ಮಂಗಳೂರು: ದುಷ್ಕರ್ಮಿಗಳಿಂದ ಏಪ್ರಿಲ್ 20 ರಂದು ಹತ್ಯೆಗೀಡಾದ ಬಂಟ್ವಾಳದ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇವರ ಮೃತದೇಹದ ಮೇಲೆ 23 ಗಾಯದ ಗುರುತುಗಳು ಪತ್ತೆಯಾಗಿದ್ದು, ಹತ್ಯೆಯ ಭೀಕರತೆಯನ್ನು ತೋರಿಸಿಕೊಟ್ಟಿದೆ. ಜಲೀಲ್ ಅವರ ಮೇಲೆ ದುಷ್ಕರ್ಮಿಗಳ ತಂಡ ನಡೆಸಿದ್ದ ತಲವಾರು ದಾಳಿಯಲ್ಲಿ ಕತ್ತಿನ ಭಾಗದಲ್ಲಾಗಿದ್ದ ಬಲವಾದ ಏಟಿನಿಂದಾಗಿ ಅವರು ಮೃತಪಟ್ಟಿದ್ದರು
ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಜಿಲ್ಲಾ ಎಸ್ಪಿ ಭೂಷಣ್ ರಾವ್ ಬೊರಸೆ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕರ್ನಾಟಕ - ಕೇರಳ ಗಡಿಭಾಗವಾಗಿರುವ ಕನ್ಯಾನ - ಕರೋಪಾಡಿ ಗ್ರಾಮದಲ್ಲಿ ಹಲವು ಕ್ರಿಮಿನಲ್ ಹಿನ್ನಲೆಯುಳ್ಳ ಆರೋಪಿಗಳಿದ್ದು, ಅವರಿಂದ ಈ ಕೃತ್ಯ ನಡೆದಿರಬಹುದೆಂದು ಶಂಕಿಸಲಾಗಿದೆ.ಮೃತ ಜಲೀಲ್ ಅವರ ಅಂತ್ಯಸಂಸ್ಕಾರ ಶುಕ್ರವಾರ ಜನಸಾಗರದ ನಡುವೆ ನಡೆದಿದೆ. ಈ ವೇಳೆ ಆಹಾರ ಸಚಿವ ಯು. ಟಿ. ಖಾದರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಉಪಸ್ಥಿತರಿದ್ದರು.