ಕೊರೋನದಿಂದ ಜೀವನ ಪಾಠ ಕಲಿವಂತಾಯಿತು : ಡಾಕ್ಟರ್ ಪ್ರಶಾಂತ್ ಜೈನ್
ಮುಂಬಯಿ (ಆರ್ಬಿಐ), ಜೂ.06: ಕೊರೋನ ವೈರಾಣುವಿನಿಂದ ಬರುವಂತಹ ಒಂದು ಸಾಂಕ್ರಾಮಿಕ ರೋಗ. ಚೀನಾದ ವುಹಾನ್ನ್ನಿಂದ ಪ್ರಾರಂಭವಾಗಿ ಇಂದು ವಿಶ್ವದೆಲ್ಲೆಡೆ ಹರಡಿ ಲಕ್ಷಾಂತರ ಜನರ ಸಾವು ನೋವುಗಳಿಗೆ ಕಾರಣವಾಗಿದೆ. ಖಂಡಿತವಾಗಿಯೂ ಪ್ರತಿಯೊಬ್ಬರ ಜೀವನದಲ್ಲಿಯೂ ಈ ಕಾಯಿಲೆ ಬದಲಾವಣೆ ಮಾಡಿದೆ. ವಿಶೇಷವಾಗಿ ನಾವೆಲ್ಲರೂ ಶುಚಿತ್ವಕ್ಕೆ ಬಹು ಪ್ರಾಮುಖ್ಯತೆ ಕೊಡಬೇಕಾಗಿದೆ. ಮಾಸ್ಕ್ನೊಂದಿಗೆ ನಾವೆಲ್ಲಾ ಹೊಂದಿ ಕೊಳ್ಳಬೇಕಾಗಿದೆ. ಸಾಂಕ್ರಾಮಿಕ ರೋಗ ತಡೆ ಕಾಯಿದೆಯ ಪ್ರಕಾರ ಖಾಸಗಿ ವೈದ್ಯರು ಈ ಸಾಂಕ್ರಾಮಿಕ ಕಾಯಿಲೆಯನ್ನು ಟ್ರೀಟ್ ಮಾಡುವ ಹಾಗಿಲ್ಲ. ಆದರೂ ಕೂಡ ಕಳೆದ 10 ವರ್ಷದಿಂದ ನಾನು ಈ ವೃತ್ತಿಯಲ್ಲಿ ಇರೋದರಿಂದ ಕೊರೊನ ಲಕ್ಷಣಗಳಿರುವ ರೋಗಿಗಳು ಖಂಡಿತ ಬಂದಿದ್ದಾರೆ. ಈ ಕಾಯಿಲೆ ಬಂದಾಗ ಎಲ್ಲರೂ ಹೆದರಿಕೊಳ್ಳೋದು ಸತ್ಯ. ನನ್ನ ವೃತ್ತಿಯೇ ಇದು ಆಗಿರುದರಿಂದ ಸುರಕ್ಷತಾ ಕ್ರಮದೊಂದಿಗೆ ರೋಗಿಯನ್ನು ಪರೀಕ್ಷಿಸಿ ರೋಗ ಲಕ್ಷಣಗಳು ಕಂಡುಬಂದರೆ ಹೆಚ್ಚಿನ ಪರೀಕ್ಷಾ ವಿಧಾನಗಳನ್ನು ಮಾಡಲು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಕೊಡಬೇಕಾದ ಅವಶ್ಯಕತೆ ಇದೆ ಎಂದು ಕರ್ನಾಟಕದ ಉಡುಪಿ ಜಿಲ್ಲೆಯ ಬಜಗೋಳಿ ಇಲ್ಲಿನ ಚಿರಾಯು ಕ್ಲಿನಿಕ್ನ ಆಯುರ್ವೇದ ವೈದ್ಯಾಧಿಕಾರಿ ಡಾಕ್ಟರ್ ಪ್ರಶಾಂತ್ ಜೈನ್ (ಎಂಡಿ) ತಿಳಿಸಿದರು.
ಲೇಖಕಿ, ಪತ್ರಕರ್ತೆ ಹರಿಣಿ ನಿಲೇಶ್ ಪೂಜಾರಿ ಪಲಿಮಾರು ಅವರೊಂದಿಗೆ ಮಾತುಕತೆ ನಡೆಸಿ ಮಾಹಿತಿಯನ್ನಿತ್ತ ಡಾ| ಜೈನ್, ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಹೆಚ್ಚಿನವರು ಕೃಷಿಗೆ ಹೊಂದಿಕೊಂಡು ಇರೋದರಿಂದ ಎಲ್ಲರೂ ಲಾಕ್ಡೌನ್ ಆದಾಗಲೂ ತಮ್ಮ ಕೆಲಸದಲ್ಲಿ ತೊಡಗಿರುತ್ತಾರೆ. ಮೊದಲ ಅಲೆಯಲ್ಲಿ ಕಾಡಿದ ಭಯ, ಎರಡನೇ ಅಲೆಯಲ್ಲಿ ಕೂಡ ಇತ್ತು. ಪರೀಕ್ಷೆ ಮಾಡಲು ಹೇಳಿದಾಗ ಭಯಗೊಳ್ಳುವುದು ಸಹಜ. ಕೆಲವರಲ್ಲಿ ಮಾನಸಿಕ ಆಗೋಗ್ಯದ ಮೇಲೆ ಕೂಡ ಪರಿಣಾಮ ಬೀರಿದೆ. ಇಂತಹ ಸಾಂಕ್ರಾಮಿಕ ರೋಗಗಳು ಬಂದಾಗ ಯಾವ ಕಾಲವಾದರು ಸಮಸ್ಯೆ ಇದ್ದೆ ಇರುತ್ತೆ. ಸಿಡುಬು, ಪ್ಲೇಗ್ ಅಂತಹ ಕಾಯಿಲೆಗಳು ಕಾಡಿದಾಗ ಕೂಡ ಸಾವುನೋವು ಸಂಭವಿಸಿರುದನ್ನು ನಾವು ಕೇಳಿದ್ದೇವೆ. ಊರಲ್ಲಿರೋ ಜನರಿಗೆಲ್ಲ ಅನಾರೋಗ್ಯ ಉಂಟಾದಾಗ ಆರೋಗ್ಯ ಸೇವೆ ವೈಪರೀತ್ಯ ಸಾಮಾನ್ಯ. ಇಂತಹ ಸಾಂಕ್ರಾಮಿಕ ರೋಗಗಳು ಖಂಡಿತ ಅಷ್ಟು ಬೇಗ ನಶಿಸುದಿಲ್ಲ.ಆದ್ದರಿಂದ ನಾವೆಲ್ಲರೂ ಜಾಗ್ರತರಾಗಿ, ಜಾವಬ್ದಾರಿಯುತ ನಾಗರಿಕರಾಗಿ ಸರಕಾರ ರೂಪಿಸಿರುವ ಕಾನೂನು ಪಾಲಿಸುವುದು ಹಾಗೂ ನಮ್ಮ ಆರೋಗ್ಯ ರಕ್ಷಣೆ ನಾವು ಮಾಡುವುದು ಸೂಕ್ತ. ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮವಾಗಿದೆ (Prevention is Better than cure). ಕಾಯಿಲೆ ಬಾರದ ಹಾಗೆ ತಡೆಯುವುದು ಚಿಕಿತ್ಸೆಗಿಂತ ಉತ್ತಮ, ಹಾಗಾಗಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಲಹೆ ಪಡೆದುಕೊಳ್ಳಬೇಕು.
ಜನರೆಲ್ಲಾ ಭಯಗೊಂಡಿರೋದರಿಂದ ಅವರಿಗೆ ಮನವರಿಕೆ ಮಾಡುವುದು ಬಹುಮುಖ್ಯ. ಆರೋಗ್ಯಸ್ಥಿತಿ ಪರೀಕ್ಷೆ ಮಾಡಿದ್ರೆ ಸಾಯ್ತಿವಿ ಅನ್ನೋ ಮನಸ್ಥಿತಿ ಇದೆ. ಆದ್ದರಿಂದ ಟೆಸ್ಟ್ ಮಾಡುದರ ಪ್ರಯೋಜನ ಮತ್ತು ಮೈಲ್ಡ್ ಲಕ್ಷಣಗಳು ಇರುವವರನ್ನು ಮನೆಯಲ್ಲಿಯೇ ಐಸೋಲೇಟ್ ಮಾಡಿ ಚಿಕಿತ್ಸೆ ಮಾಡುವುದರ ಬಗ್ಗೆ ತಿಳಿಹೇಳಿ, ಲಕ್ಷಣ ಇರುವ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕನ್ನು ತಡೆಯಲು ಸಾಧ್ಯ. ಇತ್ತಿಚೆಗೆ ಮಾಧ್ಯಮಗಳು ಧನಾತ್ಮಕ ವಿಷಯಗಳಿಗಿಂತ ಋಣಾತ್ಮಕ ವಿಷಯಗಳನ್ನು ಬಿತ್ತರಿಸುತ್ತಿರುವುದು ವಿಪರ್ಯಾಸ. ಇದೊಂದು ಸೋಂಕು (ಇನ್ಫೆಕ್ಷನ್) ಆಗಿರೋದರಿಂದ ಖಂಡಿತವಾಗಿಯು ಮಾಸ್ಕ್, ಸ್ಯಾನಿಟೈಝೆರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಕೈ ತೊಳೆದುಕೊಳ್ಳುವುದು ಇವೆಲ್ಲವೂ ಸೋಂಕು ಪಸರಿಸದಂತೆ ಕಾಪಾಡುತ್ತದೆ. ಕೊರೊನ ಲಕ್ಷಣಗಳಾದ ಶೀತ, ಜ್ವರ, ತಲೆನೋವು, ಗಂಟಲು ನೋವು, ಗಂಟಲು ಕೆರೆತ, ಕಫ, ದಮ್ಮು, ಕೆಮ್ಮು ವಾಂತಿ, ಭೇದಿ, ಅತಿ ಸುಸ್ತು ಇವೆಲ್ಲ ಕಾಣಿಸಿಕೊಂಡಾಗ ಎಚ್ಚೆತುಕೊಂಡು ಪ್ರಾರಂಭವಾದ ದಿನವೇ ವೈದ್ಯರನ್ನು ಭೇಟಿಯಾಗಿ ಎಲ್ಲಾ ಪರೀಕ್ಷಾ ವಿಧಾನಗಳಿಂದ ಕಾಯಿಲೆಯನ್ನು ಗುರುತಿಸಿದಾಗ ಸೂಕ್ತ ಚಿಕಿತ್ಸೆಗೆ ಅನುಕೂಲವಾಗುತ್ತೆ. ಆದ್ದರಿಂದ ಯಾರು ಕೂಡ ಭಯಗೊಳ್ಳದೆ ಸರಕಾರ ರೂಪಿಸಿದ ಕಾನೂನು ಪಾಲಿಸಿಕೊಂಡು ನಾವೆಲ್ಲ ಈ ಕಾಯಿಲೆಯ ವಿರುದ್ಧ ಹೋರಾ ಡೋಣ.
ಈ ಕಾಯಿಲೆಯಿಂದ ನಾವೆಲ್ಲರೂ ಜೀವನ ಪಾಠ ಕಲಿತಿದ್ದೇವೆ. ರೋಗ ನಿರೋಧಕ ಶಕ್ತಿಯ ಮಹತ್ವ ಅರಿವಾಗಿದೆ. ನಮ್ಮ ಆಹಾರ ನಮ್ಮ ಜೀವನಶೈಲಿ ಮೇಲೆ ನಿಗಾ ವಹಿಸುವುದು, ಯೋಗ, ಪ್ರಾಣಾಯಾಮವನ್ನು ಜೀವನದ ಬಾಗವಾಗಿಸುವುದು ಸದೃಢ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಪಡೆದು ಕಾಯಿಲೆ ಬಂದಾಗ ಧೈರ್ಯದಿಂದ ಎದುರಿಸಲು ಕಲಿಯೋಣ.. ಲಸಿಕೆ ಹಾಕಿಸಲು ಎಲ್ಲರನ್ನು ಪ್ರೇರೆಪಿಸೋಣ, ಕೊರೊನ ಮುಕ್ತವಾಗಿಸಲು ಹೋರಾದೊಣ ಎಂದು ಡಾ| ಪ್ರಶಾಂತ್ ಜೈನ್ ತಿಳಿಸಿದ್ದಾರೆ.