ಮುಂಬಯಿ, ಜು.06: ಗೊರೆಗಾವ್ ಪಶ್ಚಿಮದಲ್ಲಿನ ತುಳು ಕನ್ನಡಿಗ ಪ್ರಸಿದ್ಧ ವೈದ್ಯಾಧಿಕಾರಿ ಡಾ| ಕರುಣಾಕರ ಬಂಗೇರ (67.) ಇಂದಿಲ್ಲಿ ಮಂಗಳವಾರ ಬೆಳಿಗ್ಗೆ ಅಲ್ಪಕಾಲದ ಅಸ್ವಸ್ಥತೆಯಿಂದ ಸ್ಥಾನೀಯ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಶಿಮಂತೂರು ಮೂಲತಃ ಕರುಣಾಕರ ಬಂಗೇರ ಗ್ರ್ಯಾಂಟ್ ಮೆಡಿಕಲ್ ಕಾಲೇಜ್ ಮತ್ತು ಜೆ.ಜೆ ಆಸ್ಪತ್ರೆಯಲ್ಲಿ ವೃತ್ತಿ ಆರಂಭಿಸಿದ ಇವರು ಏರ್ಇಂಡಿಯಾ, ಎಲ್ಐಸಿ,ಈಸ್ಟರ್ನ್ ಸಿರಾಮಿಕ್ಸ್ ಲಿಮಿಟೆಡ್ ಸಂಸ್ಥೆಗಳ ತಜ್ಞರ ಸಮಿತಿ (ಪ್ಯಾನಲ್ ಡಾಕ್ಟರ್) ಸದಸ್ಯ ಆಗಿದ್ದರು. ಯಂಗ್ ಮೆಡಿಕೋಸ್ ಅಸೋಸಿಯೇಷನ್ ವೈದ್ಯರನ್ನು ಅಭ್ಯಾಸ ಮಾಡಲು ಮಾಸ್ ಮೆಡಿಕಲ್ ಶಿಕ್ಷಣ ಕಾರ್ಯಕ್ರಮದ ಸ್ಥಾಪಕ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ಮಹಾನಗರದಲ್ಲಿನ ಓರ್ವ ಸಹೃದಯಿ ಸಮಾಜ ಸೇವಾಕರ್ತರಾಗಿದ್ದು ಹಲವಾರು ಕಾರ್ಯಕ್ರಮಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡು ಹಲವಾರು ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿ ವಿಶೇಷವಾಗಿ ತುಳು ಕನ್ನಡಿಗರಿಗೆ ವೈದ್ಯಕೀಯ ಕ್ಷೇತ್ರದ ಅರಿವು ಮೂಡಿಸುತ್ತಿದ್ದರು. ವೈದ್ಯಕೀಯ ವಿಚಾರಿತ ಮಾರ್ಗದರ್ಶಕರಾಗಿ ಉತ್ತಮ ಸಲಹೆಗಳನ್ನಿತ್ತು ಸಹಕರಿಸುತ್ತಿದ್ದ ಅವರು ಹಲವಾರು ಪತ್ರಿಕೆಗಳಿಗೆ ಅಂಕಣಕಾರರಾಗಿ, ಆಕಾಶವಾಣಿ ಮತ್ತಿತರ ಮಾಧ್ಯಮಗಳಿಗೆ ವೈದ್ಯಕೀಯ ಮಾಹಿತಿಯನ್ನು ಭಿತ್ತರಿಸುತ್ತಿದ್ದರು.
ಕೆಇಎಂ ಆಸ್ಪತ್ರೆ ಮುಂಬಯಿ ಇದರ ಮಾಜಿ ಕ್ಲಿನಿಕಲ್ ಅಸೋಸಿಯೇಟ್, ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕಾರ್ಯನಿರ್ವಾಹಕ ಸದಸ್ಯ, ಕೋಕಿಲಾಭೆನ್ ದಿರೂಭಾಯಿ ಅಂಬಾನಿ ಆಸ್ಪತ್ರೆಯ ವಿಸಿಟಿಂಗ್ ಡಾಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರ ಸರಕಾರದ ವಿಶೇಷ ಕಾರ್ಯನಿರ್ವಾಹಕ (ಎಸ್ಸಿಒ) ಆಗಿದ್ದು ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ, ಕರ್ನಾಟಕ ಕರಾವಳಿ ಪ್ರಾಧೀಕಾರದಿಂದ ಗಡಿನಾಡ ಧ್ವನಿ ರಾಜ್ಯ ಪ್ರಶಸ್ತಿ, ವಚನ ಸಾಹಿತ್ಯ ರಾಷ್ಟ್ರೀಯ ಪುರಸ್ಕಾರ, ಜ್ಞಾನ ಮಂದಾರ ಶಿಕ್ಷಣ ಮತ್ತು ಸಾಂಸ್ಕೃತಿಕ ಅಕಾಡೆಮಿ, ಕರ್ನಾಟಕ ಸಂಘ ಮುಂಬಯಿ ಮತ್ತಿತರ ಸಂಸ್ಥೆಗಳಿಂದ ಪುರಸ್ಕೃತರಾಗಿದ್ದರು. ಸ್ಥಳೀಯ ಬಂಗೂರು ನಗರದಲ್ಲಿ ವಾಸವಾಗಿದ್ದ ಮೃತರು ಪತ್ನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ