್ (ನಿರೂಪಕ), ತುಳು ಕೂಟ ಕುವೈಟ್ (ಹೊರ ದೇಶ) ಮತ್ತಿತರ ಸಾಧಕರಿಗೆ ಹಾಗೂ ವಿಶೇಷ ಬಾಲ ಪ್ರತಿಭಾ, ಸಂಘಟನಾ ಪುರಸ್ಕಾರಗಳನ್ನೂ ಮುಖ್ಯಮಂತ್ರಿ ಅವರು ಪ್ರದಾನಿಸಿ ಪುರಸ್ಕೃತರಿಗೆ ಅಭಿನಂದಿಸಿದರು.
ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ ಮತ್ತಿತರ ಸಂಸ್ಥೆಗಳ ವಿಶೇಷ ಸಹಕಾರದೊಂದಿಗೆ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ರಿಜಿಸ್ಟ್ರಾರ್ ರಾಜೇಶ್ ಜಿ., ಸದಸ್ಯರಾದ ನಿಟ್ಟೆ ಶಶಿಧರ ಶೆಟ್ಟಿ, ಕಾಂತಿ ಶೆಟ್ಟಿ ಬೆಂಗಳೂರು ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದು ಚರ್ಚಾಕೂಟ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲ್ಪಟ್ಟವು.
ಹೊರನಾಡಿನಲ್ಲಿದ್ದು ವಿಶೇಷ ಸಂಘಟನಾ ಪ್ರಶಸ್ತಿ ಮುಡಿಗೇರಿಸಿದ ತುಳು ಸಂಘ ಬರೋಡಾ ಅಧ್ಯಕ್ಷರ ಶಶಿಧರ್ ಬಿ.ಶೆಟ್ಟಿ, ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ವಾಸು ಪಿ.ಪೂಜಾರಿ ಮತ್ತಿತರ ಪದಾಧಿಕಾರಿಗಳು ಈ ಪ್ರತಿಷ್ಠಿತ ಗೌರವಕ್ಕೆ ಹರ್ಷ ವ್ಯಕ್ತ ಪಡಿಸಿ ಸಂಸ್ಥೆಯನ್ನು ಹುಟ್ಟುಹಾಕಿ ಈ ಮಟ್ಟಕ್ಕೆ ಬೆಳೆಸಲು ಸಹಕರಿಸಿದ ಎಲ್ಲಾ ಸದಸ್ಯರ ಸೇವೆಗೆ ಈ ಗೌರವ ಇದಾಗಿದೆ ಎಂದಿದ್ದಾರೆ.