ಸಮುದಾಯದ ಬಲವರ್ಧನೆಗೆ ಮಾತೃಸಂಸ್ಥೆಯೇ ಅಡಿಪಾಯ : ಬಿ.ವಿ ರಾವ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ನ.26: ಒಂದು ಕಾಲಕ್ಕೆ ಗಾಣದ ಕಾಯಕವನ್ನು ಕುಲಕಸುಬು ನಡೆಸುತ್ತಿದ್ದ ನಾವುಗಳು ಕ್ರಮೇಣ ಸಾಂಪ್ರದಾಯಿಕ ತೈಲ ಉದ್ಯಮಿಗಳು, ಎಣ್ಣೆಯ ಉತ್ಪಾದಕರು ಎಂದೆಣಿಸಿದ ಪ್ರತಿಭಾನ್ವಿತ ಮತ್ತು ಶ್ರೇಷ್ಠ ಕಲಾವಿದ ಗಾಣಿಗರು ಎಲ್ಲರಂತೆ ಮುನ್ನಡೆಯಲ್ಲಿದ್ದಾರೆ. ಸದ್ಯ ಕುಲವೃತ್ತಿಯಿಂದ ದೂರಸರಿದ ನವಪೀಳಿಗೆ ಪ್ರಸ್ತುತ ಒಳ್ಳೊಳ್ಳೆಯ ಇಂಜಿನೀಯರ್, ಐಟಿ, ವೃತ್ತಿಪರರು, ಉದ್ಯಮಶೀಲರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ಸಾಗರೋತ್ತರ ರಾಷ್ಟ್ರÀಗಳಲ್ಲೂ ನೆಲೆನಿಂತು ತಮ್ಮ ಅಸ್ತಿತ್ವವನ್ನು ರೂಪಿಸಿ ಗಾಣಿಗ ಅಸ್ಮಿತೆಯನ್ನು ಜಗಕ್ಕೆ ಪ್ರದರ್ಶಿಸುತ್ತಿರುವುದು ಅಭಿನಂದನೀಯ. ಇಂತಹ ಪ್ರತಿಷ್ಠಿತ ಸಮುದಾಯದ ಬಲವರ್ಧನೆಗೆ ಸಂಸ್ಥೆಗಳು ಅಡಿಪಾಯವಾಗಿವೆ. ಆದ್ದರಿಂದ ಸಂಘದ ಜೊತೆ ಒಗ್ಗೂಡಿ ಸಮಾಜವನ್ನು ಸದೃಢಗೊಳಿಸಿ. ಸ್ವಸಮುದಾಯದ ಸಂಘ-ಸಂಸ್ಥೆಗಳು ಬಲಗೊಂಡಾಗ ಮಾತ್ರ ಆಯಾ ಸಮುದಾಯಗಳ ಅಭಿವೃದ್ಧಿ ಸಾಧ್ಯವಾಗುವುದು ಎಂದು ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ಬಿ.ವಿ ರಾವ್ (ಬೈಕಾಡಿ ವಾಸುದೇವ ರಾವ್) ತಿಳಿಸಿದರು.
ಮುಂಬಯಿ ಸಯನ್ ಇಲ್ಲಿನ ಬಿಎಸ್ಕೆಬಿ ಅಸೋಸಿಯೇಶನ್ನ ಗೋಕುಲದ ಸರಸ್ವತಿ ಸಭಾಗೃಹದಲ್ಲಿ ಗಾಣಿಗ ಸಮಾಜ ಮುಂಬಯಿ ನಡೆಸಿದ 26ನೇ ವಾರ್ಷಿಕ ಮಹಾಸಭೆ ದೀಪ ಬೆಳಗಿಸಿ ಚಾಲನೆಯನ್ನೀಡಿ ಅಧ್ಯಕ್ಷತೆ ವಹಿಸಿ ಬಿ.ವಿ ರಾವ್ ಮಾತನಾಡಿದರು.
ಜಿಎಸ್ಎಂ ಗೌರವಾಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಉಪಾಧ್ಯಕ್ಷ ವಿಜಯೇಂದ್ರ ಗಾಣಿಗ, ಗೌ| ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ, ಜೊತೆ ಕಾರ್ಯದರ್ಶಿ ಜಗದೀಶ್ ಗಾಣಿಗ, ಮಹಿಳಾಧ್ಯಕ್ಷೆ ತಾರಾ ಭಟ್ಕಳ್, ಯುವ ವಿಭಾಗ ಅಧ್ಯಕ್ಷ ಗಣೇಶ್ ಆರ್.ಕುತ್ಪಾಡಿ, ವಿದ್ಯೋದಯ ಸಮಿತಿ ಕಾರ್ಯಾಧ್ಯಕ್ಷ ವಿಜಯೇಂದ್ರ ಗಾಣಿಗ ವೇದಿಕೆಯಲ್ಲಿ ಆಸೀನರಾಗಿದ್ದು ಉಪಸ್ಥಿತ ಬಿಎಸ್ಕೆಬಿಎ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅವರಿಗೆ ಅಧ್ಯಕ್ಷರು ಪುಷ್ಪಗುಚ್ಛವನ್ನಿತ್ತು ಗೌರವಿಸಿದರು.
ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ ಗತ ಮಹಾಸಭೆಯ ಹಾಗೂ ವಾರ್ಷಿಕ ಕಾರ್ಯ ಚಟುವಟಿಕೆಗಳ ವರದಿ ತಿಳಿಸಿದರು. ಸದಾನಂದ ಕಲ್ಯಾಣ್ಫುರ್ ಗತ ವಾರ್ಷಿಕ ಲೆಕ್ಕಪತ್ರದ ವಿವರಣೆ ನೀಡಿದರು. ಬಳಿಕ 2023-2025ರ ಸಾಲಿಗೆ ಕಾರ್ಯಕಾರಿ ಸಮಿತಿಗೆ ಸದಸ್ಯರ ಆಯ್ಕೆ ನಡೆಸಲ್ಪಟ್ಟಿತು.
ಯು.ಬಾಲಚಂದ್ರ ಕಟಪಾಡಿ, ರತ್ನಾಕರ್ ಎ.ಶೆಟ್ಟಿ, ಮಾಧವ ಗಾಣಿಗ, ನಾಗರಾಜ್ ಗಾಣಿಗ, ಸುಷ್ಮಾ ರಾವ್, ರಚನಾ ವಿ.ಭಟ್ಕಳ್ ಮತ್ತಿತರರು ಮಾತನಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಂಸ್ಥೆಯ ಉನ್ನತಿಗೆ ಹಾರೈಸಿದರು.
ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಕೆ.ಶಾಂತಾರಾಮ ಮೂರ್ತಿ, ರಾಜೇಶ್ ಕುತ್ಪಾಡಿ, ದಿನೇಶ್ ರಾವ್ ಟಿ.ಎಸ್, ಗಂಗೊಳ್ಳಿ ಗೋಪಾಲಕೃಷ್ಣ ಗೋವಿಂದ ಗಾಣಿಗ, ವಿನಾಯಕ ಭಟ್ಕಳ, ದಿನೇಶ್ ಗಾಣಿಗ ಭಯಂದರ್, ರಮೇಶ್ ಎನ್.ಗಾಣಿಗ, ಕಾಳಿಂಗ ರಾವ್, ಗಂಗಾಧರ ಎನ್.ಗಾಣಿಗ, ಸಕ್ರೀಯ ಸದಸ್ಯರಾದ ವಿಜಯ ಜೆ.ಗಾಣಿಗ, ಶುಭ ಗಣೇಶ್ ಕುತ್ಪಾಡಿ, ಸುಮಾ ರಾಜೇಶ್ ಕುತ್ಪಾಡಿ, ಸಂಸ್ಥೆಯ ಮಾಜಿ ಹಾಲಿ ಪದಾಧಿಕಾರಿಗಳÀು, ಸದಸ್ಯರು ಸೇರಿದಂತೆ ಮಹಾನಗರದಲ್ಲಿನ ಗಾಣಿಗ ಬಾಂಧವರನೇಕರು ಹಾಜರಿದ್ದರು.
ಕುಲದೇವರಾದ ಶ್ರೀ ಗೋಪಲಕೃಷ್ಣ ದೇವರಿಗೆ ಸ್ತುತಿಸಿ ಮಹಾಸಭೆ ಆರಂಭಿಸಲಾಯಿತು. ವೀಣಾ ದಿನೇಶ್ ಗಾಣಿಗ ಪ್ರಾರ್ಥನೆಯನ್ನಾಡಿದರು. ಚಂದ್ರಶೇಖರ್ ಆರ್.ಗಾಣಿಗ ಸ್ವಾಗತಿಸಿದರು. ಬಿ.ವಿ ರಾವ್ ಸಭಾ ಕಲಾಪ ನಡೆಸಿದರು. ಜಗದೀಶ್ ಗಾಣಿಗ ಆಭಾರ ಮನ್ನಿಸಿದರು.